ನವದೆಹಲಿ: 15ನೇ ಹಣಕಾಸು ಆಯೋಗ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸು ಹಾಗೂ ಅದನ್ನು ಒಪ್ಪಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರಗಳಿಂದಾಗಿ ದಕ್ಷಿಣದ ರಾಜ್ಯಗಳು ಕಂಗಾಲಾಗಿವೆ.
ಅದರಲ್ಲೂ ಕರ್ನಾಟಕಕ್ಕೆ ಎನ್ ಕೆ ಸಿಂಗ್ ನೇತೃತ್ವದ ಹಣಕಾಸು ಆಯೋಗದ ಶಿಫಾರಸುಗಳು ಮರ್ಮಾಘಾತವನ್ನೇ ನೀಡಿದೆ. ಈ ಶಿಫಾರಸು ಜಾರಿಗೆ ಬಂದರೆ ಶೇ 22 ರಷ್ಟು ಅಂದರೆ ಸರಿಸುಮಾರು 9 ಸಾವಿರ ಕೋಟಿ ರೂ. ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲಿನಿಂದ ವಂಚಿತ ವಾಗಲಿದೆ.
ಸದ್ಯ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಶೇ.42ರಷ್ಟು ತೆರಿಗೆ ಪಾಲು ಬರುತ್ತಿದೆ. ಆದರೆ 2020-21ನೇ ವಿತ್ತೀಯ ವರ್ಷಕ್ಕಾಗಿ ರಾಜ್ಯಗಳಿಗೆ ತೆರಿಗೆಯ ಪಾಲು ಶೇ.41ರಷ್ಟು ಮಾತ್ರ. 11, 12, 13, 14 ನೇ ಹಣಕಾಸು ಆಯೋಗದ ವರದಿಗಳು ಜಾರಿಯಾಗಿದ್ದ ಹಿಂದಿನ ವರ್ಷಗಳಲ್ಲಿ ಕೇಂದ್ರದಿಂದ ರಾಜ್ಯಗಳಿಗೆ ಬರಬೇಕಾಗಿದ್ದ ತೆರಿಗೆ ಪಾಲಿನ ಪೈಕಿ ಶೇ.29.5 ರಿಂದ ಶೇ.42ರ ವರೆಗೆ ಏರಿಕೆಯಾಗಿದೆ. ಸಂಸತ್ನಲ್ಲಿ ಮಂಡಿಸಲಾಗಿರುವ ವರದಿಯ ಪ್ರಕಾರ ದಕ್ಷಿಣದ ರಾಜ್ಯಗಳಿಗೆ ತೆರಿಗೆ ವಿಚಾರದಲ್ಲಿ ದಕ್ಷಿಣ ರಾಜ್ಯಗಳಲ್ಲಿ ಭಾರಿ ಖೋತಾ ಆಗಲಿದೆ.
ರಾಜ್ಯ | 14ನೇ ಹಣಕಾಸು ಆಯೋಗ | 15ನೇ ಆಯೋಗ | ತೆರಿಗೆ ಪಾಲಿನಲ್ಲಿ ಶೇಕಡಾವಾರು ಇಳಿಕೆ |
ಕರ್ನಾಟಕ | 4.71 | 3.65 | -22.05 |
ಕೇರಳ | 2.5 | 1.94 | -22.4 |
ಆಂಧ್ರಪ್ರದೇಶ | 4.3 | 4.11 | -4.4 |
ಅಸ್ಸೋಂ | 3.31 | 3.13 | -5.4 |
ತೆಲಂಗಾಣ | 2.44 | 2.13 | -12.7 |
| | | |
ಈ ಖೋತಾಕ್ಕೆ ಕಾರಣ ಏನು?
ಯಾವ ಮಾನದಂಡ ಆಧರಿಸಿ ತೆರಿಗೆ ಪಾಲು ನೀಡುತ್ತೆ ಕೇಂದ್ರ:2011ರ ಜನಗಣತಿ ಆಧರಿಸಿ ವಿತ್ತೀಯ ನೆರವು ಮತ್ತು ತೆರಿಗೆ ಪಾಲನ್ನು ಹಂಚಲು 15 ನೇ ಹಣಕಾಸು ಆಯೋಗ ಶಿಫಾರಸು ಮಾಡಿದೆ. ಸದ್ಯ ಮಧ್ಯಂತರ ಶಿಫಾರಸು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಆಗಿದೆ. 2021-22ನೇ ಸಾಲಿನಿಂದ 2025-26ನೇ ಸಾಲಿನವರೆಗೆ ಇರುವ ಎರಡನೇ ವರದಿಯನ್ನು ಅಕ್ಟೋಬರ್ನಲ್ಲಿ ಎನ್.ಕೆ.ಸಿಂಗ್ ಸಲ್ಲಿಸಲಿದ್ದಾರೆ. ಎನ್ ಕೆ ಸಿಂಗ್ ಆಯೋಗದ ಈ ಪ್ರಸ್ತಾಪಕ್ಕೆ ಆಗಿನ ರಾಜ್ಯದ ಸಿಎಂ ಆಗಿದ್ದ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಜನಸಂಖ್ಯೆ ಆಧಾರದ ಮೇಲೆ ಈ ನಿಯಮ ಜಾರಿಗೆ ತಂದರೆ ರಾಜ್ಯಕ್ಕೆ ಅನ್ಯಾಯ ಆಗಲಿದೆ. ಜನಸಂಖ್ಯೆ ಕಡಿಮೆ ಎಂಬ ಕಾರಣಕ್ಕೆ ತೆರಿಗೆ ಪಾಲು ಕಡಿಮೆ ಮಾಡಿದರೆ, ಹೆಚ್ಚು ತೆರಿಗೆ ನೀಡುವ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಎಂಬ ಆಕ್ಷೇಪವನ್ನು ಅವರು ಆಗಲೇ ಎತ್ತಿದ್ದರು.
ಇದೀಗ ಕೇಂದ್ರ ಇದೇ ನಿಯಮವನ್ನ ಜಾರಿಗೆ ತರಲು ಮುಂದಾಗಿರುವುದು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಮರ್ಮಾಘಾತವನ್ನೇ ನೀಡಲಿದೆ.
ಏನಿದು ಆಯೋಗದ ಶಿಫಾರಸು?:
14ನೇ ಹಣಕಾಸು ಆಯೋಗದ ಶಿಫಾರಿಸಿನಂತೆ ಕರ್ನಾಟಕಕ್ಕೆ ಶೇ 4.71ರಷ್ಟು ತೆರಿಗೆ ಪಾಲು ಸಿಕ್ಕಿತ್ತು. 15ನೇ ಆಯೋಗದ ಅವಧಿಯಲ್ಲಿ ಈ ಪಾಲು ಶೇ 3.65 ಮಾತ್ರ ಆಗಿರಲಿದೆ. ಅಂದರೆ ಶೇ 22 ರಷ್ಟು ಹಣ ನಮಗೆ ಇನ್ಮುಂದೆ ಕಡಿಮೆ ಸಿಗಲಿದೆ. ಇನ್ನು ಕೇರಳಕ್ಕೆ 14ನೇ ಆಯೋಗದ ಅವಧಿಯಲ್ಲಿ ಶೇ 2.5ರಷ್ಟು ಸಿಗುತ್ತಿತ್ತು, ಅದೀಗ 15ನೇ ಆಯೋಗದಲ್ಲಿ 1.94ರಷ್ಟು ಪ್ರಮಾಣದಲ್ಲಿ ಸಿಗಲಿದೆ. ಇನ್ನು ಆಂಧ್ರಪ್ರದೇಶಕ್ಕೆ 4.11 ರಷ್ಟದ್ದು, ಅದರಲ್ಲೂ ಕಡಿತವಾಗಿದೆ. ಇನ್ನು ಅಸ್ಸೋಂ, ತೆಲಂಗಾಣ ಸಹ ಭಾರಿ ನಷ್ಟವನ್ನ ಅನುಭವಿಸಲಿವೆ.
ಯಾರಿಗೆ ಹೆಚ್ಚು ಲಾಭ?:
ಕಡಿಮೆ ಮಾಡಲಾಗಿರುವ ಶೇ 1 ರಷ್ಟಯ ಪ್ರಮಾಣದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಅಭಿವೃದ್ಧಿ ಮಾಡಲಾಗುತ್ತದೆ. ಈ ಸವಾಲು ಪರಿಹರಿಸಲು ರಾಜ್ಯಗಳಿಗೆ ಕಂದಾಯ ಕೊರತೆ ಅನುದಾನ ಮತ್ತು ವಿಕೋಪಗಳನ್ನು ನಿರ್ವಹಿಸಲು ಇರುವ ನಿಧಿಯ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ಅದೇನೇ ಇದ್ದರೂ, ರಾಜ್ಯಗಳ ಪಾಲಿನಲ್ಲಿ ಕಡಿಮೆ ಮಾಡಿರುವುದು ಸರ್ವಥಾ ಸಮರ್ಥನೀಯವಲ್ಲ. ಅಷ್ಟಕ್ಕೂ ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ ಸೇರಿದಂತೆ ಉತ್ತರದ ರಾಜ್ಯಗಳು ಹೆಚ್ಚಿನ ತೆರಿಗೆ ಪಾಲನ್ನು ಪಡೆಯಲಿವೆ. ನಾವು ಹೆಚ್ಚಿನ ತೆರಿಗೆ ಕಟ್ಟಿ ,ಹೆಚ್ಚಿನ ಜನಸಂಖ್ಯೆ ಇರುವ ಈ ರಾಜ್ಯಗಳಿಗೆ ನಮ್ಮ ಪಾಲನ್ನು ನೀಡಬೇಕಾ ಎನ್ನುವುದು ದಕ್ಷಿಣ ರಾಜ್ಯಗಳ ಆಕ್ರೋಶವಾಗಿದೆ.