ಶೋಪಿಯಾನ್ (ಶ್ರೀನಗರ) : ಕಳೆದ ಕೆಲ ದಿನಗಳಿಂದ ಕಣಿವೆ ನಾಡಿನಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿದೆ. ಮೇಲಿಂದ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ನಿನ್ನೆ ಕೂಡ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಓರ್ವ ಸೇನಾಧಿಕಾರಿ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಂಡಿರುವ ಸೇನೆ, ಏಳು ಉಗ್ರರನ್ನ ಹೊಡೆದುರುಳಿಸಿದೆ.
ಕಳೆದ 30 ಗಂಟೆಗಳಲ್ಲಿ ಜಮ್ಮು-ಕಾಶ್ಮೀರದ ಶೋಪಿಯಾನ್, ಪೂಂಚ್, ಅನಂತನಾಗ್ ಹಾಗೂ ಬಂಡಿಪುರ ಸೇರಿ ವಿವಿಧ ಪ್ರದೇಶಗಳಲ್ಲಿ ಉಗ್ರರನ್ನ ಬೇಟೆಯಾಡಿರುವ ಯೋಧರು, ಅವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಶೋಪಿಯಾನ್ ಪ್ರದೇಶದಲ್ಲೇ ಭಯೋತ್ಪಾದಕ ಮುಕ್ತಾರ್ ಶಾ ಸೇರಿ ಮೂವರು ಬಲಿಯಾಗಿದ್ದಾರೆ.
ಇದನ್ನೂ ಓದಿರಿ: ಉಗ್ರರ ವಿರುದ್ಧದ ಕಾರ್ಯಾಚರಣೆ: ಸೇನಾಧಿಕಾರಿ, ನಾಲ್ವರು ಯೋಧರು ಹುತಾತ್ಮ
ಸೇನಾಧಿಕಾರಿ, ನಾಲ್ವರು ಯೋಧರು ಹುತಾತ್ಮ
ಪೂಂಚ್ ಜಿಲ್ಲೆಯ ಸುರಂಕೋಟೆ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಓರ್ವ ಸೇನಾಧಿಕಾರಿ(JCO) ಸೇರಿ ಐವರು ಯೋಧರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಇದರ ಬೆನ್ನಲ್ಲೇ ಶೋಪಿಯಾನ್ ಜಿಲ್ಲೆಯಲ್ಲಿನ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಉಗ್ರರನ್ನ ಪತ್ತೆ ಹಚ್ಚುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದರು. ಈ ವೇಳೆ ಶರಣಾಗುವಂತೆ ಸೂಚನೆ ನೀಡಿದ್ದರು. ಇದಕ್ಕೆ ಪ್ರತಿರೋಧ ಒಡ್ಡಿರುವ ಕಾರಣ ಗುಂಡಿನ ದಾಳಿ ನಡೆಸಿ, ಮೂವರನ್ನ ಹತ್ಯೆಗೈದಿದ್ದಾರೆ.