ಅನಂತಪುರ (ಆಂಧ್ರ ಪ್ರದೇಶ): ಇಲ್ಲಿನ ತಾಯಿ-ಮಗಳಿಗೆ ಒಂದೇ ಆಧಾರ್ ನಂಬರ್ ನೀಡಿದ್ದ ಪ್ರಕರಣ ಇದೀಗ ಈಟಿವಿ ಭಾರತ ವರದಿಯಿಂದಾಗಿ ಸುಖಾಂತ್ಯ ಕಂಡಿದೆ. ಅಂತಿಮವಾಗಿ ಇಬ್ಬರಿಗೂ ಬೇರೆ ಬೇರೆ ಸಂಖ್ಯೆ ನೀಡಲಾಗಿದೆ.
ಸುಬ್ಬಮ್ಮ ಮತ್ತು ಅವರ ಮಗಳು ಜಯಮ್ಮ 2011ರಲ್ಲಿ ತಮ್ಮ ಆಧಾರ್ ಕಾರ್ಡ್ಗಾಗಿ ನೋಂದಾಯಿಸಿಕೊಂಡಿದ್ದರು. ಎರಡು ಆಧಾರ್ ಕಾರ್ಡ್ಗಳಲ್ಲಿನ ಎಲ್ಲಾ ವಿವರಗಳು ಸರಿಯಾಗಿದ್ದರೂ, ಅವರಿಗೆ ಕ್ಲೋನ್ ಐಡಿಗಳನ್ನು ನೀಡಲಾಯಿತು. ಆದರೆ ಒಂದೇ ನಂಬರ್ನಿಂದ ಕೂಡಿದ್ದ ಆಧಾರ್ ಕಾರ್ಡ್ ನೀಡಿದ್ದರಿಂದ ಹಲವು ಸರ್ಕಾರಿ ಸೌಲಭ್ಯಗಳು ಹಾಗೂ ಇತರೆ ಕಾರ್ಯಕ್ಕೆ ತೀವ್ರ ತೊಂದರೆಯಾಗಿತ್ತು.
ಅಲ್ಲದೆ ದಿನಗೂಲಿಗಾಗಿ ನರೇಗಾ ಯೋಜನೆಗೆ ತಮ್ಮ ಹೆಸರು ನೋಂದಣಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು. ಈ ಸಮಸ್ಯೆ ಕುರಿತು ‘ಈಟಿವಿ ಭಾರತ’ ವರದಿ ಪ್ರಕಟಿಸಿತ್ತು. ನಂತರ ಅದೇ ಗ್ರಾಮದ ಸಾಫ್ಟ್ವೇರ್ ಇಂಜಿನಿಯರ್ ಶ್ರೀನಾಥ್ ರೆಡ್ಡಿ ಅವರು ಅಧಿಕಾರಿಗಳೊಂದಿಗೆ ಮತ್ತೆ ಈ ವಿಚಾರ ಪ್ರಸ್ತಾಪಿಸಿ ತಾಯಿ ಮಗಳ ನೆರವಿಗೆ ಬಂದಿದ್ದರು.
ಈ ಸಂಬಂಧ ರೆಡ್ಡಿ ವಿಡಿಯೋವೊಂದನ್ನ ಮಾಡಿ ಹಾಗೂ ಈಟಿವಿ ಭಾರತದಲ್ಲಿ ಪ್ರಕಟಗೊಂಡಿದ್ದ ಸುದ್ದಿಯನ್ನು ಯುಐಡಿಎಐ (ಆಧಾರ್) ಅಧಿಕಾರಿಗಳಿಗೆ ಇ-ಮೇಲ್ ಮಾಡಿದ್ದರು.
ಇದಾದ ಕೆಲ ದಿನಗಳಲ್ಲಿ ದೆಹಲಿಯಿಂದ ಅಮರಾವತಿವರೆಗಿನ ಅಧಿಕಾರಿಗಳು ಈ ಪ್ರಕರಣಕ್ಕೆ ಸ್ಪಂದಿಸಿದ್ದು, ಸುಬ್ಬಮ್ಮ ಹಾಗೂ ಜಯಮ್ಮ ಅವರ ಮನೆಗೆ ಆಗಮಿಸಿ ಬಯೋಮೆಟ್ರಿಕ್ ವಿವರ ಸಂಗ್ರಹಿಸಿ ಬೇರೆ ಬೇರೆ ಯುಐಡಿಎಐ ಸಂಖ್ಯೆ ನೀಡಿದ್ದಾರೆ.
ಓದಿ: ಹಗರಣ ಬಯಲಿಗೆಳೆದ 'ಈಟಿವಿ ಭಾರತ' ವರದಿಗಾರನ ವಿರುದ್ಧ FIR ಏಕೆ?: ತೇಜಸ್ವಿ ಯಾದವ್ ಆಕ್ರೋಶ