ನವದೆಹಲಿ: ಎಂಎಸ್ಎಂಇಗಳು ಸೇರಿದಂತೆ ಕೊರೊನಾ ವೈರಸ್ ಪೀಡಿತ ವ್ಯವಹಾರಗಳಿಗೆ ಉತ್ತೇಜನ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ಸಾಧ್ಯವಾಗದಿರಲು ದತ್ತಾಂಶದ ಅಲಭ್ಯತೆಯೇ ಮುಖ್ಯ ಕಾರಣ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗರ್ಗ್ ಹೇಳಿದ್ದಾರೆ.
ಪ್ರತಿ ವ್ಯವಹಾರಕ್ಕೆ ಒಂದು ವಿಶಿಷ್ಟವಾದ ಐಡಿ ನಿಯೋಜಿಸುವ ತುರ್ತು ಅವಶ್ಯಕತೆಯಿದೆ. ಏಕೆಂದರೆ, ಇದು ಪ್ರಮುಖ ಆರ್ಥಿಕ ಕಾರ್ಯಕ್ಷಮತೆಯ ಡೇಟಾ ಸಂಗ್ರಹಿಸಲು ನೆರವಾಗುತ್ತದೆ. ವ್ಯವಹಾರದ ಎಲ್ಲ ಬ್ಯಾಂಕ್ ಖಾತೆಗಳನ್ನು ಆ ಐಡಿಗೆ ಲಿಂಕ್ ಮಾಡಲು ಅನುಕೂಲವಾಗುತ್ತದೆ ಎಂದು ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ಎಂಎಸ್ಎಂಇಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಲು ಸರ್ಕಾರವು ಅಸಮರ್ಥ ಆಗಿರುವುದಕ್ಕೆ ಪ್ರಮುಖ ಕಾರಣ ಎಂದರೆ ವ್ಯವಹಾರದ ಲಭ್ಯತೆ, ಮೌಲ್ಯವರ್ಧನೆ, ಕಾರ್ಯನಿರತ ಕಾರ್ಮಿಕರ ಸಂಖ್ಯೆ, ಉತ್ಪಾದನೆಯ ನಷ್ಟ ಮತ್ತು ಲಾಭದ ದತ್ತಾಂಶದಂತಹ ಮಾಹಿತಿಯ ಕೊರತೆ. ವ್ಯವಹಾರದ ಐಡಿಯ ವ್ಯವಸ್ಥೆಯನ್ನು ಸ್ಥಾಪಿಸಿ ಮಹತ್ವದ ವ್ಯವಹಾರ ಡೇಟಾವನ್ನು ಇದರೊಂದಿಗೆ ಜೋಡಿಸುವ ತುರ್ತು ಅವಶ್ಯಕತೆಯಿದೆ ಎಂದು ಸಲಹೆ ನೀಡಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ವಿಧಿಸಲಾಗಿರುವ 40 ದಿನಗಳ ರಾಷ್ಟ್ರವ್ಯಾಪಿ ಲಾಕ್ಡೌನ್ನಿಂದ ಭಾರತದ ಆರ್ಥಿಕತೆಗೆ ಎರಡನೇ ಪರಿಹಾರ ಪ್ಯಾಕೇಜ್ ಸಿದ್ಧತೆಯ ಹೊಣೆ ಹಣಕಾಸು ಸಚಿವಾಲಯ ಹೊತ್ತುಕೊಂಡಿದೆ.
ಜನರ ಜೀವನ ರಕ್ಷಿಸಲು ಸರ್ಕಾರ ಆದೇಶಿಸಿರುವ ಆರ್ಥಿಕ ಲಾಕ್ಡೌನ್ ಬ್ಯಾಂಕ್ಗಳ ವ್ಯವಹಾರ ಸಾಲಗಳ ಬಂಡವಾಳವನ್ನು ಕುಂಠಿತಗೊಳಿಸಿದೆ ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಹೇಳಿದ್ದಾರೆ.
ಪ್ರಯಾಣ, ಪ್ರವಾಸೋದ್ಯಮ, ಆತಿಥ್ಯ, ನಿರ್ಮಾಣ, ಸಾರಿಗೆ, ಚಿಲ್ಲರೆ ವ್ಯಾಪಾರ, ಮನರಂಜನೆ, ಕ್ರೀಡೆಗಳಲ್ಲಿನ ಅನೇಕ ವ್ಯವಹಾರಗಳು ವಿಫಲವಾಗುತ್ತವೆ. ಲಾಭದಾಯಕ ಆಘಾತಗಳನ್ನು ಅನುಭವಿಸುವುದರಿಂದ ಅವರ ನಿಷ್ಕ್ರಿಯ ಸಾಲದ ಪ್ರಮಾಣ ದ್ವಿಗುಣಗೊಳಬಹುದು ಎಂದು ಎಚ್ಚರಿಸಿದ್ದಾರೆ.
ಹೂಡಿಕೆ ದರ್ಜೆಯ ವ್ಯವಹಾರಗಳಿಗೆ ನೇರವಾಗಿ ಸಾಲ ನೀಡುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಯೋಚಿಸಬೇಕಾದ ಸಮಯ ಇದಾಗಿದೆ ಎಂದು ಗರ್ಗ್ ಸಲಹೆ ನೀಡಿದರು.