ನವದೆಹಲಿ: ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂಕೋರ್ಟ್, ಸದ್ಯಕ್ಕೆ ಬಹುಮತ ಸಾಬೀತು ಅಗತ್ಯವಿಲ್ಲ ಎಂದು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಮಹಾರಾಷ್ಟ್ರದಲ್ಲಾದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಇದರಿಂದಾಗಿ ನಿನ್ನೆ ಸುಪ್ರೀಂ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಇಂದು ಅದರ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಿತು.
ಬಿಜೆಪಿ ಇಂದೇ ಬಹುಮತ ಸಾಬೀತುಪಡಿಸಲಿ. ಅವರು ಯಾರಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಅನ್ನೋದು ಯಾರಿಗೂ ತಿಳಿದಿಲ್ಲ. ಅವರಿಗೆ ಬಹುಮತ ಇದೆ ಎಂದಾದರೆ ಇಂದೇ ಅದನ್ನು ಸಾಬೀತುಪಡಿಸಲಿ. ಇಲ್ಲವಾದಲ್ಲಿ ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಲಿ ಎಂದು ಶಿವಸೇನೆ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ಶಿವಸೇನೆ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ನಿನ್ನೆ ಬೆಳಿಗ್ಗೆ 5:47ಕ್ಕೆ ಆಶ್ಚರ್ಯಕರ ರೀತಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತೆಗೆದು ಹಾಕಲಾಯ್ತು. ಆ ಬಳಿಕ 3 ಗಂಟೆಗೂ ಕಡಿಮೆ ಅವಧಿಯಲ್ಲಿ ದೇವೆಂಧ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಆ ಬಳಿಕ ಆಗಿದ್ದೆಲ್ಲ ಆಶ್ಚರ್ಯ. ಅವರು ಯಾವ ದಾಖಲೆಗಳಗಳನ್ನಿಟ್ಟು ಸರ್ಕಾರ ರಚನೆ ಮಾಡಿದ್ದಾರೆ? ಎಲ್ಲವೂ ಜನಾದೇಶದ ವಿರುದ್ಧ ನಡೆದಿದೆ ಎಂದು ವಾದಿಸಿದರು.
ಬಿಜೆಪಿ ಇಂದೇ ಬಹುಮತ ಸಾಬೀತುಪಡಿಸಲಿ. ಅವರು ಯಾರಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಅನ್ನೋದು ಯಾರಿಗೂ ತಿಳಿದಿಲ್ಲ. ಅವರಿಗೆ ಬಹುಮತ ಇದೆ ಎಂದಾದರೆ ಇಂದೇ ಅದನ್ನು ಸಾಬೀತುಪಡಿಸಲಿ. ಇಲ್ಲವಾದಲ್ಲಿ ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಲಿ ಎಂದು ವಾದ ಮಂಡಿಸಿದರು.
ಇದು ಪ್ರಜಾಪ್ರಭುತ್ವದ ಕಗ್ಗೊಲೆ: ಬಳಿಕ ವಾದ ಮಂಡಿಸಿದ ಎನ್ಸಿಪಿ-ಕಾಂಗ್ರೆಸ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಕೇವಲ 42-43 ಸೀಟುಗಳನ್ನು ಗೆದ್ದ ಎನ್ಸಿಪಿಯ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಲು ಹೇಗೆ ಸಾಧ್ಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ವಾದಿಸಿದರು.
ನಿನ್ನೆಯಷ್ಟೇ ಅಜಿತ್ ಪವಾರ್ ಶಾಸಕಾಂಗ ಪಕ್ಷದ ನಾಯಕನಲ್ಲ ಎಂದು ಎನ್ಸಿಪಿ ನಿರ್ಧರಿಸಿದೆ. ಅವರು ಅವರದ್ದೇ ಪಕ್ಷದ ಬೆಂಬಲವಿಲ್ಲದೆ ಡಿಸಿಎಂ ಆಗಿ ಮುಂದುವರಿಯಲು ಹೇಗೆ ಸಾಧ್ಯ? ಹೀಗಾಗಿ ಸುಪ್ರೀಂಕೋರ್ಟ್ 24 ಗಂಟೆಯೊಳಗೆ ಬಹುಮತ ಸಾಬೀತಿಗೆ ಆದೇಶಿಸಬೇಕು. 1998ರಲ್ಲಿ ಉತ್ತರಪ್ರದೇಶ ಹಾಗೂ ಕಳೆದ ವರ್ಷ ಕರ್ನಾಟಕದಲ್ಲಿ 24 ಗಂಟೆಯೊಳಗೆ ಬಹುಮತ ಸಾಬೀತಿಗೆ ಆದೇಶಿಸಿದಂತೆ ಘನ ನ್ಯಾಯಾಲಯ ಆದೇಶಿಸಬೇಕೆಂದು ಕೋರಿದರು.
ಮೂರೂ ಪಕ್ಷಗಳಿಗೆ ಇಲ್ಲಿ ಯಾವುದೇ ಮೂಲಭೂತ ಹಕ್ಕು ಇಲ್ಲ: ಬಳಿಕ ವಾದ ಮಂಡಿಸಿದ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ, ನ್ಯಾಯಾಂಗ ಹಸ್ತಕ್ಷೇಪಕ್ಕೂ ಮುಕ್ತವಾಗಿರದ ಕೆಲವು ವಿಷಯಗಳು ರಾಷ್ಟ್ರಪತಿಗಳ ಬಳಿ ಇರುತ್ತದೆ. ಅದನ್ನು ಸಾರ್ವಜನಿಕರಿಗೆ ಮುಕ್ತವಾಗಿಡಲು ಆಗುವುದಿಲ್ಲ.
ಬಹುಮತ ಸಾಬೀತಿಗೆ ನ್ಯಾಯಾಲಯ ಆದೇಶ ಹೊರಡಿಸುವ ಅನಿವಾರ್ಯತೆ ಇಲ್ಲ. ರಾಜ್ಯಪಾಲರ ನಿರ್ಧಾರವೇನು ಕಾನೂನು ಬಾಹಿರವಾಗಿಲ್ಲ. ಬಹುಮತ ಸಾಬೀತಿಗೆ ದಿನಾಂಕವನ್ನು ಕೋರ್ಟ್ ಇಂದೇ ಆದೇಶಿಸಬಾರದು. ಈ ಮೂರೂ ಪಕ್ಷಗಳಿಗೆ ಇಲ್ಲಿ ಯಾವುದೇ ಮೂಲಭೂತ ಹಕ್ಕು ಇಲ್ಲ ಎಂದು ವಾದಿಸಿದರು.
ನೋಟಿಸ್ ನೀಡಿದ ಕೋರ್ಟ್: ವಾದ-ವಿವಾದಗಳನ್ನು ಆಲಿಸಿದ ಕೋರ್ಟ್ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ಗೆ ನೋಟಿಸ್ ಜಾರಿಗೊಳಿಸಿದೆ. ಸದ್ಯಕ್ಕೆ ಬಹುಮತ ಸಾಬೀತು ಅಗತ್ಯವಿಲ್ಲ ಎಂದು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.