ಹೈದರಾಬಾದ್: 'ಪೂರ್ವದಲ್ಲಿ ಹೊಸತೊಂದು ತಾರೆ ಉದಯಿಸಿತುʼ ಎಂದು ಪಂಡಿತ್ ಜವಾಹರ್ಲಾಲ್ ನೆಹರೂ ಹೆಮ್ಮೆಯಿಂದ ಬೀಗಿದ ವಿಮುಕ್ತ ಭಾರತ ಇನ್ನು 75 ವಾರಗಳಲ್ಲಿ 75 ನೇ ವರ್ಷದ ಸ್ವಾತಂತ್ರ್ಯ ದಿನ ಆಚರಿಸಲಿದೆ.
ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯ ಮಾಡುವುದು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರು, 'ಆಜಾದಿ ಕಾ ಅಮೃತ ಮಹೋತ್ಸವʼ ಕ್ಕೆ ಚಾಲನೆ ನೀಡುತ್ತಾ ಭಾರತದ ಸ್ವಾತಂತ್ರ್ಯ ಚಳವಳಿಯ ಸ್ಫೂರ್ತಿ ತುಂಬುವ ಗುರಿ ಇರಿಸಿಕೊಂಡಿದ್ದಾರೆ. ಉಪ್ಪಿನ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯ ಹೋರಾಟದ ಅದ್ಭುತ ಘಟನೆ. ದಂಡಿ ಸತ್ಯಾಗ್ರಹ ಎಂದೂ ಕರೆಯಲಾಗುವ ಈ ಮಹಾಗಾಥೆಗೆ ಇದೇ ಮಾರ್ಚ್ 12ಕ್ಕೆ ಭರ್ತಿ 91 ವರ್ಷ ತುಂಬಿತು. ಆ ಶುಭ ಸಂದರ್ಭದಲ್ಲೇ ಪ್ರಾರಂಭವಾದ ಅಮೃತ ಮಹೋತ್ಸವ ಆಚರಣೆ ರಾಷ್ಟ್ರೀಯ ಜಾಗೃತಿಗೆ ಒಳ್ಳೆಯ ಮುನ್ನುಡಿ ಬರೆಯುತ್ತಿದೆ. ಅಮೃತ ಮಹೋತ್ಸವದ ಅಂಗವಾಗಿ , ದೇಶದ 75 ಸ್ಥಳಗಳಲ್ಲಿ ಸ್ವಾತಂತ್ರ್ಯ ಹೋರಾಟದ 75 ಪ್ರಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಿಂದ ಮರೆತುಹೋದ ಹಲವಾರು ಕ್ಷಣಗಳನ್ನು ರಾಷ್ಟ್ರದ ಮುಂದೆ ಅನಾವರಣಗೊಳಿಸುತ್ತದೆ.
ಐದು ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರು, "ನಾವು ದೇಶಕ್ಕಾಗಿ ಸಾಯಲು ಈಗ ಸಾಧ್ಯ ಇಲ್ಲದಿದ್ದರೂ, ದೇಶಕ್ಕಾಗಿ ಬದುಕಬಹುದು" ಎಂದು ಹೇಳಿದ್ದರು. ಸ್ವಾತಂತ್ರ್ಯೋತ್ತರ ಯುಗದಲ್ಲಿ ಜನಿಸಿದ ದೇಶದ ಮೊದಲ ಪ್ರಧಾನಿ ಇವರು. ದೇಶ ಸ್ವಾತಂತ್ರ್ಯ ಪಡೆದ ನಂತರ ಉದಯಿಸಿದ ಹೊಸ ಪೀಳಿಗೆಗೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ತಿಳಿದಿಲ್ಲ. ಅವರು ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯವನ್ನು ಕಿತ್ತುಹಾಕುವ ಪ್ರಕ್ರಿಯೆಯಲ್ಲಿ ತಮ್ಮ ಪ್ರಾಣ ಅರ್ಪಿಸಿದರು. ಏಷ್ಯಾ ಮತ್ತು ಆಫ್ರಿಕಾದ ಅನೇಕ ದೇಶಗಳು ಭಾರತದ ಸ್ವಾತಂತ್ರ್ಯ ಚಳವಳಿಯ ಹಾದಿಯಲ್ಲಿ ಸಾಗಲು ದೇಶದ ಸ್ವಾತಂತ್ರ್ಯ ಸಂಗ್ರಾಮ ಪ್ರೇರಣೆ ಒದಗಿಸಿತು. ಈ ವಾಸ್ತವದ ಅರಿವಿನ ಕೊರತೆ " ದೇಶ ನನಗೆ ಏನು ನೀಡಿದೆ ? " ಎಂದು ಕೇಳುವ ಯುವಕರಲ್ಲಿ ಹತಾಶೆಯ ಋಣಾತ್ಮಕ ಪ್ರವೃತ್ತಿಗೆ ನಾಂದಿ ಹಾಡಿದೆ .
ಉದಾತ್ತ ಚೇತನಗಳ ತ್ಯಾಗದಿಂದ ಪವಿತ್ರವಾದ ಮಹಾನ್ ಭೂತಕಾಲವನ್ನು ಎಲ್ಲಾ ರಾಜ್ಯಗಳಲ್ಲಿನ ಈಗಿನ ಪೀಳಿಗೆಗೆ ಪರಿಚಯಿಸಬೇಕು. ಇಡೀ ನಾಗರಿಕ ಸಮಾಜ ಪಾಲ್ಗೊಳ್ಳುವ ಮೂಲಕ, ಈ ಅಮೃತ ಮಹೋತ್ಸವ ಮುಂದಿನ 25 ವರ್ಷಗಳ ಕಾಲ ದೇಶದ ಪ್ರಗತಿಯ ಹಾದಿಯನ್ನು ಸುಗಮಗೊಳಿಸುವ ವಿಚಾರ, ಯಶೋಗಾಥೆ, ಕೈಂಕರ್ಯ ಮತ್ತು ದೃಢ ಸಂಕಲ್ಪ ತುಂಬಬೇಕು.
ಸ್ವಾತಂತ್ರ್ಯ ಹೋರಾಟದ ನಾಯಕರ ಕರೆಗೆ ಸ್ಪಂದಿಸಿದ ಪ್ರತಿ ಹಳ್ಳಿ ಕೂಡ ತಾಯಿ ಭಾರತಿಗಾಗಿ ತನ್ನ ಕಂದಮ್ಮಗಳು ಮಾಡಿದ ತ್ಯಾಗಕ್ಕಾಗಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿತು. ರಾಷ್ಟ್ರವನ್ನು ಬ್ರಿಟಿಷ್ ಸಂಕೋಲೆಗಳಿಂದ ಮುಕ್ತಗೊಳಿಸಲು, ಭಾರತಾಂಬೆಯ ಆ ಪ್ರೀತಿಯ ಮಕ್ಕಳು ಸಂತೋಷದಿಂದ ಬ್ರಿಟಿಷರ ಗುಂಡುಗಳಿಗೆ ಒಡ್ಡಿಕೊಂಡರು. ಹುತಾತ್ಮರ ತ್ಯಾಗ ಸ್ಮರಿಸುವ ಉದ್ದೇಶದಿಂದ 75 ವಾರಗಳ ಕಾಲ ನಡೆಯುವ ಆಚರಣೆಗಳು ಆ ಮಹಾಮಹಿಮರ ಆಶಯಗಳನ್ನು ಈಡೇರಿಸಬೇಕು.
ಕ್ವಿಟ್ ಇಂಡಿಯಾ ಚಳುವಳಿ ಹಿಂದೆಂದೂ ಇಲ್ಲದ ರೀತಿಯಲ್ಲಿ ದೇಶವಾಸಿಗಳನ್ನು ಒಗ್ಗೂಡಿಸಿದೆ ಎಂದು ಪ್ರಧಾನಿ ಮೋದಿ 2017 ರಲ್ಲಿ ಹೇಳಿಕೆ ನೀಡಿದ್ದರು. ಅದನ್ನು ಅವರು ʼಭಾರತ್ ಚೋಡೋ ಆಂದೋಲನ್ ʼ (ಭಾರತ ಬಿಟ್ಟು ತೊಲಗಿ) ಎಂದು ಕರೆಯುವ ಬದಲಿಗೆ ʼಭಾರತ್ ಜೋಡೋ ಆಂದೋಲನ್ʼ ಎಂದು ಬಣ್ಣಿಸಿದ್ದರು. ಇದು ದೇಶದ ಎಲ್ಲ ಜನರಲ್ಲಿ ದೇಶಭಕ್ತಿಯ ಐಕ್ಯತೆಯನ್ನು ಹರಡುತ್ತಿದೆ. ಆ ಐಕ್ಯತೆ ಸಾಧಿಸಲು ಅಮೃತ ಮಹೋತ್ಸವ ಅತ್ಯುತ್ತಮ ಅವಕಾಶ ಒದಗಿಸುತ್ತಿದೆ. ಸಾಮಾನ್ಯ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದು ಸ್ವರಾಜ್ಯದ ಉದ್ದೇಶ ಎನ್ನುವುದಾದರೆ, ಜನ ಅದನ್ನು ಸಾಧಿಸುವುದಕ್ಕಾಗಿ ಒಗ್ಗಟ್ಟಿನಿಂದ ಸಾಗಲು ಇದು ಹೇಳಿ ಮಾಡಿಸಿದ ಸಮಯ.
ರಾಷ್ಟ್ರೀಯತಾವಾದಿ ಮನೋಭಾವ ಒಗ್ಗೂಡಿಸುವಲ್ಲಿನ ಕೊರತೆ ದೇಶದಲ್ಲಿ ಇದ್ದು ಭಾರತ ತನ್ನ ಸಹಜ ಸಾಮರ್ಥ್ಯ ಪ್ರದರ್ಶನ ಮಾಡಲು ಇರುವ ಪ್ರಮುಖ ಅಡೆತಡೆಗಳಲ್ಲಿ ಇದೂ ಕೂಡ ಒಂದಾಗಿದೆ. ಭಾರತ ಪ್ರಸ್ತುತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆ ಹೊಂದಿದೆ. 2025 ರ ವೇಳೆಗೆ ಬ್ರಿಟನ್ ದೇಶವನ್ನು ಹಿಂದಿಕ್ಕುವ ಮೂಲಕ ಇದು 5 ನೇ ಸ್ಥಾನ ಪಡೆಯುವ ನಿರೀಕ್ಷೆ ಇದೆ. 2030 ರ ವೇಳೆಗೆ ದೇಶ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಆಗಲಿದೆ ಎಂದು ಅಧ್ಯಯನಗಳು ಅಂದಾಜು ಮಾಡಿವೆ.
ದಂಡಿ ಸತ್ಯಾಗ್ರಹದ ಸಮಯದಲ್ಲಿ ರಾಷ್ಟ್ರೀಯ ಏಕತೆ ಪುನರುಜ್ಜೀವನಗೊಂಡರೆ ಭಾರತದ ಪ್ರಗತಿ ಮತ್ತಷ್ಟು ವೇಗ ಪಡೆಯುತ್ತದೆ. ಮಹಿಳೆಯರ ಪಾಲ್ಗೊಳ್ಳುವಿಕೆ ದಂಡಿ ಮೆರವಣಿಗೆಯ ಯಶಸ್ಸಿನ ಹಿಂದಿನ ಒಂದು ಕಾರಣವಾಗಿತ್ತು. ಮಹಿಳೆಯರನ್ನು ಸಶಕ್ತಗೊಳಿಸುವ ಯೋಜನೆಗಳ ಮೂಲಕ ಮಾತ್ರ ದೇಶದ ಭವಿಷ್ಯವನ್ನು ಪ್ರಕಾಶಮಾನಗೊಳಿಸಬಹುದು.