ನವದೆಹಲಿ : ರಷ್ಯಾ ಅಧ್ಯಕ್ಷ ವಾಡ್ಲಿಮೀರ್ ಪುಟಿನ್ ಇಂದು ದೆಹಲಿಗೆ ಭೇಟಿ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್.ಜೈಶಂಕರ್ ರಷ್ಯಾದ ತಮ್ಮ ಸಹವರ್ತಿಗಳೊಂದಿಗೆ 2 + 2 ಸಚಿವರ ಮಟ್ಟದ ಮಾತುಕತೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಎಸ್.ಜೈಶಂಕರ್, ಭಾರತ-ರಷ್ಯಾ ಪಾಲುದಾರಿಕೆ ಜಗತ್ತಿನಲ್ಲಿ ಎರಡು ದೇಶಗಳ ನಡುವಿನ ಸಂಬಂಧಗಳು ಗಮನಾರ್ಹ ಮತ್ತು ಪ್ರಬಲವಾಗಿವೆ. ಇದು ವಿಶೇಷ ಮತ್ತು ವಿಶಿಷ್ಟವಾಗಿದೆ. ನಮ್ಮ ಇಂದಿನ ಚರ್ಚೆಗಳು ಬಹಳ ಫಲಪ್ರದವಾಗುತ್ತವೆ ಎಂದು ನನಗೆ ವಿಶ್ವಾಸವಿದೆ. ಎರಡು ವರ್ಷಗಳ ನಂತರ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆ ಇಂದು ನಡೆಯುತ್ತಿದೆ ಎಂದು ಹೇಳಿದ್ದಾರೆ.
ನಮ್ಮ ದ್ವಿಪಕ್ಷೀಯ ಸಂಬಂಧಗಳು ಹಾಗೂ ಜಾಗತಿಕ ಪರಿಸ್ಥಿತಿ ಬಗ್ಗೆ ಚರ್ಚಿಸಲು ನಮಗೆ ಅವಕಾಶವಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಅವರು ಹೆಚ್ಚಿನ ನಂಬಿಕೆ ಹಾಗೂ ವಿಶ್ವಾಸದ ಸಂಬಂಧವನ್ನು ಹೊಂದಿದ್ದಾರೆ. ಶೃಂಗಸಭೆಯಿಂದ ಕೆಲವು ಮಹತ್ವದ ಫಲಿತಾಂಶಗಳನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಜೈ.ಶಂಕರ್ ತಿಳಿಸಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳು ಮತ್ತು ದೇಶಗಳ ಸ್ಥಿತಿಯಿಂದ ನಾವು ತುಂಬಾ ತೃಪ್ತರಾಗಿದ್ದೇವೆ. ಭಾರತ ಮತ್ತು ರಷ್ಯಾದ ಟು ಪ್ಲಸ್ ಟು ಮಟ್ಟದ ಸಭೆಯಲ್ಲಿ ಪರಸ್ಪರ ಹಿತಾಸಕ್ತಿಯ ರಾಜಕೀಯ ಹಾಗೂ ರಕ್ಷಣಾ ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಕಳೆದ ತಿಂಗಳು ಮಾಹಿತಿ ನೀಡಿತ್ತು.
ಇಂದು ಬೆಳಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ನಿಯೋಗದೊಂದಿಗೆ ದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಭೇಟಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 21ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆಯನ್ನು ನಡೆಸಲಿದ್ದಾರೆ.