ಮುಂಬೈ(ಮಹಾರಾಷ್ಟ್ರ): ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದೇಶದ ಹಲವೆಡೆ ದಾಳಿ ನಡೆಸಿರುವಂತೆ ಮಹಾರಾಷ್ಟ್ರದ ಹಲವು ನಗರಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಡಿಬಿ ರಿಯಾಲಿಟಿ (DB Reality) ಸೇರಿದಂತೆ ಹಲವು ನಿರ್ಮಾಣ ಕಂಪನಿಗಳ ವಿರುದ್ಧ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂಬೈ, ಪುಣೆ, ಸತಾರಾ, ದೌಂಡ್ ಮತ್ತು ಕೊಲ್ಹಾಪುರದಲ್ಲಿರುವ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದ್ದು, ಮಹಾರಾಷ್ಟ್ರ ಹಿರಿಯ ಸಚಿವರೊಬ್ಬರಿಗೆ ನಿಕಟ ಸಂಪರ್ಕದಲ್ಲಿರುವ ಉದ್ಯಮಿಗಳ ಕಂಪನಿಗಳ ಮೇಲೆ ದಾಳಿ ನಡೆಸಲಾಗಿದೆ.
ಈ ಮಧ್ಯೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಂಬಂಧಿಯೋರ್ವರು ನಡೆಸುತ್ತಿದ್ದ ಜಾರಂದೇಶ್ವರ ಸಕ್ಕರೆ ಕಾರ್ಖಾನೆಯ ಮೇಲೆಯೂ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್ ರೇಡ್ ನಡೆಸುವುದು ಅವರ ಕರ್ತವ್ಯ ಎಂದಿದ್ದು, ಈಗ ನಡೆದಿರುವ ದಾಳಿ ರಾಜಕೀಯ ಪ್ರೇರಿತವಾಗಿದೆ. ನಾನು ತೆರಿಗೆ ಕಟ್ಟುತ್ತಿದ್ದೇವೆ. ನಮಗೆ ತೆರಿಗೆ ಕಟ್ಟುವುದು ಹೇಗೆ ಎಂಬುದು ಗೊತ್ತಿದೆ ಎಂದರು.
ನನ್ನ ಸಹೋದರಿಯ ಮನೆಯ ಮೇಲೆಯೂ ಕೂಡಾ ದಾಳಿ ನಡೆಸಲಾಗಿದೆ. ರಾಜಕೀಯ ಅಧಃಪತನಗೊಳ್ಳುತ್ತಿದೆ. ಸರ್ಕಾರದ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನನ್ನ ಸಹೋದರಿ ಎಂಬ ಕಾರಣಕ್ಕೆ ದಾಳಿ ನಡೆಸಲಾಗಿದೆ. ಕೇಂದ್ರವು ಕೇಂದ್ರದ ಕೆಲಸವನ್ನು ಮಾಡಬೇಕು ಮತ್ತು ರಾಜ್ಯಗಳು ರಾಜ್ಯದ ಕೆಲಸವನ್ನು ಮಾಡುತ್ತವೆ ಎಂದು ಪವಾರ್ ಹೇಳಿದ್ದಾರೆ.
ಇದನ್ನೂ ಓದಿ: ಐಟಿ ದಾಳಿ: ಅಧಿಕಾರಿಗಳು ತಮ್ಮ ಕೆಲಸ ಮಾಡಿದ್ದಾರೆ- ಗೃಹ ಸಚಿವ ಆರಗ ಜ್ಞಾನೇಂದ್ರ