ಬಳ್ಳಾರಿ: ಗಣಿನಾಡಿನ ಅಲ್ಲಂ ಸುಮಂಗಳಮ್ಮ ಮಹಿಳಾ ಪದವಿ ಪೂರ್ವ ಕಾಲೇಜಿನ 15 ವಿದ್ಯಾರ್ಥಿನಿಯರು ಒಂದು ತಿಂಗಳ ಉಚಿತ ತೊಗಲುಗೊಂಬೆಯಾಟ ತರಬೇತಿ ಪಡೆದು, ಇಂದು ಬಾಪೂಜಿ ತೊಗಲುಗೊಂಬೆಯಾಟ ಪ್ರದರ್ಶನ ನೀಡಿದರು.
ಬಳ್ಳಾರಿಯಲ್ಲಿ ಡಿಸೆಂಬರ್ 7 ರಿಂದ ಜನವರಿ 7 ವರೆಗೆ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು (ವಿಶೇಷ ಘಟಕ ಯೋಜನೆ), ರಾಷ್ಟ್ರೀಯ ಜಾನಪದ ರಂಗೋತ್ಸವದ ಅಂಗವಾಗಿ ಒಂದು ತಿಂಗಳ ಕಾಲ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಯಿತು. ತರಬೇತಿ ಪಡೆದ ವಿದ್ಯಾರ್ಥಿನಿಯರು ಇಂದು ಪ್ರದರ್ಶನ ನೀಡಿದರು. ನಾಡೋಜ ಪ್ರಶಸ್ತಿ ಪುರಸ್ಕೃತರಾದ ಬೆಳಗಲ್ ವೀರಣ್ಣ ಮತ್ತು ಅವರ ತಂಡದ ಸಹಕಾರದಿಂದ ಈ ತರಬೇತಿ ನಡೆದಿದ್ದು ವಿಶೇಷ.
ಈ ಕುರಿತು ಮಾತನಾಡಿದ ವಿದ್ಯಾರ್ಥಿನಿ ಸಾಕ್ಷಿ, ಈ ರೀತಿಯ ಕಲೆಯ ಕುರಿತು ನಮಗೆ ತೊಗಲುಗೊಂಬೆ ಕಲಾವಿದರಾದ ಕೆ.ಗಂಗಾಧರ್ ಮತ್ತು ಸಾಯಿ ಕುಮಾರ್ ಅವರಿಂದ ಆಸಕ್ತಿ ಮೂಡಿತು. ಈ ಗೊಂಬೆಯಾಟ ಆಡಿಸುವುದರಿಂದ ಏಕಾಗ್ರತೆಯೂ ಬರುತ್ತೆ. ಒಂದು ತಿಂಗಳ ತರಬೇತಿ ಜೊತೆಗೆ ಉಪಹಾರವನ್ನೂ ಸಹ ನೀಡಿದ್ದಾರೆ. ಈ ಕಲೆಯಲ್ಲಿ ಬಹಳ ಆಸಕ್ತಿಯಿದ್ದು, ಇದನ್ನು ಮುಂದುವರಿಸಬೇಕು ಎಂದರು.
ತೊಗಲುಗೊಂಬೆಯಾಟ ಕಲಾವಿದ ಕೆ.ಗಂಗಾಧರ್ ಮಾತನಾಡಿ, ನಾಡೋಜ ಬೆಳಗಲ್ ವೀರಣ್ಣ ಅವರ ಸಲಹೆ, ಸೂಚನೆ ಮೇರೆಗೆ ಕಳೆದೊಂದು ತಿಂಗಳಿನಿಂದ ಈ ವಿದ್ಯಾರ್ಥಿನಿಯರಿಗೆ ಸಂಜೆ 4 ರಿಂದ 6 ಗಂಟೆವರೆಗೆ ತೊಗಲುಗೊಂಬೆಯಾಟದ ಬಗ್ಗೆ ಮಾಹಿತಿ ಮತ್ತು ಪ್ರಾಯೋಗಿಕವಾಗಿ ಹೇಳಿಕೊಟ್ಟಿದ್ದೇವೆ. ಪ್ರಥಮ ಬಾರಿಗೆ ಹೆಣ್ಣುಮಕ್ಕಳಿಗೆ ಹೇಳಿಕೊಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ನಂತರ ಮಾತನಾಡಿದ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲ ಡಾ. ಗೋವಿಂದರಾಜು, ನಾಡೋಜ ಬೆಳಗಲ್ ವೀರಣ್ಣನವರು ಹೆಣ್ಣುಮಕ್ಕಳಿಗೆ ತೊಗಲುಗೊಂಬೆಯಾಟ ಹೇಳಿಕೊಟ್ಟಿರುವುದು ಬಹಳ ಸಂತೋಷದ ವಿಚಾರ. ನಶಿಸಿ ಹೋಗುವ ಕಲೆಯನ್ನು ಉಳಿಸುವ ಕೆಲಸವನ್ನು ಬೆಳಗಲ್ ವೀರಣ್ಣ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.