ಚಾಮರಾಜನಗರ: ಪ್ರತ್ಯೇಕ ಘಟನೆಗಳಲ್ಲಿ ಮಗು ಮತ್ತು ಬಾಲಕ ಅಸುನೀಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ ಶಾಲಾ ವಾಹನ ಹರಿದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಕಮರಹಳ್ಳಿಯಲ್ಲಿ ನಡೆದಿದೆ. ರಸ್ತೆಗೆ ದಿಢೀರ್ ಓಡಿ ಬಂದ ವೇಳೆ ಹಿಂಬದಿ ಚಕ್ರಕ್ಕೆ ಸಿಲುಕಿ ದಾರುಣವಾಗಿ ಮೃತಪಟ್ಟಿದೆ. ಖಾಸಗಿ ಶಾಲಾ ವಾಹನ ಚಾಲಕ ಗೌರಿಶಂಕರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂತೇಮರಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಗುರುವಾರ ಮಧ್ಯಾಹ್ನ ಕಬಿನಿ ನಾಲೆಗೆ ಕಾಲು ಜಾರಿ ಬಿದ್ದು 14 ವರ್ಷದ ಬಾಲಕ ಜೀವ ಕಳೆದುಕೊಂಡಿದ್ದಾನೆ. ಚಾಮರಾಜನಗರ ತಾಲೂಕಿನ ಬಸವಟ್ಟಿ ಗ್ರಾಮದ ರೋಹಿತ್ ಎಂಬಾತ ಮೃತಪಟ್ಟವ. ಸಂತೇಮರಹಳ್ಳಿ ಪೊಲೀಸರು ಶವ ಮೇಲೆತ್ತಿ, ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ.
ಎರಡು ಘಟನೆಗಳು ಸಂತೇಮರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಕಚ್ಚಿದ ಹಾವು ಕೊಂದು ಚೀಲದಲ್ಲಿ ತುಂಬಿ ಆಸ್ಪತ್ರೆಗೆ ಬಂದ ಯುವಕ - Snake Bite