ಪಣಜಿ (ಗೋವಾ): ಕೆಲವು ದಿನಗಳ ಹಿಂದೆ ಗೋವಾ ಸಿಎಂ ಪ್ರಮೋದ್ ಸಾವಂತ್ಗೆ ಜೀವ ಬೆದರಿಕೆ ಹಾಗೂ ಬೈಗುಳಗಳನ್ನು ಹೊಂದಿದ ಸಂದೇಶಗಳು ಬರುತ್ತಿವೆ ಎಂದು ವರದಿಯಾದ ಬೆನ್ನಲ್ಲೇ ಗೋವಾದ ಹಲವು ಜನಪ್ರತಿನಿಧಿಗಳಿಗೆ ಇದೇ ರೀತಿಯ ಸಂದೇಶಗಳು ಬರುತ್ತಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಬಗ್ಗೆ ಸ್ವತಃ ಜನಪ್ರತಿನಿಧಿಗಳೇ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದಾರೆ. ಗೋವಾ ಫಾರ್ವರ್ಡ್ ಫಾರ್ಟಿಯ ಉಪಾಧ್ಯಕ್ಷರಾದ ದುರ್ಗಾದಾಸ್ ಕಾಮತ್ ಪೊಂಡಾ ಪೊಲೀಸ್ ಠಾಣೆಯಲ್ಲಿ ಹಾಗೂ ಬಿಜೆವೈಎಂ ಪಕ್ಷದ ಮಾಜಿ ನಾಯಕರಾಗಿರುವ ಪ್ರಣವ್ ಸವಾರ್ದೆಕರ್ ಕರ್ಚೋರೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಇಬ್ಬರಿಗೂ ಕೂಡಾ ಒಂದೇ ನಂಬರ್ನಿಂದ ಸಂದೇಶ ಬರುತ್ತಿದ್ದು, ಹಣಕ್ಕಾಗಿ ದುಷ್ಕರ್ಮಿಗಳು ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆ ಸಿಎಂ ಪ್ರಮೋದ್ ಸಾವಂತ್ ಅಂತಾರಾಷ್ಟ್ರೀಯ ನಂಬರ್ನಿಂದ ಬೆದರಿಕೆ ಬಂದಿದ್ದಾಗಿ ದೂರು ದಾಖಲಾಗಿತ್ತು.
ಸದ್ಯಕ್ಕೆ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 504, 506, 507, 384 ಅಡಿ ದೂರು ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.