ಮುಂಬೈ: ಕತ್ತಿಗೆ ಕತ್ತಿಯಿಂದಲೇ ಉತ್ತರಿಸ್ಬೇಕು. ಅಂತೆಯೇ ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡ್ಬೇಕು ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರಿಗೆ ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಸಿದ್ದಾರೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಸಿಎಎ ಬೆಂಬಲಿಸಿ ನಡೆದ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ, ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಂದೋಲನ ನಡೆಸುತ್ತಿರುವವರಿಗೆ ಖಡಕ್ ಪ್ರತಿಕ್ರಿಯೆ ನೀಡಿದರು. ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ದೇಶದೆಲ್ಲೆಡೆ ರ್ಯಾಲಿಗಳು ನಡೆಯುತ್ತಿವೆ. ಈ ರ್ಯಾಲಿಗಳಿಗೆ ನಾವು ಕೂಡಾ ರ್ಯಾಲಿ ನಡೆಸಿಯೇ ಉತ್ತರಿಸಿದ್ದೇವೆ. ಅಂತೆಯೇ ಕತ್ತಿಗೆ ಯಾವತ್ತೂ ಕತ್ತಿಯಿಂದಲೇ ಉತ್ತರಿಸ್ಬೇಕು. ಕಲ್ಲಿಗೆ ಕಲ್ಲಿನಿಂದಲೇ ಉತ್ತರ ನೀಡ್ಬೇಕು ಎಂದು ಸಿಎಎ ವಿರೋಧಿಗಳಿಗೆ ಠಾಕ್ರೆ ಖಡಕ್ ಸೂಚನೆ ರವಾನಿಸಿದ್ದಾರೆ.
ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟಿಸುತ್ತಿರುವ ಮುಸ್ಲಿಂರ ಬಗ್ಗೆ ಮಾತನಾಡಿದ ಅವರು, ಮುಸ್ಲಿಮರು ಆಂದೋಲನ ನಡೆಸುತ್ತಿರುವ ಉದ್ದೇಶವೇ ನನಗೆ ಅರ್ಥವಾಗುತ್ತಿಲ್ಲ. ಈ ಕಾಯ್ದೆಯು ಇಲ್ಲಿ ಹುಟ್ಟಿರುವ ಮುಸ್ಲಿಂ ನಾಗರಿಕರಿಗೆ ಸಂಬಂಧಿಸಿದ್ದೇ ಅಲ್ಲ ಎಂದರು.
ದೇಶದಲ್ಲಿರುವ ಅಕ್ರಮ ಬಾಂಗ್ಲಾ ಹಾಗೂ ಪಾಕ್ನ ವಲಸಿಗರನ್ನು ದೇಶದಿಂದ ಹೊರಗೋಡಿಸಬೇಕು. ಎಲ್ಲರನ್ನೂ ದೇಶದಲ್ಲಿರಿಸಿಕೊಳ್ಳಲು ನಮ್ಮ ದೇಶವೇನು ಧರ್ಮಛತ್ರವೇ? ಅಕ್ರಮ ವಲಸಿಗರ ವಿರುದ್ಧ ಅಮೆರಿಕಾ ಹಾಗೂ ಯುರೋಪ್ನಲ್ಲಿ ಕಾನೂನು ತುಂಬಾ ಬಲವಾಗಿದೆ. ಯಾರಲ್ಲಾದರೂ ಪಾಸ್ಪೋರ್ಟ್ ಇಲ್ಲದಿದ್ದರೆ, ಅವರನ್ನು ಗಡಿಪಾರು ಮಾಡಬೇಕು, ಇಲ್ಲವೇ ಜೈಲಿಗೆ ಹಾಕಬೇಕು. ಪ್ರತಿಯೊಬ್ಬರಿಗೆ ನಾವೂ ಜವಾಬ್ದಾರರಲ್ಲ ಎಂದು ಠಾಕ್ರೆ ಕೆಂಡಕಾರಿದ್ದಾರೆ.