ಜಲ್ಪೈಗುರಿ (ಪಶ್ಚಿಮ ಬಂಗಾಳ): ಹವಾಮಾನ ವೈಪರೀತ್ಯದಿಂದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಪೈಲಟ್ ಸಮಯ ಪ್ರಜ್ಞೆ ಹಾಗೂ ಮುನ್ನೆಚ್ಚರಿಕೆ ಕ್ರಮದಿಂದ ಕೂದಲೆಳೆ ಅಂತರದಲ್ಲಿ ಅಪಾಯ ತಪ್ಪಿದೆ ಎಂದು ವರದಿಯಾಗಿದೆ. ಪೈಲಟ್ನ ಕಾರ್ಯಕ್ಕೆ ಟಿಎಂಸಿ ನಾಯಕಿ ಧನ್ಯವಾದ ಅರ್ಪಿಸಿದ್ದಾರೆ.
ಜಲ್ಪೈಗುರಿಯಲ್ಲಿ ಪಂಚಾಯತ್ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. ನಂತರ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ತಲುಪಲು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಸಿಲಿಗುರಿ ಸಮೀಪದ ಸೆವೋಕ್ ವಾಯು ನೆಲೆಯಲ್ಲಿ ಹೆಲಿಕಾಪ್ಟರ್ ಅನ್ನು ಪೈಲಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇದರಿಂದ ಸುರಕ್ಷಿತವಾಗಿ ಮಮತಾ ವಾಯು ನೆಲೆಯಲ್ಲಿ ಇಳಿದಿದ್ದು, ಅಲ್ಲಿಂದ ಅವರು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆವರಿಸಿದ್ದ ಕಪ್ಪು ಮೋಡಗಳು: ಪಶ್ಚಿಮ ಬಂಗಾಳದಲ್ಲಿ ಸೋಮವಾರದಿಂದ ಭಾರಿ ಮಳೆ ಹಾಗೂ ಚಂಡಮಾರುತ ಬಗ್ಗೆ ಹವಾಮಾನ ಮುನ್ಸೂಚನೆ ನೀಡಿದೆ. ಇದರ ನಡುವೆ ಜುಲೈ 8ರಂದು ಮತದಾನ ನಡೆಯಲಿರುವ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ಸಿಎಂ ಮಮತಾ ಉತ್ತರ ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಜಲ್ಪೈಗುರಿಯಲ್ಲಿ ಭಾಷಣ ಮಾಡಿ ಅವರು ಹೆಲಿಕಾಪ್ಟರ್ನಲ್ಲಿ ಹಿಂತಿರುಗುತ್ತಿದ್ದರು.
ಇದನ್ನೂ ಓದಿ: ದೇಶಾದ್ಯಂತ ಮುಂಗಾರು ಚುರುಕು.. ಜೂ.30ರವರೆಗೆ ಕರ್ನಾಟಕದಲ್ಲಿ ಮಳೆ ಮುನ್ಸೂಚನೆ: ಹಿಮಾಚಲದಲ್ಲಿ 9 ಬಲಿ
ಈ ವೇಳೆ ಬೈಕುಂಠಪುರ ಅರಣ್ಯದಲ್ಲಿ ಹೆಲಿಕಾಪ್ಟರ್ ಹಾರುತ್ತಿರುವಾಗ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಮೂರು ಕಡೆಯಿಂದ ಸುತ್ತುವರಿದ ಕಪ್ಪು ಮೋಡಗಳನ್ನು ನೋಡಿ ಪೈಲಟ್ ದಿಗ್ಭ್ರಮೆಗೊಂಡರು. ಜೊತೆಗೆ ಮಳೆ ಪರಿಸ್ಥಿತಿ ಸಹ ತುರ್ತು ಭೂಸ್ಪರ್ಶ ಮಾಡುವ ಅನಿವಾರ್ಯತೆಯನ್ನು ಹೆಚ್ಚಿಸಿತು. ಇದರಿಂದ ಸನ್ನಿಹಿತ ಅಪಾಯವನ್ನು ಅರಿತುಕೊಂಡ ಪೈಲಟ್ ತ್ವರಿತವಾಗಿ ಹೆಲಿಕಾಪ್ಟರ್ನ ಮಾರ್ಗವನ್ನು ಬದಲಾಯಿಸುವ ನಿರ್ಧಾರ ತೆಗೆದುಕೊಂಡರು.
ಡಾರ್ಜಿಲಿಂಗ್ ಬೆಟ್ಟಗಳ ಕಡೆಗೆ ಮಾತ್ರ ಸ್ಪಷ್ಟ ಗೋಚರತೆ ಇತ್ತು. ಹೀಗಾಗಿ ಅದೇ ದಿಕ್ಕಿನಲ್ಲಿ ಪೈಲಟ್ ಹೆಲಿಕಾಪ್ಟರ್ ತಿರುಗಿಸಿದರು. ಇದರ ಪರಿಣಾಮವಾಗಿ ಹೆಲಿಕಾಪ್ಟರ್ ಸುರಕ್ಷಿತವಾಗಿ ಸೆವೋಕ್ ವಾಯು ನೆಲೆಗೆ ಬಂದಿಳಿತು. ಸಿಎಂ ಅವರಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ವಿಷಯ ತಿಳಿದು ಸೇನಾಧಿಕಾರಿಗಳು ದೌಡಾಯಿಸಿದರು. ಅಲ್ಲಿ ಸೇನಾಧಿಕಾರಿಗಳೊಂದಿಗೆ ಮಮತಾ ಕೋಲ್ಕತ್ತಾಗೆ ಮರಳುವ ಬಗ್ಗೆ ಚರ್ಚಿಸಿದರು. ಉತ್ತರ ಬಂಗಾಳದ ಇತರ ಜಿಲ್ಲೆಗಳಿಗೆ ಸಿಎಂ ಹೋಗಬೇಕಿತ್ತು. ಇಂದು ಬಾಗ್ದೋಗ್ರಾದಿಂದ ಕೋಲ್ಕತ್ತಾಗೆ ಮರಳಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.