ETV Bharat / bharat

ಪಿತೊರಾಗಢ ರಸ್ತೆ: ಭಾರತ, ನೇಪಾಳ ಮಧ್ಯೆ ಉಲ್ಭಣಿಸಿದ ರಾಜತಾಂತ್ರಿಕ ರಂಪ

author img

By

Published : May 11, 2020, 3:25 PM IST

ಕೋವಿಡ್-‌19 ಪರಿಸ್ಥಿತಿ ತಂದಿಟ್ಟಿರುವ ಸವಾಲುಗಳ ಹೊರತಾಗಿಯೂ ಕೂಡಾ ಭಾರತ ಹಾಗೂ ನೇಪಾಳದ ನಡುವೆ ರಸ್ತೆಯೊಂದರ ವಿಚಾರವಾಗಿ ರಾಜತಾಂತ್ರಿಕ ಸಮರ ನಡೆಯುತ್ತಿದೆ.

Pithoragarh
ಪಿತೊರಾಗಢ

ಕೈಲಾಸ ಮಾನಸ ಸರೋವರ ಯಾತ್ರೆಯ ದೂರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಉತ್ತರಖಂಡ್​​​ನಲ್ಲಿ ಉದ್ಘಾಟನೆಯಾಗಿರುವ ರಸ್ತೆಯೊಂದು ಇದೀಗ ಭಾರತ ಮತ್ತು ನೇಪಾಳ ನಡುವೆ ರಾಜತಾಂತ್ರಿಕ ಸಮರವನ್ನು ಹುಟ್ಟುಹಾಕಿದೆ. ನೇಪಾಳದ ವಿದೇಶಾಂಗ ಸಚಿವಾಲಯ ಸಲ್ಲಿಸಿದ ಔಪಚಾರಿಕ ಆಕ್ಷೇಪಣೆಗೆ ಇಂದು ಉತ್ತರಿಸಿರುವ ಭಾರತ, ಇತ್ತೀಚೆಗೆ ಉದ್ಘಾಟನೆಯಾದ ಉತ್ತರಾಖಂಡ ರಾಜ್ಯದ ಪಿತೊರಾಗಢ ಜಿಲ್ಲೆಯ ರಸ್ತೆಗೆ ಸಂಬಂಧಿಸಿದಂತೆ ಮಾಡಲಾದ ಆಕ್ಷೇಪಣೆಗಳ ಕುರಿತು ಪ್ರತಿಕ್ರಿಯಿಸಿದ್ದು, ತಾನು ಯಾವುದೇ ಗಡಿಯನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚೀನಾ ಗಡಿಯಲ್ಲಿರುವ ಹಾಗೂ ತನ್ನದೆಂದು ನೇಪಾಳ ಹೇಳಿಕೊಳ್ಳುವ ದರ್ಚುಲಾದಿಂದ ಲಿಪುಲೇಖ್‌ ಮಧ್ಯದ ರಸ್ತೆಯನ್ನು ಶುಕ್ರವಾರ ಉದ್ಘಾಟಿಸಿದ್ದರು.

ಶನಿವಾರವೇ ಕಟು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ನೇಪಾಳದ ವಿದೇಶಾಂಗ ಸಚಿವಾಲಯ, ಭಾರತದ್ದು “ಏಕಪಕ್ಷೀಯ ಕ್ರಮ” ಎಂದು ವಿಷಾದ ವ್ಯಕ್ತಪಡಿಸಿತು. 1816ರ ಸುಗೌಲಿ ಒಪ್ಪಂದದ ಪ್ರಕಾರ, ಲಿಪಿಯಾಧುರ, ಕಾಲಾಪಾನಿ ಮತ್ತು ಲಿಪು ಲೇಖ್‌ ಸೇರಿದಂತೆ ಮಹಾಕಾಳಿ ನದಿಯ ಪೂರ್ವಕ್ಕಿರುವ ಎಲ್ಲಾ ಪ್ರದೇಶಗಳು “ನೇಪಾಳಕ್ಕೆ ಸೇರಿವೆ” ಹಾಗೂ ತನಗೆ ಸೇರಿದ ಈ ಪ್ರದೇಶದಲ್ಲಿ ಇನ್ನು ಮುಂದೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಭಾರತ ನಿಗ್ರಹಿಸಿಕೊಳ್ಳಬೇಕು ಎಂದು ಒತ್ತಾಯಿಸಿತು. “ಈ ವಿಷಯ ಕುರಿತು ನೇಪಾಳ ಸರಕಾರವು ಈ ಹಿಂದೆಯೂ ಸಾಕಷ್ಟು ಸಲ ಸ್ಪಷ್ಟಪಡಿಸಿದೆ ಹಾಗೂ ತೀರಾ ಇತ್ತೀಚೆಗೆ ಭಾರತ ಬಿಡುಗಡೆ ಮಾಡಿದ್ದ ಹೊಸ ರಾಜಕೀಯ ಭೂಪಟಕ್ಕೆ ಪ್ರತಿಕ್ರಿಯೆಯಾಗಿ 20 ನವೆಂಬರ್‌ 2019ರಂದು ರಾಜತಾಂತ್ರಿಕ ಟಿಪ್ಪಣಿಯ ಮೂಲಕವೂ ಭಾರತ ಸರಕಾರಕ್ಕೆ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ,” ಎಂದು ಹೇಳಿಕೆ ತಿಳಿಸಿದೆ.

ಆದರೆ, ತನ್ನ ಸಾರ್ವಭೌಮತ್ವಕ್ಕೆ ಒಳಪಟ್ಟಿರುವ ಪ್ರದೇಶದಲ್ಲಿ ಉಲ್ಲಂಘನೆ ಮಾಡಲಾಗಿದೆ ಎಂದು ಕಠ್ಮಂಡು ಮಾಡಿರುವ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್‌ ಶ್ರೀವಾಸ್ತವ್‌, “ಉತ್ತರಖಂಡ ರಾಜ್ಯದ ಪಿತೋರಾಗಢ ಜಿಲ್ಲೆಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ರಸ್ತೆಯ ಭಾಗವು ಸಂಪೂರ್ಣವಾಗಿ ಭಾರತಕ್ಕೆ ಒಳಪಟ್ಟಿರುವ ಪ್ರದೇಶದಲ್ಲಿದೆ” ಎಂದಿದ್ದಾರೆ. “ಕೈಲಾಸ ಮಾನಸ ಸರೋವರದ ಯಾತ್ರಾರ್ಥಿಗಳು ಬಳಸುತ್ತಿದ್ದ ಹಾಗೂ ಈ ಮುಂಚೆಯೇ ಇದ್ದ ಮಾರ್ಗವನ್ನೇ ಈ ರಸ್ತೆ ಒಳಗೊಂಡಿದೆ. ಪ್ರಸಕ್ತ ಯೋಜನೆಯಡಿ, ಯಾತ್ರಿಗಳಿಗೆ, ಸ್ಥಳೀಯರಿಗೆ ಹಾಗೂ ವ್ಯಾಪಾರಿಗಳಿಗೆ ಬಳಸಲು ಸುಲಭವಾಗುವಂತೆ ಅದೇ ರಸ್ತೆಯನ್ನು ದುರಸ್ತಿಪಡಿಸಲಾಗಿದೆ,” ಎಂದು ಶನಿವಾರ ಬಿಡುಗಡೆ ಮಾಡಲಾಗಿರುವ ಎಂಇಎ ಹೇಳಿಕೆ ಸ್ಪಷ್ಟಪಡಿಸಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳನ್ನು ಭಾರತೀಯ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಹೊಸ ರಾಜಕೀಯ ಭೂಪಟವನ್ನು ಭಾರತ ಬಿಡುಗಡೆ ಮಾಡಿದಾಗಿನಿಂದ ಈ ಎರಡೂ ನೆರೆಹೊರೆ ದೇಶಗಳ ನಡುವೆ ಗಡಿಗೆ ಸಂಬಂಧಿಸಿದಂತೆ ಪ್ರಕ್ಷುಬ್ಧತೆ ಹೊಗೆಯಾಡತೊಡಗಿದೆ. ಹೊಸ ರಾಜಕೀಯ ಭೂಪಟದಲ್ಲಿ ಕಾಲಾಪಾನಿಯನ್ನು ಭಾರತೀಯ ಪ್ರದೇಶವಾಗಿ ತೋರಿಸಿರುವುದು ಕಠ್ಮಂಡುವಿನಿಂದ ತೀವ್ರ ಆಕ್ಷೇಪಣೆಗೆ ಗುರಿಯಾಯಿತಲ್ಲದೇ ನೇಪಾಳದ ಬೀದಿಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು. ಆದರೆ, ಸದರಿ ಭೂಪಟವು ಈ ಹಿಂದಿದ್ದ ಪ್ರದೇಶಗಳ ವಿವರಗಳನ್ನೇ ಒಳಗೊಂಡಿವೆ ಎಂದು ಭಾರತ ತನ್ನ ನಿಲುವನ್ನು ಕಾಯ್ದುಕೊಂಡಿತು.

ಕಠ್ಮಂಡು ಇಂದು ಬಿಡುಗಡೆ ಮಾಡಿರುವ ತನ್ನ ಹೊಸ ಹೇಳಿಕೆಯಲ್ಲಿ, ಮೇ 2015ರಂದೇ ಈ ಕುರಿತ ತನ್ನ ಪ್ರತಿಭಟನೆಯನ್ನು ಸಲ್ಲಿಸಲಾಗಿದೆ ಎಂಬುದನ್ನು ನೆನಪಿಸಿದೆ. ನೇಪಾಳದ ಒಪ್ಪಿಗೆಯಿಲ್ಲದೇ ಲಿಪು ಲೇಖ್‌ ಕಣಿವೆ ಮಾರ್ಗವನ್ನು ಉಭಯ ದೇಶಗಳ ನಡುವಿನ ವಾಣಿಜ್ಯ ಮಾರ್ಗವಾಗಿಸಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಗೆ ಸೂಚಿಸಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದಾಗಲೇ ಪ್ರತಿಭಟನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದೆ. “ಈ ಏಕಪಕ್ಷೀಯ ಕ್ರಮವು ಉಭಯ ದೇಶಗಳ ನಡುವೆ ನಡೆದಿದ್ದ ತಿಳಿವಳಿಕೆ ಒಪ್ಪಂದಕ್ಕೆ ವಿರುದ್ಧವಾಗಿದೆ. ಗಡಿ ವಿಷಯಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಸಂಧಾನದ ಮೂಲಕವೇ ಕಂಡುಕೊಳ್ಳಬೇಕೆಂದು ಪ್ರಧಾನಮಂತ್ರಿಗಳ ಮಟ್ಟದಲ್ಲಿ ಬಂದ ತೀರ್ಮಾನಕ್ಕೆ ವ್ಯತಿರಿಕ್ತವಾಗಿದೆ” ಎಂದು ನೇಪಾಳ ಇಂದು ನೆನಪಿಸಿದೆ.

ಆದರೆ, “ಗಡಿಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ಭಾರತ ಮತ್ತು ನೇಪಾಳ ಸ್ಥಾಪಿಸಿಕೊಂಡಿವೆ. ನೇಪಾಳದೊಂದಿಗಿನ ಗಡಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಗಡಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವಿಷಯಗಳನ್ನು ರಾಜತಾಂತ್ರಿಕ ಮಾತುಕತೆ ಹಾಗೂ ನೇಪಾಳದೊಂದಿಗೆ ನಾವು ಹೊಂದಿರುವ ನಿಕಟ ಹಾಗೂ ಮಿತ್ರತ್ವ ರೂಪದ ದ್ವಿಪಕ್ಷೀಯ ಸಂಬಂಧಗಳ ಆದರ್ಶದ ಹಿನ್ನೆಲೆಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಭಾರತ ಬದ್ಧವಾಗಿದೆ,” ಎಂದು ಎಂಇಎ ಶನಿವಾರ ಹೊರಡಿಸಿರುವ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದೆ.

ಕೋವಿಡ್-‌19 ತುರ್ತುಪರಿಸ್ಥಿತಿ ತಂದಿಟ್ಟಿರುವ ಸವಾಲುಗಳನ್ನು ಉಭಯ ದೇಶಗಳ ಸಮಾಜಗಳು ಹಾಗೂ ಸರಕಾರಗಳು ಯಶಸ್ವಿಯಾಗಿ ನಿರ್ವಹಿಸಿದ ನಂತರ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತುಕತೆ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ಉಭಯ ಪಕ್ಷಗಳು ತೊಡಗಿವೆ ಎಂದೂ ಭಾರತ ಹೇಳಿದೆ. ಆದರೆ, ಕಳೆದ ವರ್ಷ ಕಾಲಾಪಾನಿ ವಿವಾದ ಉಲ್ಬಣಗೊಂಡ ನಂತರ, ಇಬ್ಬರೂ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ಕಠ್ಮಂಡು ಎರಡು ಸಲ ಮಾಡಿದಾಗ್ಯೂ ಯಾವುದೇ ಫಲಿತಾಂಶ ದಕ್ಕಲಿಲ್ಲ ಎಂದು ನೇಪಾಳದ ವಿದೇಶಾಂಗ ಸಚಿವಾಲಯದ ಹೇಳಿಕೆ ಸ್ಪಷ್ಟಪಡಿಸಿದೆ.

ಕೈಲಾಸ ಮಾನಸ ಸರೋವರ ಯಾತ್ರೆಯ ದೂರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಉತ್ತರಖಂಡ್​​​ನಲ್ಲಿ ಉದ್ಘಾಟನೆಯಾಗಿರುವ ರಸ್ತೆಯೊಂದು ಇದೀಗ ಭಾರತ ಮತ್ತು ನೇಪಾಳ ನಡುವೆ ರಾಜತಾಂತ್ರಿಕ ಸಮರವನ್ನು ಹುಟ್ಟುಹಾಕಿದೆ. ನೇಪಾಳದ ವಿದೇಶಾಂಗ ಸಚಿವಾಲಯ ಸಲ್ಲಿಸಿದ ಔಪಚಾರಿಕ ಆಕ್ಷೇಪಣೆಗೆ ಇಂದು ಉತ್ತರಿಸಿರುವ ಭಾರತ, ಇತ್ತೀಚೆಗೆ ಉದ್ಘಾಟನೆಯಾದ ಉತ್ತರಾಖಂಡ ರಾಜ್ಯದ ಪಿತೊರಾಗಢ ಜಿಲ್ಲೆಯ ರಸ್ತೆಗೆ ಸಂಬಂಧಿಸಿದಂತೆ ಮಾಡಲಾದ ಆಕ್ಷೇಪಣೆಗಳ ಕುರಿತು ಪ್ರತಿಕ್ರಿಯಿಸಿದ್ದು, ತಾನು ಯಾವುದೇ ಗಡಿಯನ್ನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಚೀನಾ ಗಡಿಯಲ್ಲಿರುವ ಹಾಗೂ ತನ್ನದೆಂದು ನೇಪಾಳ ಹೇಳಿಕೊಳ್ಳುವ ದರ್ಚುಲಾದಿಂದ ಲಿಪುಲೇಖ್‌ ಮಧ್ಯದ ರಸ್ತೆಯನ್ನು ಶುಕ್ರವಾರ ಉದ್ಘಾಟಿಸಿದ್ದರು.

ಶನಿವಾರವೇ ಕಟು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ನೇಪಾಳದ ವಿದೇಶಾಂಗ ಸಚಿವಾಲಯ, ಭಾರತದ್ದು “ಏಕಪಕ್ಷೀಯ ಕ್ರಮ” ಎಂದು ವಿಷಾದ ವ್ಯಕ್ತಪಡಿಸಿತು. 1816ರ ಸುಗೌಲಿ ಒಪ್ಪಂದದ ಪ್ರಕಾರ, ಲಿಪಿಯಾಧುರ, ಕಾಲಾಪಾನಿ ಮತ್ತು ಲಿಪು ಲೇಖ್‌ ಸೇರಿದಂತೆ ಮಹಾಕಾಳಿ ನದಿಯ ಪೂರ್ವಕ್ಕಿರುವ ಎಲ್ಲಾ ಪ್ರದೇಶಗಳು “ನೇಪಾಳಕ್ಕೆ ಸೇರಿವೆ” ಹಾಗೂ ತನಗೆ ಸೇರಿದ ಈ ಪ್ರದೇಶದಲ್ಲಿ ಇನ್ನು ಮುಂದೆ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಭಾರತ ನಿಗ್ರಹಿಸಿಕೊಳ್ಳಬೇಕು ಎಂದು ಒತ್ತಾಯಿಸಿತು. “ಈ ವಿಷಯ ಕುರಿತು ನೇಪಾಳ ಸರಕಾರವು ಈ ಹಿಂದೆಯೂ ಸಾಕಷ್ಟು ಸಲ ಸ್ಪಷ್ಟಪಡಿಸಿದೆ ಹಾಗೂ ತೀರಾ ಇತ್ತೀಚೆಗೆ ಭಾರತ ಬಿಡುಗಡೆ ಮಾಡಿದ್ದ ಹೊಸ ರಾಜಕೀಯ ಭೂಪಟಕ್ಕೆ ಪ್ರತಿಕ್ರಿಯೆಯಾಗಿ 20 ನವೆಂಬರ್‌ 2019ರಂದು ರಾಜತಾಂತ್ರಿಕ ಟಿಪ್ಪಣಿಯ ಮೂಲಕವೂ ಭಾರತ ಸರಕಾರಕ್ಕೆ ಈ ವಿಷಯವನ್ನು ಸ್ಪಷ್ಟಪಡಿಸಲಾಗಿದೆ,” ಎಂದು ಹೇಳಿಕೆ ತಿಳಿಸಿದೆ.

ಆದರೆ, ತನ್ನ ಸಾರ್ವಭೌಮತ್ವಕ್ಕೆ ಒಳಪಟ್ಟಿರುವ ಪ್ರದೇಶದಲ್ಲಿ ಉಲ್ಲಂಘನೆ ಮಾಡಲಾಗಿದೆ ಎಂದು ಕಠ್ಮಂಡು ಮಾಡಿರುವ ಆರೋಪವನ್ನು ಅಲ್ಲಗಳೆದಿರುವ ಭಾರತೀಯ ವಿದೇಶಾಂಗ ವ್ಯವಹಾರಗಳ ವಕ್ತಾರ ಅನುರಾಗ್‌ ಶ್ರೀವಾಸ್ತವ್‌, “ಉತ್ತರಖಂಡ ರಾಜ್ಯದ ಪಿತೋರಾಗಢ ಜಿಲ್ಲೆಯಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ರಸ್ತೆಯ ಭಾಗವು ಸಂಪೂರ್ಣವಾಗಿ ಭಾರತಕ್ಕೆ ಒಳಪಟ್ಟಿರುವ ಪ್ರದೇಶದಲ್ಲಿದೆ” ಎಂದಿದ್ದಾರೆ. “ಕೈಲಾಸ ಮಾನಸ ಸರೋವರದ ಯಾತ್ರಾರ್ಥಿಗಳು ಬಳಸುತ್ತಿದ್ದ ಹಾಗೂ ಈ ಮುಂಚೆಯೇ ಇದ್ದ ಮಾರ್ಗವನ್ನೇ ಈ ರಸ್ತೆ ಒಳಗೊಂಡಿದೆ. ಪ್ರಸಕ್ತ ಯೋಜನೆಯಡಿ, ಯಾತ್ರಿಗಳಿಗೆ, ಸ್ಥಳೀಯರಿಗೆ ಹಾಗೂ ವ್ಯಾಪಾರಿಗಳಿಗೆ ಬಳಸಲು ಸುಲಭವಾಗುವಂತೆ ಅದೇ ರಸ್ತೆಯನ್ನು ದುರಸ್ತಿಪಡಿಸಲಾಗಿದೆ,” ಎಂದು ಶನಿವಾರ ಬಿಡುಗಡೆ ಮಾಡಲಾಗಿರುವ ಎಂಇಎ ಹೇಳಿಕೆ ಸ್ಪಷ್ಟಪಡಿಸಿದೆ.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗಳನ್ನು ಭಾರತೀಯ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಹೊಸ ರಾಜಕೀಯ ಭೂಪಟವನ್ನು ಭಾರತ ಬಿಡುಗಡೆ ಮಾಡಿದಾಗಿನಿಂದ ಈ ಎರಡೂ ನೆರೆಹೊರೆ ದೇಶಗಳ ನಡುವೆ ಗಡಿಗೆ ಸಂಬಂಧಿಸಿದಂತೆ ಪ್ರಕ್ಷುಬ್ಧತೆ ಹೊಗೆಯಾಡತೊಡಗಿದೆ. ಹೊಸ ರಾಜಕೀಯ ಭೂಪಟದಲ್ಲಿ ಕಾಲಾಪಾನಿಯನ್ನು ಭಾರತೀಯ ಪ್ರದೇಶವಾಗಿ ತೋರಿಸಿರುವುದು ಕಠ್ಮಂಡುವಿನಿಂದ ತೀವ್ರ ಆಕ್ಷೇಪಣೆಗೆ ಗುರಿಯಾಯಿತಲ್ಲದೇ ನೇಪಾಳದ ಬೀದಿಗಳಲ್ಲಿ ಪ್ರತಿಭಟನೆಗಳಿಗೆ ಕಾರಣವಾಯಿತು. ಆದರೆ, ಸದರಿ ಭೂಪಟವು ಈ ಹಿಂದಿದ್ದ ಪ್ರದೇಶಗಳ ವಿವರಗಳನ್ನೇ ಒಳಗೊಂಡಿವೆ ಎಂದು ಭಾರತ ತನ್ನ ನಿಲುವನ್ನು ಕಾಯ್ದುಕೊಂಡಿತು.

ಕಠ್ಮಂಡು ಇಂದು ಬಿಡುಗಡೆ ಮಾಡಿರುವ ತನ್ನ ಹೊಸ ಹೇಳಿಕೆಯಲ್ಲಿ, ಮೇ 2015ರಂದೇ ಈ ಕುರಿತ ತನ್ನ ಪ್ರತಿಭಟನೆಯನ್ನು ಸಲ್ಲಿಸಲಾಗಿದೆ ಎಂಬುದನ್ನು ನೆನಪಿಸಿದೆ. ನೇಪಾಳದ ಒಪ್ಪಿಗೆಯಿಲ್ಲದೇ ಲಿಪು ಲೇಖ್‌ ಕಣಿವೆ ಮಾರ್ಗವನ್ನು ಉಭಯ ದೇಶಗಳ ನಡುವಿನ ವಾಣಿಜ್ಯ ಮಾರ್ಗವಾಗಿಸಲು ಭಾರತ ಮತ್ತು ಚೀನಾ ದೇಶಗಳು ಒಪ್ಪಿಗೆ ಸೂಚಿಸಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದಾಗಲೇ ಪ್ರತಿಭಟನೆ ಸಲ್ಲಿಸಲಾಗಿತ್ತು ಎಂದು ತಿಳಿಸಿದೆ. “ಈ ಏಕಪಕ್ಷೀಯ ಕ್ರಮವು ಉಭಯ ದೇಶಗಳ ನಡುವೆ ನಡೆದಿದ್ದ ತಿಳಿವಳಿಕೆ ಒಪ್ಪಂದಕ್ಕೆ ವಿರುದ್ಧವಾಗಿದೆ. ಗಡಿ ವಿಷಯಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಸಂಧಾನದ ಮೂಲಕವೇ ಕಂಡುಕೊಳ್ಳಬೇಕೆಂದು ಪ್ರಧಾನಮಂತ್ರಿಗಳ ಮಟ್ಟದಲ್ಲಿ ಬಂದ ತೀರ್ಮಾನಕ್ಕೆ ವ್ಯತಿರಿಕ್ತವಾಗಿದೆ” ಎಂದು ನೇಪಾಳ ಇಂದು ನೆನಪಿಸಿದೆ.

ಆದರೆ, “ಗಡಿಗೆ ಸಂಬಂಧಿಸಿದ ಎಲ್ಲಾ ವಿವಾದಗಳನ್ನು ನಿರ್ವಹಿಸಲು ಒಂದು ವ್ಯವಸ್ಥೆಯನ್ನು ಭಾರತ ಮತ್ತು ನೇಪಾಳ ಸ್ಥಾಪಿಸಿಕೊಂಡಿವೆ. ನೇಪಾಳದೊಂದಿಗಿನ ಗಡಿಯನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಗಡಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ವಿಷಯಗಳನ್ನು ರಾಜತಾಂತ್ರಿಕ ಮಾತುಕತೆ ಹಾಗೂ ನೇಪಾಳದೊಂದಿಗೆ ನಾವು ಹೊಂದಿರುವ ನಿಕಟ ಹಾಗೂ ಮಿತ್ರತ್ವ ರೂಪದ ದ್ವಿಪಕ್ಷೀಯ ಸಂಬಂಧಗಳ ಆದರ್ಶದ ಹಿನ್ನೆಲೆಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಭಾರತ ಬದ್ಧವಾಗಿದೆ,” ಎಂದು ಎಂಇಎ ಶನಿವಾರ ಹೊರಡಿಸಿರುವ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದೆ.

ಕೋವಿಡ್-‌19 ತುರ್ತುಪರಿಸ್ಥಿತಿ ತಂದಿಟ್ಟಿರುವ ಸವಾಲುಗಳನ್ನು ಉಭಯ ದೇಶಗಳ ಸಮಾಜಗಳು ಹಾಗೂ ಸರಕಾರಗಳು ಯಶಸ್ವಿಯಾಗಿ ನಿರ್ವಹಿಸಿದ ನಂತರ ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತುಕತೆ ನಿಗದಿಪಡಿಸುವ ಪ್ರಕ್ರಿಯೆಯಲ್ಲಿ ಉಭಯ ಪಕ್ಷಗಳು ತೊಡಗಿವೆ ಎಂದೂ ಭಾರತ ಹೇಳಿದೆ. ಆದರೆ, ಕಳೆದ ವರ್ಷ ಕಾಲಾಪಾನಿ ವಿವಾದ ಉಲ್ಬಣಗೊಂಡ ನಂತರ, ಇಬ್ಬರೂ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಮಾತುಕತೆ ನಡೆಸುವ ಪ್ರಸ್ತಾಪವನ್ನು ಕಠ್ಮಂಡು ಎರಡು ಸಲ ಮಾಡಿದಾಗ್ಯೂ ಯಾವುದೇ ಫಲಿತಾಂಶ ದಕ್ಕಲಿಲ್ಲ ಎಂದು ನೇಪಾಳದ ವಿದೇಶಾಂಗ ಸಚಿವಾಲಯದ ಹೇಳಿಕೆ ಸ್ಪಷ್ಟಪಡಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.