ಸೇಡಂ(ಕಲಬುರಗಿ): ಸ್ಥಳೀಯ ಪಶು ಆಸ್ಪತ್ರೆಗೆ ಭೇಟಿ ನೀಡಿದ ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌವ್ಹಾಣ್, ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಗುಡುಗಿದರು.
ಬಿಜೆಪಿ ಪಕ್ಷದ ಕಲಬುರಗಿ ಜಿಲ್ಲಾ ವಿಭಾಗೀಯ ಪ್ರಮುಖರ ಸಭೆ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದ ವೇಳೆ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಗೆ ಆಗಮಿಸುತ್ತಲೇ ಸ್ವಚ್ಛತೆ ಇಲ್ಲದಿರುವುದು, ನಿರುಪಯುಕ್ತ ವಸ್ತುಗಳನ್ನು ಬೇಕಾಬಿಟ್ಟಿ ಬಿಸಾಡಿರುವುದನ್ನು ಕಂಡ ಸಚಿವರು, ಆಸ್ಪತ್ರೆಯನ್ನು ಸ್ಚಚ್ಛವಾಗಿಟ್ಟುಕೊಳ್ಳಲು ಆಗಲ್ವಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಹಾಯಕ ನಿರ್ದೇಶಕ ಮಾರುತಿ ನಾಯಕ, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇರುವ ಬಗ್ಗೆ ತಿಳಿದರು. ಇದೇ ವೇಳೆ ಸಸಿಗೆ ನೀರೆರೆದ ಪ್ರಭು ಚೌವ್ಹಾಣ್, ವೈದ್ಯಕೀಯ ಸೇವೆ, ಔಷಧಗಳ ಸಂಗ್ರಹ ಕುರಿತು ಮಾಹಿತಿ ಪಡೆದರು.