ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಪರಮ ಭ್ರಷ್ಟರಾಗಿ ಹೊರಹೊಮ್ಮಿದ್ದಾರೆ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ - Pralhad Joshi

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಸಿದ್ದರಾಮಯ್ಯ ಕುರಿತು ಮಾತನಾಡಿದ್ದಾರೆ. ಅವರ ನೇರ ಹಸ್ತಕ್ಷೇಪ ಮತ್ತು ಆಶೀರ್ವಾದದಿಂದ ವಾಲ್ಮೀಕಿ ನಿಗಮ ಮತ್ತು ಮುಡಾ ಎರಡೂ ಹಗರಣಗಳು ನಡೆದಿವೆ ಎಂದಿದ್ದಾರೆ.

By ETV Bharat Karnataka Team

Published : Jul 21, 2024, 10:28 PM IST

union-minister-pralhad-joshi
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (ETV Bharat)

ಬೆಳಗಾವಿ : ಕಾಂಗ್ರೆಸ್ ಪಕ್ಷಕ್ಕೆ ಹೋದ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಡಿಎನ್ಎ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದು, ಪರಮ ಭ್ರಷ್ಟರಾಗಿ ಹೊರಹೊಮ್ಮಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ಮಾಡಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇರ ಹಸ್ತಕ್ಷೇಪ ಮತ್ತು ಆಶೀರ್ವಾದದಿಂದ ವಾಲ್ಮೀಕಿ ನಿಗಮ ಮತ್ತು ಮುಡಾ ಎರಡೂ ಹಗರಣಗಳು ನಡೆದಿವೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ಎದುರಿಸಬೇಕು. ಶುದ್ಧಹಸ್ತರಾದರೆ ಮತ್ತೆ ಅವರನ್ನೇ ಬೇಕಾದರೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.

ಪೂರ್ವಾಲೋಚನೆ ಇಲ್ಲದೇ ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಸುಳ್ಳು ಭರವಸೆ, ಗ್ಯಾರಂಟಿ ಕೊಟ್ಟು ಪರದಾಡುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಕಾಂಗ್ರೆಸ್ ಡಿಎನ್ಎದಲ್ಲಿ ಭ್ರಷ್ಟಾಚಾರವಿದೆ. ದೇಶದಲ್ಲಿ ಭ್ರಷ್ಟಾಚಾರವನ್ನು ರಕ್ತ ಬೀಜಾಸುರನಂತ ವ್ಯವಸ್ಥೆ ಸೃಷ್ಟಿಸಿದ್ದಾರೆ. ಭ್ರಷ್ಟಾಚಾರ ಎನ್ನುವ ಲಕ್ಷಾಂತರ ಮೊಟ್ಟೆಗಳನ್ನು ಇಟ್ಟು ಅದಕ್ಕೆ ಸದಾಕಾಲ ಕಾವು ಕೊಟ್ಟು ಬಂದಿದ್ದು ಕಾಂಗ್ರೆಸ್ ಪಕ್ಷ. ಜವಾಹರಲಾಲ್ ನೆಹರು ಕಾಲದಿಂದ ಹಿಡಿದು ಕಾಂಗ್ರೆಸ್​ನ ಎಲ್ಲಾ ಪ್ರಧಾನಮಂತ್ರಿಗಳ ಕಾಲದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರಗಳು, ಹಗರಣಗಳು ನಡೆದಿವೆ ಎಂದು ಪ್ರಲ್ಹಾದ್ ಜೋಶಿ ಆರೋಪಿಸಿದರು.

ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ 189 ಕೋಟಿ ರೂ. ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದೆ. ಸಿದ್ದರಾಮಯ್ಯನವರು ಅತ್ಯಂತ ಬಾಲಿಶವಾಗಿ ಮತ್ತು ನಿರ್ಲಜ್ಜತನದಿಂದ ತಮ್ಮನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಅಧಿಕಾರಿಗಳಿಂದ ಆಗಿದ್ದು ಎಂದಾದರೆ ನಾಗೇಂದ್ರ ಅವರನ್ನು ಏಕೆ ರಾಜೀನಾಮೆ ಕೊಡಿಸಿದಿರಿ? ಎಸ್ಐಟಿ ಅವರನ್ನು ಏಕೆ ಕರೆಸಿತ್ತು. ಕರೆಸಿ ಏನೂ ಮಾಡಿಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ, ಈ ಡ್ರಾಮಾ ಏಕೆ ಮಾಡಿದಿರಿ? ಎಂದು ಪ್ರಲ್ಹಾದ್ ಜೋಶಿ ಕುಟುಕಿದರು‌.

ನನ್ನ ಸಾರ್ವಜನಿಕ ಬದುಕು ಅತ್ಯಂತ ಶುದ್ಧ ಹಸ್ತವಾಗಿದೆ ಎಂದಿರುವ ಸಿದ್ದರಾಮಯ್ಯ ಹ್ಯುಬ್ಲೋಟ್‌ ವಾಚ್‌ ತೆಗೆದುಕೊಂಡಿದ್ದು ಏಕೆ? ಅರ್ಕಾವತಿ ರಿಡೂ ಹಗರಣದಲ್ಲಿ ಇವತ್ತಿಗೂ ಕೆಂಪಣ್ಣ ಆಯೋಗದ ವರದಿ ಏಕೆ ಜಾರಿ ಮಾಡುತ್ತಿಲ್ಲ‌? ಎಂದು ಪ್ರಲ್ಹಾದ್ ಜೋಶಿ ಕಿಡಿಕಾರಿದರು.

ಮನೆ ಹಾನಿ ಪರಿಹಾರ ಕಡಿಮೆ ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಶಿ, ಎಲ್ಲಿಯೂ ಪರಿಹಾರ ಕೊಡುತ್ತಿಲ್ಲ. ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮನೆ ಬಿದ್ದರೆ ನಾವು 5 ಲಕ್ಷ ಪರಿಹಾರ ಮಾಡಿದ್ದೆವು. ಈಗ ಅದನ್ನು 1 ಲಕ್ಷ ರೂ. ಕಡಿಮೆ ಮಾಡಿದ್ದಾರೆ. ಮನೆಯೊಳಗೆ ನೀರು ಹೊಕ್ಕರೆ 10 ಸಾವಿರ ಕೊಡುತ್ತಿದ್ದೆವು. ಅದನ್ನು 5 ಸಾವಿರ ರೂಪಾಯಿಗೆ ಇಳಿಸಿದ್ದಾರೆ. ಜನರ ಬಗ್ಗೆ ಕಾಳಜಿ ಇಲ್ಲ‌. ಗ್ಯಾರಂಟಿ ಹೆಸರಿನಲ್ಲಿ ಅರ್ಧಂಬರ್ಧ ಗ್ಯಾರಂಟಿ ಕೊಟ್ಟು, ಪೆಟ್ರೋಲ್-ಡೀಸೆಲ್ ಏರಿಸಿದ್ದಾರೆ. ಇತ್ತೀಚಿಗೆ ಯಾವ ರಾಜ್ಯದಲ್ಲೂ ತೈಲ ಬೆಲೆ ಏರಿಸಿಲ್ಲ‌. ಆದರೆ, ಇವರು ಜಾಸ್ತಿ ಮಾಡಿ ಜನರ ಮೇಲೆ ಹೊರೆ ಹಾಕಿದ್ದಾರೆ. ಹಾಗಾಗಿ, ತಕ್ಷಣವೇ ಎಚ್ಚೆತ್ತುಕೊಂಡು ಕೆಲಸ ಮಾಡಿ. ಮೊದಲು ನೀವು ರಾಜೀನಾಮೆ ಕೊಡಿ, ಉಳಿದಿದ್ದೆಲ್ಲಾ ಸರಿಯಾಗುತ್ತದೆ‌ ಎಂದು ಛೇಡಿಸಿದರು.

ಪ್ರವಾಹ ಪರಿಸ್ಥಿತಿ ಉದ್ಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲೇ ಉಳಿದು ಬಿಟ್ಟಿದ್ದಾರೆ ಎಂದು ದೂರಿದರು.

ಇದನ್ನೂ ಓದಿ :ಸಿದ್ದರಾಮಯ್ಯ ‌ಕೂಡಲೇ ರಾಜೀನಾಮೆ ‌ನೀಡಬೇಕು, ಬಿಜೆಪಿಗರ ವಿರುದ್ಧವೂ ಕ್ರಮ ಕೈಗೊಳ್ಳಿ: ಕೇಂದ್ರ ಸಚಿವ ಜೋಶಿ - Muda Scam

ABOUT THE AUTHOR

...view details