ಬೆಳಗಾವಿ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಬೆಳಗಾವಿ ಉಪಚುನಾವಣೆ ಪ್ರಚಾರಕ್ಕೆ ಕರೆಯಿಸಲಿ. ಆಗ ರಾಹುಲ್ ಸಿಂಹವೋ, ನರಿಯೋ, ಕುರಿಯೋ ಆಮೇಲೆ ಗೊತ್ತಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಉಪಚುನಾವಣೆ ಫಲಿತಾಂಶ ಬಳಿಕ ಬಿಜೆಪಿ ಸರ್ಕಾರ ಕುಸಿಯುತ್ತದೆ ಎಂಬ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಣದೀಪ್ ಸಿಂಗ್ ಸುರ್ಜೇವಾಲಗೆ ಕರ್ನಾಟಕನೇ ಮರೆತು ಹೋಗಿದೆ. ಸುರ್ಜೇವಾಲನಂತಹ ಭಟ್ಟಂಗಿಗಳು ರಾಹುಲ್ ಗಾಂಧಿಯನ್ನು ಹೊಗಳಿ ಹಾಳು ಮಾಡಿದ್ರು. ರಾಹುಲ್ ಕಾಲಿಟ್ಟ ಎಲ್ಲಾ ಕಡೆ ಕಾಂಗ್ರೆಸ್ ಸೋತಿದೆ. ಅವರನ್ನು ಬೆಳಗಾವಿ ಉಪಚುನಾವಣೆಗೆ ಕರೆಯಿಸಲಿ ಎಂದು ಸವಾಲು ಹಾಕಿದರು.
ನಿರೀಕ್ಷೆ ಮೀರಿ ಬೆಳಗಾವಿ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಇದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ, ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಐದು ವರ್ಷ ಸಿಎಂ ಆದರೂ ಸಿದ್ದರಾಮಯ್ಯಗೆ ಏನೂ ಕೆಲಸ ಮಾಡಲಾಗಲಿಲ್ಲ. ಸಿದ್ದರಾಮಯ್ಯ ತಮ್ಮ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ರಿಜೆಕ್ಟ್ ಆದ್ರು. ಜೈಲಿನಿಂದ ಹೊರಬಂದು ಬೇಲ್ನಲ್ಲಿರೋ ಡಿಕೆಶಿ ಇಂದು ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ತಮ್ಮ ಕ್ಷೇತ್ರದಿಂದ ತಿರಸ್ಕಾರಗೊಂಡ ಸಿದ್ದರಾಮಯ್ಯ, ಅಭಿವೃದ್ಧಿ ಬಗ್ಗೆ ಮಾತಾಡ್ತಾರೆ. ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಬೇಡ ಅಂತಾ ಜನ ತೀರ್ಮಾನಿಸಿದ್ದಾರೆ. ಅದೇ ರೀತಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಬೇಡ ಅಂತಾ ಇಲ್ಲಿನ ಜನರು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಸೋಲು ಒಪ್ಪಿಕೊಳ್ಳಬೇಕಿತ್ತು. ಬಾಯಿಗೆ ಬಂದ ಹಾಗೇ ಮಾತನಾಡಲು ಉಪಚುನಾವಣೆ ವೇದಿಕೆ ಬಳಸುತ್ತಿರೋದು ದುರ್ದೈವ. ಎಲ್ಲಾ ವರ್ಗ, ಜಾತಿಯ ಜನ ಬಿಜೆಪಿ ಪರ ನಿಂತಿದ್ದು, ಕಾಂಗ್ರೆಸ್ಗೆ ನುಂಗಲಾರದ ತುತ್ತಾಗಿದೆ ಎಂದು ಈಶ್ವರಪ್ಪ ಹೇಳಿದ್ರು.
ಇಡೀ ಕುರುಬ ಸಮಾಜ ಬಿಜೆಪಿ ಬೆಂಬಲಿಸಿದ್ದು, ಸಿದ್ದರಾಮಯ್ಯಗೆ ತಲೆನೋವು ತಂದಿದೆ. ಕಳೆದ ಬಾರಿ 17 ಉಪಚುನಾವಣೆಯಲ್ಲೂ ಇಡೀ ಕುರುಬ ಸಮಾಜ ಬಿಜೆಪಿ ಬೆಂಬಲಿಸಿತ್ತು. ಪಂಚಮಸಾಲಿ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ರು. ಶ್ರೀಗಳ ನೇತೃತ್ವದಲ್ಲಿ ಕುರುಬ ಸಮಾಜದ ಎಸ್ಟಿ ಹೋರಾಟಕ್ಕೆ ಎಲ್ಲಾ ಪಕ್ಷದ ನಾಯಕರು ಬೆಂಬಲ ಕೊಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಮೊದಲು ಬರ್ತೀನಿ ಎಂದು ಹೇಳಿ, ಆಮೇಲೆ ಕರೆದೇ ಇಲ್ಲ ಅಂದ್ರು. ಬಾಗಲಕೋಟೆಯಲ್ಲಿ ನಿರೀಕ್ಷೆ ಮೀರಿ ಕುರುಬ ಸಮಾಜದ ಸಮಾವೇಶ ಆಯ್ತು. ಅದನ್ನ ನೋಡಿ ಎಸ್ಟಿ ಹೋರಾಟದ ಹಿಂದೆ ಆರ್ಎಸ್ಎಸ್ ಇದೆ ಅಂತಾ ಸಿದ್ದರಾಮಯ್ಯ ಆರೋಪಿಸಿದರು ಎಂದರು.
ಡಿಕೆಶಿ, ಸಿದ್ದರಾಮಯ್ಯ ಖಾಲಿ ಕೊಡ:
ವೀರಶೈವ ಲಿಂಗಾಯತ ಸಮಾಜ ಒಡೆಯಲು ಮುಂದಾಗಿದ್ದಕ್ಕೆ ಈಗಾಗಲೇ ಸಿದ್ದರಾಮಯ್ಯಗೆ ತಕ್ಕ ಪ್ರಸಾದ ಸಿಕ್ಕಿದೆ. ಗೋರಕ್ಷಣೆ ಮಾಡ್ತಾರೆ ಅಂತಾ ಯುವಕರ ಕಗ್ಗೊಲೆ ಆಯ್ತು. ಗೋಹತ್ಯೆ ಮಾಡುತ್ತಿರೋರಿಗೆ ಬೆಂಬಲ ಕೊಟ್ಟೋರು, ವೀರಶೈವ ಲಿಂಗಾಯತ ಸಮಾಜವನ್ನು ಒಡೆದರು. ಹಿಂದೂ ಮುಸ್ಲಿಂರನ್ನು ದೂರ-ದೂರ ಮಾಡಿದ್ದಾರೆ. ಖಾಲಿ ಕೊಡ ತುಂಬ ಶಬ್ದ ಮಾಡುತ್ತೆ, ತುಂಬಿದ ಕೊಡ ಶಬ್ದ ಮಾಡಲ್ಲ. ಡಿಕೆಶಿ, ಸಿದ್ದರಾಮಯ್ಯ ಕೂಡ ಖಾಲಿ ಕೊಡ ಆಗಿದ್ದಾರೆ. ಖಾಲಿ ಕೊಡವನ್ನು ಮೊದಲು ಜನ ನಂಬಿದ್ರು, ಆದ್ರೆ ಜನರಿಗೆ ಅವರು ದ್ರೋಹ ಮಾಡಿದ್ದಾರೆ ಎಂದು ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಏಪ್ರಿಲ್ 17 ರಂದು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ನಿಂದ ಸತೀಶ್ ಜಾರಕಿಹೊಳಿ ಅಭ್ಯರ್ಥಿಯಾಗಿದ್ದರೆ, ಬಿಜೆಪಿಯಿಂದ ದಿ. ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಅಖಾಡದಲ್ಲಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ಬೆಳಗಾವಿ ಕ್ಷೇತ್ರ ಉಪಚುನಾವಣೆ ಎದುರಿಸುತ್ತಿದೆ.
ಓದಿ: ನೀಡಿದ ಭರವಸೆ ಈಡೇರಿಸಿ: ಮುಖ್ಯಮಂತ್ರಿಗೆ ಪತ್ರ ಬರೆದ ಸಾರಿಗೆ ನೌಕರರು