ಕರ್ನಾಟಕ

karnataka

ಹಾಸನ: ಮಾರಣಾಂತಿಕ ಹಲ್ಲೆಗೊಳಗಾದ ಯುವಕ ಸಾವು; ಆರೋಪಿಗೆ ಪೊಲೀಸರ ಗುಂಡೇಟು - Hassan Murder Accused Arrest

By ETV Bharat Karnataka Team

Published : Jul 30, 2024, 7:07 AM IST

ಹಾಸನದಲ್ಲಿ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಮುಖ ಆರೋಪಿ ರಾಜು ಎಂಬಾತನನ್ನು ಪೊಲೀಸರು ಗುಂಡಿಕ್ಕಿ ಬಂಧಿಸಿದ್ದಾರೆ.

HASSAN MURDER
ಪೊಲೀಸರ ಪರಿಶೀಲನೆ (ETV Bharat)

ಹಾಸನ:ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಿಡಿಗೇಡಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಸೋಮವಾರ ಸಂಜೆ ಮೃತಪಟ್ಟಿದ್ದಾನೆ. ನಗರದ ಹೊರವಲಯದ ಕೆಐಎಡಿಬಿ ವೃತ್ತದ ಬಳಿ ಘಟನೆ ನಡೆದಿತ್ತು. ಹಾಲಿನ ಡೈರಿ ನಡೆಸುತ್ತಿದ್ದ ನಾಗತವಳ್ಳಿ ಗ್ರಾಮದ ಸತೀಶ್ ಮೃತಪಟ್ಟ ಯುವಕ.

ಘಟನೆಯ ವಿವರ:ಸತೀಶ ಎಂದಿನಂತೆ ಲಾರಿಯಲ್ಲಿ ಬಂದ ಹಾಲು ಇಳಿಸುತ್ತಿದ್ದ. ಈ ಸಂದರ್ಭದಲ್ಲಿ ಸುತ್ತುವರೆದ ಕೆಲವು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆಗೈದು ಪರಾರಿಯಾಗಿದ್ದರು. ಹಲ್ಲೆ ನಡೆಯುತ್ತಿದ್ದರೂ ಸ್ಥಳದಲ್ಲಿದ್ದವರು ಮೂಕಪ್ರೇಕ್ಷಕರಾಗಿ ನಿಂತಿದ್ದರು. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಸತೀಶ್ ಸಂಜೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮೃತ ಯುವಕನ ತಾಯಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಗನನ್ನು ಕೊಂದವರ ಬಂಧನಕ್ಕೆ ಆಗ್ರಹಿಸಿದರು.

ಕೊಲೆಗಾರರು ಹಾಸನ ತಾಲೂಕಿನ ಕುಂತಿಬೆಟ್ಟದಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿಗಳನ್ನು ಸುತ್ತುವರೆದಿದ್ದರು. ಈ ವೇಳೆ ಪ್ರಮುಖ ಆರೋಪಿ ರಾಜು ಎಂಬಾತನಿಗೆ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆತ ಪೊಲೀಸರ ಮೇಲೆಯೇ ದಾಳಿಗೆ ಮುಂದಾಗಿದ್ದು, ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಆನೇಕಲ್ ಪುರಸಭಾ ಸದಸ್ಯ ರವಿ ಬರ್ಬರ ಕೊಲೆ: ತನಿಖೆ ಚುರುಕುಗೊಳಿಸಿದ ಪೊಲೀಸರು - Municipal Councilor Murder

ABOUT THE AUTHOR

...view details