ಚೆನ್ನೈ: ಮಾಜಿ ಮುಖ್ಯಮಂತ್ರಿ ಇ ಪಳಿನಿಸ್ವಾಮಿ ಎಐಎಡಿಎಂಕೆಯಲ್ಲಿ ಪ್ರಾಬಲ್ಯಕ್ಕಾಗಿ ನಡೆದ ಹೋರಾಟದಲ್ಲಿ ತಮ್ಮ ಪ್ರತಿಸ್ಪರ್ಧಿ ಒ ಪನ್ನೀರಸೆಲ್ವಂ ಅವರನ್ನು ಕಾನೂನು ಹೋರಾಟದಲ್ಲಿ ಸೋಲಿಸಿ, ಎಐಎಡಿಎಂಕೆಯ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದಾರೆ. ಇಪಿಎಸ್ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದ ಪಕ್ಷದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಎಐಎಡಿಎಂಕೆ ಏಕೀಕೃತ ನಾಯಕತ್ವಕ್ಕೆ ಮರಳಿದೆ.
ದಿವಂಗತ ಮುಖ್ಯಮಂತ್ರಿ ಎಂಜಿ ರಾಮಚಂದ್ರನ್ ಅವರು ಸ್ಥಾಪಿಸಿದ ಎಐಎಡಿಎಂಕೆಯ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ಮುಂದುವರಿಯಲು ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ನ ಆದೇಶವನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ. ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್ ರಾಯ್ ಅವರ ಪೀಠವು ಜನವರಿ 12 ರಂದು ತೀರ್ಪನ್ನು ಕಾಯ್ದಿರಿಸಿತ್ತು. ಪನೀರ್ಸೆಲ್ವಂ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಜುಲೈ 11, 2022 ರ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಪಕ್ಷದ ಬೈಲಾಗಳಿಗೆ ಮಾಡಿದ ತಿದ್ದುಪಡಿಗಳಿಗೆ ಸಂಬಂಧಿಸಿದ ಮನವಿಗಳ ಬ್ಯಾಚ್ ಮೇಲೆ ತೀರ್ಪು ಬಂದಿದೆ.
ಕಳೆದ ಜುಲೈ 11 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪಕ್ಷದ ಹಂಗಾಮಿ ಪ್ರಧಾನಕಾರ್ಯದರ್ಶಿಯಾಗಿ ಇಪಿಎಸ್ ಅವರನ್ನು ಆಯ್ಕೆ ಮಾಡಿತ್ತು. ಒಪಿಎಸ್ ಬಣದ ಕೆಲ ಸದಸ್ಯರನ್ನು ಹೊರಹಾಕಲಾಗಿತ್ತು. ಪಕ್ಷದ ಈ ನಿರ್ಧಾರವನ್ನು ಪ್ರಶ್ನಿಸಿ, ಪನ್ನೀರಸೆಲ್ವಂ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಪಿಎಸ್ ಬೆಂಬಲಿಗರ ಮನವಿಯನ್ನು ವಜಾಗೊಳಿಸಿದೆ. ಜಯಲಲಿತಾ ಅವರನ್ನು ಎಐಎಡಿಎಂಕೆಯ ಖಾಯಂ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಹಿಂತೆಗೆದುಕೊಳ್ಳುವ ಮತ್ತು ಇತರ ನಿರ್ಣಯಗಳನ್ನು ನ್ಯಾಯಾಲಯವು ಎತ್ತಿಹಿಡಿದಿದೆ.
ಪಕ್ಷದ ಬಹುಪಾಲು ಪದಾಧಿಕಾರಿಗಳು ಮತ್ತು ಶಾಸಕರು ಇ ಪಳಿನಿಸ್ವಾಮಿ ಅವರನ್ನು ಬೆಂಬಲಿಸಿದ್ದಾರೆ. ಆದರೆ, ಒಪಿಎಸ್ ಅವರು ಹಿನ್ನಡೆ ಅನುಭವಿಸಿದ್ದಾರೆ. ಪಕ್ಷದ ವೇದಿಕೆಗಳಲ್ಲಿ ತಮ್ಮ ಬೆಂಬಲವನ್ನು ಸಾಬೀತುಪಡಿಸದೇ ರಾಜಕೀಯದ ಲಾಭಕ್ಕಾಗಿ ನ್ಯಾಯಾಂಗವನ್ನು ಬಳಸಿಕೊಂಡಿದ್ದಾರೆ ಎಂದು ಒಪಿಎಸ್ ಅವರನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಷ್ಟೇ ಅಲ್ಲ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಇಂದು ಈ ಮಹತ್ವದ ತೀರ್ಪು ನೀಡಿದೆ. ಈ ಸರ್ವೋಚ್ಚ ನ್ಯಾಯಾಲಯದ ತೀರ್ಪಿನೊಂದಿಗೆ, ಇಪಿಎಸ್ ಪಾಳಯದಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿದರೆ, OPS ರ ರಾಜಕೀಯ ಭವಿಷ್ಯವು ಅಸ್ತವ್ಯಸ್ತಗೊಂಡಿದೆ.
ಇದು ಪಕ್ಷಕ್ಕೆ ಸಂದ ಜಯ ಎಂದ ಪಳಿನಿಸ್ವಾಮಿ: "ಇದು ಆಡಳಿತಾರೂಢ ಡಿಎಂಕೆಯ ಬಿ - ಟೀಮ್ ಆಗಿ ಕಾರ್ಯನಿರ್ವಹಿಸುತ್ತಿದ್ದವರ ಮುಖವಾಡವನ್ನು ಬಿಚ್ಚಿಟ್ಟಿದೆ. ಎಐಎಡಿಎಂಕೆಯ 1.5 ಕೋಟಿಗೂ ಹೆಚ್ಚು ಕಾರ್ಯಕರ್ತರು ಸುಪ್ರೀಂ ಕೋರ್ಟ್ ತೀರ್ಪಿನಿಂದ ಹರ್ಷಗೊಂಡಿದ್ದಾರೆ. ಜಯಲಲಿತಾ ದೇವಸ್ಥಾನದಲ್ಲಿ ನನ್ನ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ," ಎಂದು ಇ ಪಳಿನಿಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಧುರೈನಲ್ಲಿ ಮಾಜಿ ಸಚಿವ ಸಹೋದ್ಯೋಗಿ ಆರ್.ಬಿ.ಉದಯಕುಮಾರ್ ಅವರ ಕುಟುಂಬದ ವಿವಾಹದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾಧ್ಯಮಗಳಿಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: ಸ್ನೇಹಿತೆಯ ಮಗಳ ಮೇಲೆ ಅತ್ಯಾಚಾರ : ಆರೋಪಿಗೆ 10 ವರ್ಷ ಜೈಲು ಶಿಕ್ಷೆ