ನವದೆಹಲಿ: 17ನೇ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಚುನಾವಣಾ ಆಯೋಗದ ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೊರೆ ಹೋಗುವ ನಿರ್ಧಾರ ತೆಗೆದುಕೊಂಡಿವೆ.
ಇವಿಎಂ ಕಾರ್ಯವೈಖರಿಯ ಬಗ್ಗೆ ವಿರೋಧ ಪಕ್ಷಗಳು ಕಳೆದ ಹಲವು ವರ್ಷಗಳಿಂದ ಅಸಮಾಧಾನ ಹೊರ ಹಾಕುತ್ತಲೇ ಬರುತ್ತಿವೆ. ಇವಿಎಂಗಳ ವಿಶ್ವಾಸಾರ್ಹತೆಯನ್ನು ದೃಢಪಡಿಸಲು ಚುನಾವಣಾ ಆಯೋಗವು ವಿವಿಪ್ಯಾಟ್ ಮೂಲಕ ಮತದಾರರಿಗೆ ತಮ್ಮ ಮತ ಸರಿಯಾದ ಅಭ್ಯರ್ಥಿಗೇ ಹೋಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆಯನ್ನೂ ರೂಪಿಸಿದೆ. ಆದರೂ ಇಷ್ಟಕ್ಕೆ ತೃಪ್ತಿಯಾಗದ ಪ್ರತಿಪಕ್ಷಗಳು ಇವತ್ತು ಒಮ್ಮತದ ನಿರ್ಧಾರಕ್ಕೆ ಬಂದಿವೆ.
ದೇಶದಲ್ಲಿ ಮತದಾನವಾದ ಒಟ್ಟು ಇವಿಎಂನಲ್ಲಿ ದಾಖಲಾದ ಮತಗಳು ಹಾಗು ವಿವಿಪ್ಯಾಟ್ ಚೀಟಿಗಳ ಪೈಕಿ ಶೇ 50ರಷ್ಟು ಪರಿಶೀಲನೆಗೆ ಒಳಪಡಿಸಬೇಕೆಂದು ಆಗ್ರಹಿಸಿ ದೇಶದ ಪ್ರಮುಖ ರಾಜಕೀಯ ಪಕ್ಷಗಳು ಆಗ್ರಹಿಸಿವೆ ಎಂದು ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಇವಿಎಂಗಳಲ್ಲಿನ ದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಆಯೋಗವು ನಿರೀಕ್ಷಿತ ಮಟ್ಟದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ, ನಾವು ದೇಶಾದ್ಯಂತ ಜಾಗೃತಿ ಮೂಡಿಸಿ ಜನಾಂದೋಲನವನ್ನೂ ನಡೆಸುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ.