ಮೈಸೂರು: ದಕ್ಷಿಣ ಕಾಶಿಯೆಂಬ ಪ್ರಸಿದ್ಧಿಯ ನಂಜನಗೂಡು ಶ್ರೀ ನಂಜುಂಡೇಶ್ವರ ಸ್ವಾಮಿಗೆ ಭಕ್ತರು ಹರಕೆ ಹೊತ್ತು ಬಿಟ್ಟಿದ್ದ ಗೂಳಿಯ ಮೇಲೆ ಕಿಡಿಗೇಡಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನರಳಾಡುತ್ತಾ ಬಿದ್ದಿದ್ದ ಗೂಳಿಯನ್ನು ಕಂಡು ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜು ಎಂಬವರು ರಕ್ಷಣೆ ಮಾಡಿದ್ದಾರೆ.
ಶ್ರೀ ನಂಜುಂಡೇಶ್ವರನ ಹರಕೆ ಗೂಳಿಗೆ ಕಿಡಿಗೇಡಿಗಳಿಂದ ಮಚ್ಚಿನೇಟು: ಚಿಕಿತ್ಸೆ ನೀಡಿ ರಕ್ಷಿಸಿದ ವನ್ಯಜೀವಿ ಸಂರಕ್ಷಕ - Injured Bull rescued
ಕಿಡಿಗೇಡಿಗಳ ಮಚ್ಚಿನೇಟಿಂದ ಗಾಯಗೊಂಡಿದ್ದ ಗೂಳಿಯೊಂದನ್ನು ವನ್ಯಜೀವಿ ಸಂರಕ್ಷಕರೊಬ್ಬರು ರಕ್ಷಿಸಿದ್ದಾರೆ.
![ಶ್ರೀ ನಂಜುಂಡೇಶ್ವರನ ಹರಕೆ ಗೂಳಿಗೆ ಕಿಡಿಗೇಡಿಗಳಿಂದ ಮಚ್ಚಿನೇಟು: ಚಿಕಿತ್ಸೆ ನೀಡಿ ರಕ್ಷಿಸಿದ ವನ್ಯಜೀವಿ ಸಂರಕ್ಷಕ ಶ್ರೀನಂಜುಂಡೇಶ್ವರನ ಹರಕೆ ಗೂಳಿಗೆ ಕಿಡಿಗೇಡಿಗಳಿಂದ ಮಚ್ಚಿನೇಟು: ಚಿಕಿತ್ಸೆ ನೀಡಿ ರಕ್ಷಿಸಿದ ವನ್ಯಜೀವಿ ಸಂರಕ್ಷಕ](https://etvbharatimages.akamaized.net/etvbharat/prod-images/10-03-2024/1200-675-20951336-thumbnail-16x9-vny.jpg)
Published : Mar 10, 2024, 9:34 PM IST
ರಕ್ಷಣಾ ಕಾರ್ಯದ ವೇಳೆ ಗೂಳಿಯಿಂದ ತಿವಿಸಿಕೊಂಡು, ತನ್ನ ಬಲಗಾಲನ್ನು ತುಳಿಸಿಕೊಂಡು ಗಾಯ ಮಾಡಿಕೊಂಡಿದ್ದಾರೆ. ಆದರೂ ಬಿಡದೆ ಮೂಕಪ್ರಾಣಿಗೆ ಆಸರೆಯಾಗಿ, ಮಚ್ಚಿನಿಂದ ಹಲ್ಲೆ ನಡೆಸಿರುವ ಭಾಗಕ್ಕೆ ಚಿಕಿತ್ಸೆ ನೀಡಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಸಂರಕ್ಷಿಸಿ ಮತ್ತೆ ದೇವಾಲಯಕ್ಕೆ ಬಿಟ್ಟು ಮಾನವೀಯತೆ ಮೆರೆದಿದ್ದಾರೆ.
ಗೋಶಾಲೆ ಆರಂಭಿಸಲು ಸರ್ಕಾರಕ್ಕೆ ಒತ್ತಾಯ: "ನಂಜುಂಡೇಶ್ವರ ಸ್ವಾಮಿಗೆ ಹರಕೆ ಹೊತ್ತ ಭಕ್ತಾದಿಗಳು ಸಾಕಷ್ಟು ಹಸು, ಕರು, ಗೂಳಿಗಳನ್ನು ತಂದು ಬಿಡುತ್ತಾರೆ. ಆದರೆ, ಗೋವುಗಳಿಗೆ ಇಲ್ಲಿ ಯಾವುದೇ ರಕ್ಷಣೆ ಇಲ್ಲ. ಹಾಲು ಕುಡಿಯುವ ಕರುಗಳನ್ನೂ ತಂದು ಬಿಡುತ್ತಾರೆ. ಇದರಿಂದ ಸಾಕಷ್ಟು ಕರುಗಳು ಸಾವನ್ನಪ್ಪಿವೆ. ಸರ್ಕಾರ ದೇವಾಲಯದಲ್ಲಿ ಗೋಶಾಲೆ ಪ್ರಾರಂಭಿಸಿದರೆ ಗೋವುಗಳನ್ನು ಉಳಿಸಬಹುದು" ಎಂದು ಗೋಳೂರು ಸ್ನೇಕ್ ಬಸವರಾಜ್ ಮನವಿ ಮಾಡಿದ್ದಾರೆ.