ರಾಜೌರಿ, ಜಮ್ಮು ಮತ್ತು ಕಾಶ್ಮೀರ: ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ಕೌಂಟರ್ ನಡೆದಿದೆ. ಕಲಕೋಟ್ ಅರಣ್ಯ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆಯ ಬಗ್ಗೆ ಭದ್ರತಾ ಪಡೆಗಳಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಲ್ಲಿ ಭದ್ರತಾ ಪಡೆ ಇಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಅಷ್ಟರಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದರು. ದಟ್ಟ ಅರಣ್ಯದಲ್ಲಿ ಉಗ್ರರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಕನಿಷ್ಠ ಇಬ್ಬರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗುಂಡಿನ ದಾಳಿ ಬಳಿಕ ಪೊಲೀಸರೊಂದಿಗೆ ಸೇನೆಯು ಕಲಾಕೋಟ್ ಪ್ರದೇಶದ ಬ್ರೋಹ್ ಮತ್ತು ಸೂಮ್ ಅರಣ್ಯ ಪ್ರದೇಶಗಳನ್ನು ಸುತ್ತುವರೆದಿದ್ದು, ಭಯೋತ್ಪಾದಕರ ಹುಡುಕಾಟದಲ್ಲಿ ಸೇನೆ ಮತ್ತು ಪೊಲೀಸರು ತೊಡಗಿದ್ದಾರೆ. ಎರಡರಿಂದ ಮೂವರು ಉಗ್ರರು ಅರಣ್ಯದಲ್ಲಿ ಅಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ದಟ್ಟ ಅರಣ್ಯದಲ್ಲಿ ಉಗ್ರರು ಅಡಗಿರುವ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದರ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸೇನೆ ಮತ್ತು ಎಸ್ಒಜಿ ತಂಡವು ಸ್ಥಳಕ್ಕೆ ಧಾವಿಸಿತು. ಈ ಪ್ರದೇಶವನ್ನು ಸೇನೆ ಮತ್ತು ಪೊಲೀಸರು ಸುತ್ತುವರೆದಿದ್ದು, ಉಗ್ರರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮುಂಜಾನೆ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಪ್ರದೇಶದಲ್ಲಿ ಗುಂಡಿನ ಸದ್ದು ಕೇಳಿಸಿತು. ಆದರೆ, ಶಂಕಿತ ಭಯೋತ್ಪಾದಕರ ಉಪಸ್ಥಿತಿಯನ್ನು ಪರಿಶೀಲಿಸಲು ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿರುವೆ ಎಂದು ನಂತರ ಸ್ಪಷ್ಟಪಡಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಹಲವಾರು ಎನ್ಕೌಂಟರ್ಗಳು ನಡೆದಿವೆ. ಇದರಲ್ಲಿ ಕೆಲವು ಭಯೋತ್ಪಾದಕರು ಹತರಾದರೆ, ಕೆಲ ಸೈನಿಕರು ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೌದು, ಸೆಪ್ಟೆಂಬರ್ 13 ರಂದು ಜಮ್ಮು ಮತ್ತು ಕಾಶ್ಮೀರದ ಕೋಕರ್ನಾಗ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಸೇನಾ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಎಸ್ಪಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು ಇದಾದ ಬಳಿಕ ಉಗ್ರರು ಅಲ್ಲಿಂದ ಪರಾರಿಯಾಗಿದ್ದರು. ಹಲವು ದಿನಗಳ ಕಾಲ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಎಲ್ಲ ಭಯೋತ್ಪಾದಕರು ಸೇನೆ ಹೊಡೆದುರುಳಿಸಿದ್ದರು. ಎನ್ಕೌಂಟರ್ನಲ್ಲಿ ಲಷ್ಕರ್-ಎ-ತೊಯ್ಬಾ ಕಮಾಂಡರ್ ಉಜೈರ್ ಖಾನ್ ಕೂಡ ಹತನಾಗಿದ್ದಾನೆ.
ಓದಿ: ತಡರಾತ್ರಿ ಪಾರ್ಟಿ ವೇಳೆ ಗುಂಡೇಟಿಗೆ ವಿದ್ಯಾರ್ಥಿನಿ ಬಲಿ: ಸ್ನೇಹಿತನ ಬಂಧನ
ನುಸುಳುಕೋರರು ಹತ: ಇಲ್ಲಿನ ಗಡಿ ನಿಯಂತ್ರಣ ರೇಖೆಯ ಮೂಲಕ ಭಾರತ ಪ್ರವೇಶಿಸಲು ಯತ್ನಿಸಿದ ಮೂವರು ನುಸುಳುಕೋರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿತ್ತು. ಬಾರಾಮುಲ್ಲಾ ಜಿಲ್ಲೆಯ ಉರಿ ಪಟ್ಟಣದ ಗಡಿ ನಿಯಂತ್ರಣ ರೇಖೆಯಲ್ಲಿ ಮೂವರು ನುಸುಳುಕೋರರು ಭಾರತದ ಗಡಿ ದಾಟಲು ಯತ್ನಿಸುತ್ತಿದ್ದರು. ಈ ವೇಳೆ, ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದ್ದು, ಮೂವರೂ ಹತರಾಗಿದ್ದರು. ಈ ವೇಳೆ, ಇಬ್ಬರ ಶವವನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೋರ್ವನ ಶವವನ್ನು ವಶಕ್ಕೆ ಪಡೆಯುವಾಗ ಪಾಕಿಸ್ತಾನದ ಪಡೆಗಳು ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ. ಇದರಿಂದಾಗಿ ಎರಡು ಕಡೆಯಿಂದ ಗುಂಡಿನ ಚಕಮಕಿ ಉಂಟಾಗಿದೆ.