ಮೈಸೂರು: ಕಾಡು ಹಂದಿಯ ಬೇಟೆಯಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಂಚಾರಿ ದಳದ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಮೈಸೂರು ತಾಲೂಕು ಸತಗಳ್ಳಿ ನಿವಾಸಿಗಳಾದ ಆಟೋ ಚಾಲಕ ಮಂಜುನಾಥ್(24), ಮಂಜು(26) ಬಂಧಿತ ಆರೋಪಿಗಳು.
![mysr](https://etvbharatimages.akamaized.net/etvbharat/prod-images/kn-mys-4-5-boar-news-keshav-ka10003_16052019144819_1605f_1557998299_157.jpg)
ಎರಡು ಕಾಡುಹಂದಿಗಳನ್ನು ಬೇಟೆಯಾಡಿ ಹಿಂದಿರುಗುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿ ಆರೋಪಿಗಳನ್ನು ಹಾಗೂ ವಾಹನದಲ್ಲಿದ್ದ 3 ಪ್ಲಾಸ್ಟಿಕ್ ಬಲೆಗಳು ಮತ್ತು ಎರಡು ಕಾಡುಹಂದಿಗಳನ್ನು ವಶಕ್ಕೆ ಪಡೆದಿದ್ದಾರೆ. ಸೂಕ್ತ ಮಾಹಿತಿ ದೊರೆತ ನಂತರ ನಂಜನಗೂಡು ತಾಲೂಕಿನ ದಿಡ್ಡಹಳ್ಳಿ ಗ್ರಾಮದ ಸಮೀಪ ಸಂಚಾರಿ ದಳದ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ವೈಲ್ಡ್ ಲೈಫ್ ಪ್ರೊಟೆಕ್ಷನ್ ಕಾಯ್ದೆ 1972ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 200 ಸಿಆರ್ಪಿಸಿ ಪ್ರಕಾರ ನಂಜನಗೂಡು ಘನ ನ್ಯಾಯಾಲಯದ ನ್ಯಾಯಾಧೀಶರ ಅನುಮತಿ ಪಡೆದು ಆರೋಪಿಗಳನ್ನು ವಲಯಾಧಿಕಾರಿಗೆ ವಹಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಮೈಸೂರು ಅರಣ್ಯ ಸಂಚಾರಿ ದಳದ ಪ್ರಭಾರ ಪಿಎಸ್ಐ ರಮೇಶ್ ಎಂ.ಬಿ. ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.