ಹೈದರಾಬಾದ್: ಎನ್ಕೌಂಟರ್ ಮೂಲಕ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಹುಟ್ಟಡಗಿಸಿದ್ದ ಸೈಬರಾಬಾದ್ ಪೊಲೀಸರ ವಿರುದ್ಧ ದೂರು ದಾಖಲಾಗಿದೆ.
ಉಪ್ಪಲ್ ಪೊಲೀಸ್ ಠಾಣೆಯಲ್ಲಿ ನೇನು ಸೈತಮ್ ಸಂಘಟನೆಯ ಅಧ್ಯಕ್ಷ ಡಿ.ಪ್ರವೀಣ್ ಕುಮಾರ್, ನಾಲ್ವರು ಅತ್ಯಾಚಾರ ಆರೋಪಿಗಳನ್ನು ನಕಲಿ ಎನ್ಕೌಂಟರ್ ಮೂಲಕ ಕೊಲ್ಲಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಬೆಂಕಿ ಹಚ್ಚಿ ಕ್ರೂರವಾಗಿ ಕೊಂದಿದ್ದ ಮೊಹಮದ್ ಆರಿಫ್, ಚಿಂತಕುಂಟ ಚೆನ್ನಕೇಶವುಲು, ಜೊಲ್ಲು ಶಿವ ಹಾಗೂ ಜೊಲ್ಲು ನವೀನ್ ಎಂಬ ಆರೋಪಿಗಳನ್ನು ಸೈಬರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ್ದರು. ಇದು ನಕಲಿ ಎನ್ಕೌಂಟರ್(fake encounter) ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ದೂರುದಾರ ಪ್ರವೀಣ್ ಆಗ್ರಹಿಸಿದ್ದಾರೆ. ಆದರೆ ಸದ್ಯ ಈ ಪ್ರಕರಣ ಕುರಿತು ಎನ್ಹೆಚ್ಆರ್ಸಿ ತನಿಖೆ ನಡೆಸುತ್ತಿರುವುದರಿಂದ ಈ ದೂರಿನ ಸಂಬಂಧ ಎಫ್ಐಆರ್ ದಾಖಲಿಸಿಲ್ಲ ಎಂದು ಉಪ್ಪಲ್ ಪೊಲೀಸರು ತಿಳಿಸಿದ್ದಾರೆ.