ಕಂಡಕ್ಟರ್ ಬಸ್ ಓಡಿಸಿದ ಆರೋಪ: ವಾಹನ ಪಲ್ಟಿ, ಶಿಕ್ಷಕರು ಸೇರಿದಂತೆ ಪ್ರಯಾಣಿಕರು ಪಾರು
Published : Mar 13, 2024, 1:26 PM IST
ಚಾಮರಾಜನಗರ: ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾದ ಘಟನೆ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪ ನಡೆದಿದೆ. ಬಸ್ನಲ್ಲಿ 30 ಮಂದಿ ಪ್ರಯಾಣಿಕರಲ್ಲಿ ಶಿಕ್ಷಕರೇ ಹೆಚ್ಚು ಮಂದಿ ಇದ್ದರು. ಅದೃಷ್ಟವಶಾತ್ 6-7 ಮಂದಿ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೇ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹನೂರು ತಾಲೂಕಿನ ಲೋಕ್ಕನಹಳ್ಳಿ ಮಾರ್ಗವಾಗಿ ಒಡೆಯರ್ ಪಾಳ್ಯ ಕಡೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಆನೆ ಕಾರಿಡಾರನ ರಸ್ತೆಗೆ ಇಳಿದು ಪಲ್ಟಿಯಾಗಿದೆ. ಕೂಡಲೇ ಸ್ಥಳೀಯರು ದೌಡಾಯಿಸಿ ಬಸ್ಸಿನಲ್ಲಿದ್ದವರನ್ನು ಹೊರಕ್ಕೆ ಕರೆತಂದಿದ್ದು ರಕ್ಷಿಸಿದ್ದಾರೆ. ಕಿಟಕಿ ಬಳಿ ಕುಳಿತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನು, ಕಂಡಕ್ಟರ್ ಬಸ್ ಅನ್ನು ಓಡಿಸುತ್ತಿದ್ದರಿಂದ ಈ ಘಟನೆ ನಡೆದಿದೆ ಎಂಬ ಆರೋಪ ಪ್ರಯಾಣಿಕರು ಮಾಡುತ್ತಿದ್ದಾರೆ. ಇಂದು ಚಾಲಕನ ಬದಲು ನಿರ್ವಾಹಕ ಬಸ್ ಚಾಲನೆ ಮಾಡಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಹಾಗೂ ಪ್ರಯಾಣಿಕರು ಆರೋಪಿಸಿದ್ದಾರೆ.
ಬಸ್ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಗಡೆಗೆ ಪಲ್ಟಿಯಾಗಿದೆ. ಅದೃಷ್ಟವಶಾತ್ ಕೇವಲ ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಉಳಿದವರಿಗೆ ಮೂಳೆ ಹಾಗೂ ಹೊಟ್ಟೆ ಸೇರಿದಂತೆ ದೇಹದ ವಿವಿಧ ಒಳ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಪ್ರಯಾಣಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಓದಿ: ಎಚ್ಚರ! ಕೆಮ್ಮಿನಂತಹ ಸಾಮಾನ್ಯ ಲಕ್ಷಣ ಇಲ್ಲದೆಯೂ ಕಾಣಿಸಿಕೊಳ್ಳುತ್ತಿದೆ ಕ್ಷಯರೋಗ