ಕರ್ನಾಟಕ

karnataka

ಗಂಡುಗಲಿ ಹಿರೇಮದಕರಿ ನಾಯಕನ ಸಮಾಧಿಗೆ ಇಲ್ಲ ರಕ್ಷಣೆ: ಸ್ಥಳದ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ - HIREMADAKARI NAYAKA GRAVE

By ETV Bharat Karnataka Team

Published : 4 hours ago

Updated : 3 hours ago

ಮಾಯಕೊಂಡದಲ್ಲಿ ಐತಿಹಾಸಿಕ ಮಹತ್ವ ಪಡೆದ ಹಲವು ಸ್ಮಾರಕಗಳಿವೆ. ಅದರಲ್ಲಿ ರಾಜ ಹಿರೇಮದಕರಿ ನಾಯಕ ಸಮಾಧಿಯು ಒಂದು. ಆದರೆ ಸಮಾಧಿಗೆ ಅಭಿವೃದ್ಧಿ ಕಾಣದೆ ಮತ್ತು ಸೂಕ್ತ ರಕ್ಷಣೆ ಇಲ್ಲದ ಕಾರಣ ಅನೈತಿಕ ಚಟುವಟಿಕೆಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಈ ಕುರಿತ ವರದಿ ಇಲ್ಲಿದೆ.

ಗಂಡುಗಲಿ ಹಿರೇಮದಕರಿನಾಯಕನ ಸಮಾಧಿಗೆ ಇಲ್ಲ ರಕ್ಷಣೆ
ಗಂಡುಗಲಿ ಹಿರೇಮದಕರಿನಾಯಕನ ಸಮಾಧಿಗೆ ಇಲ್ಲ ರಕ್ಷಣೆ (ETV Bharat)

ದಾವಣಗೆರೆ:ಚಿತ್ರದುರ್ಗದ ಪಾಳೇಗಾರರು ಶೌರ್ಯ ಪರಾಕ್ರಮಕ್ಕೆ ಹೆಸರುವಾಸಿ. ದಾವಣಗೆರೆ ಹಾಗೂ ಚಿತ್ರದುರ್ಗ ಭಾಗದಲ್ಲಿ ಆಳ್ವಿಕೆ ನಡೆಸಿದ್ದ ಪಾಳೇಗಾರರು ಇಡೀ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದರು.‌ ಅದೇ ಪಾಳೇಗಾರರ ಸಾಲಿನಲ್ಲಿ ಬರುವ ಹಿರೇಮದಕರಿ ನಾಯಕ ಕೂಡ 1721-48ರ ತನಕ ಆಳ್ವಿಕೆ‌ ನಡೆಸಿ ವೀರಮರಣವನ್ನಪ್ಪಿದ್ದರು. ಅವರ ಸಮಾಧಿಯನ್ನು ದಾವಣಗೆರೆ ಜಿಲ್ಲೆಯ ಮಾಯಕೊಂಡದಲ್ಲಿ ಇಂದಿಗೂ ಕಾಣಬಹುದು.

ಸರಿಯಾದ ರಕ್ಷಣೆ ಇಲ್ಲದೆ ಇರುವುದರಿಂದ ಹಿರೇಮದಕರಿ ನಾಯಕನ ಸಮಾಧಿ ಕುಡುಕ‌ರ ಅಡ್ಡೆಯಾಗಿ ಬದಲಾಗಿದೆ. ಸಮಾಧಿಯ ಸುತ್ತಮುತ್ತ ಮದ್ಯದ ಬಾಟಲ್​ಗಳು ಬಿದ್ದಿವೆ. ಸಮಾಧಿ ಸುತ್ತ ನಿರ್ಮಿಸಲಾಗಿದ್ದ ಕಾಂಪೌಂಡ್ ಕುಸಿದು ವರ್ಷಗಳೇ ಕಳೆದಿವೆಯಾದರೂ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿಲ್ಲ. ಈಗಲಾದರೂ ಎಚ್ಚೆತ್ತು ಸಮಾಧಿ ಜೀರ್ಣೋದ್ಧಾರ ಮಾಡಿ ಸೂಕ್ತ ರಕ್ಷಣೆ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಿರೇಮದಕರಿನಾಯಕನ ಸಮಾಧಿ ಅಭಿವೃದ್ಧಿಗೆ ಗ್ರಾಮಸ್ಥರ ಆಗ್ರಹ (ETV Bharat)

ಗ್ರಾಮಸ್ಥರಾದ ಜಗದೀಶ್ 'ಈಟಿವಿ ಭಾರತ'ದ ಜೊತೆ ಮಾತನಾಡಿ, "ಈ ಸಮಾಧಿ ಮೊದಲು ಬಹಳ ಚೆನ್ನಾಗಿತ್ತು‌. ಈಗ ಹಿರೇಮದಕರಿ ನಾಯಕನ ಸಮಾಧಿ ಪಕ್ಕದಲ್ಲೇ ಕೂತು ಮದ್ಯಪಾನ, ಇಸ್ಪೀಟ್ ಆಡುತ್ತಿದ್ದಾರೆ. ಸುತ್ತ ಇರುವ ಕಾಂಪೌಂಡ್ ಬಿದ್ದಿದೆ ಈ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ" ಎಂದರು‌.

ಹಿರೇಮದಕರಿನಾಯಕನ ಸಮಾಧಿ (ETV Bharat)

ಗ್ರಾಮಸ್ಥರಾದ ಗೌಡ್ರು ಅಶೋಕ ಮಾತನಾಡಿ, "ಹಿರೇಮದಕರಿ ನಾಯಕನ ಸಮಾಧಿಯನ್ನು ಅಭಿವೃದ್ಧಿ ಮಾಡದೆ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಮಾಡಲು ಬರುವ ಅನುದಾನ ವಾಪಾಸ್ ಹೋಗಿರುವ ಘಟನೆ ನಡೆದಿದೆ. ಸಮಾಧಿ ಹಾಳಾಗಿದೆ. ಹಿರೇಮದಕರಿ ನಾಯಕನ ಸಮಾಧಿ ಪುಣ್ಯ ಸ್ಥಳವಾಗಿದೆ. ಇಲ್ಲಿ ಮದ್ಯಪಾನ, ಇಸ್ಪೀಟ್ ಆಡುತ್ತಿದ್ದಾರೆ. ಸಂಬಂಧಪಟ್ಟರು ಎಚ್ಚೆತ್ತು ಸಮಾಧಿ ಸ್ಥಳವನ್ನು ಅಭಿವೃದ್ಧಿ ಮಾಡಬೇಕು. ಇಲ್ಲಿನ ಸಮಾಧಿ ರಕ್ಷಣೆಗೆ ಬಬ್ಬ ಕಾವಲುಗಾರನನ್ನು ನೇಮಿಸಬೇಕು" ಎಂದು ಆಗ್ರಹಿಸಿದರು.

ಹಿರೇಮದಕರಿನಾಯಕನ ಸಮಾಧಿ (ETV Bharat)

ಸಮಾಧಿ ಅಭಿವೃದ್ಧಿ 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ:ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, "ಹಿರೇಮದಕರಿ ನಾಯಕನ ಸಮಾಧಿ ಅಭಿವೃದ್ಧಿ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಐದು ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಿಎಂ ಅವರು ಮೊದಲ ಹಂತದಲ್ಲಿ ಎರಡು ಕೋಟಿ ಅನುದಾನಕ್ಕೆ ಅನುಮತಿ ನೀಡಿದ್ದಾರೆ‌. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ. ಈ ಐದು ಕೋಟಿ ವೆಚ್ಚದಲ್ಲಿ ನೀಲನಕ್ಷೆ ರೆಡಿಯಾಗಿದೆ. ಅನುದಾನ ಬಂದ ತಕ್ಷಣ ಸಮಾಧಿಗೆ ರಸ್ತೆ, ಉದ್ಯಾನವನ, ಸಮಾಧಿ ಅಭಿವೃದ್ಧಿ, ಕಾಂಪೌಂಡ್ ಸೇರಿದಂತೆ ಇತರೆ ಅಭಿವೃದ್ಧಿ ಕೆಲಸ ಮಾಡಲಿದ್ದೇವೆ" ಎಂದು ತಿಳಿಸಿದರು.

ಸಮಾಧಿ ಬಳಿ ಕೂಳಿತು ಮದ್ಯ ಸೇವನೆ ಮಾಡಿರುವುದು (ETV Bharat)

ಹಿರೇಮದಕರಿ ನಾಯಕನ ಇತಿಹಾಸ: ಚಿತ್ರದುರ್ಗದ ಪಾಳೇಗಾರ ರಾಜ ಹಿರೇಮದಕರಿ ನಾಯಕ ಬಿಚ್ಚುಗತ್ತಿ ಭರ್ಮಣ್ಣ ನಾಯಕನ ಪುತ್ರ ಆಗಿದ್ದಾರೆ. ಚಿತ್ರದುರ್ಗ ಸಂಸ್ಥಾನವನ್ನು ಹಿರೇಮದಕರಿ ನಾಯಕ 1721 ರಿಂದ 1748 ತನಕ ಆಳಿದನು ಎಂಬುದು ಇತಿಹಾಸದಲ್ಲಿ ಉಲ್ಲೇಖವಿದೆ. ಪಾಳೇಗಾರ ಕೆಳದಿ ಬಸಪ್ಪ ನಾಯಕನ ಸೂಚನೆ ಮೇರೆಗೆ ಹರಪನಹಳ್ಳಿ ಪಾಳೆಗಾರ ಸೋಮಶೇಖರ ನಾಯಕ 1748ರಲ್ಲಿ ಚಿತ್ರದುರ್ಗ ಸಂಸ್ಥಾನಕ್ಕೆ ಸೇರಿದ್ದ ಮಾಯಕೊಂಡ ಕೋಟೆಗೆ ಮುತ್ತಿಗೆ ಹಾಕಿದ್ದನು.

ಮದ್ಯದ ಬಾಟಲಿ ಬಿದ್ದಿರುವುದು (ETV Bharat)

ಈ ವಿಚಾರ ತಿಳಿದ ಹಿರೇಮದಕರಿ ನಾಯಕ ಮತ್ತು ಸೋಮಶೇಖರ ನಾಯಕರ ನಡುವೆ ಮಾಯಕೊಂಡದಲ್ಲಿ ಯುದ್ಧ ನಡೆಯುತ್ತದೆ. ಇಬ್ಬರೂ ಪಾಳೇಗಾರರು ಯುದ್ಧದಲ್ಲಿ ಸೆಣೆಸುತ್ತಾರೆ. ದುರಂತ ಎಂದರೇ ರಣರಂಗದಲ್ಲಿ ಮದಕರಿನಾಯಕ ವೀರಮರಣ ಹೊಂದಿದ್ದಾ‌ನೆ. ಅಲ್ಲದೆ ಹಿರೇಮದಕರಿ ನಾಯಕ ಪುತ್ರ ಕಸ್ತೂರಿ ರಂಗಪ್ಪ ನಾಯಕ ಹರಪನಹಳ್ಳಿ ಪಾಳೆಗಾರರೊಂದಿಗೆ ಹೋರಾಡಿ ಹಿಮ್ಮೆಟ್ಟಿಸಿ ಮಾಯಕೊಂಡವನ್ನು ಉಳಿಸಿಕೊಳ್ಳುತ್ತಾರೆ. ಆನಂತರ ಮಾಯಕೊಂಡದಲ್ಲೇ ಹಿರೇಮದಕರಿ ನಾಯಕರ ಸಮಾಧಿ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಸುಮಾರು 300 ವರ್ಷ ಹಳೆಯ ಸಮಾಧಿ ಇದಾಗಿದ್ದರಿಂದ ಸಾಕಷ್ಟು ಭಾರಿ ನಿಧಿಗಾಗಿ ಶೋಧ ಕೂಡ ನಡೆದಿದೆ. ಸರಿಯಾದ ರಕ್ಷಣೆ ಇಲ್ಲದೆ ಅನಾಥವಾಗಿದ್ದ ಹಿರೇಮದಕರಿ ನಾಯಕನ ಸಮಾಧಿಗೆ 2012ರಲ್ಲಿ ನಿಧಿಗಳ್ಳರು ಸಾಕಷ್ಟು ಬಾರಿ ಹಾನಿ ಮಾಡಿದ್ದರು.

ಇದನ್ನೂ ಓದಿ:ಮಾಯಕೊಂಡ ಗ್ರಾಮದಲ್ಲಿ ಕಳ್ಳರ ಕಾಟ ತೀವ್ರ; ಗ್ರಾಮ ಪಂಚಾಯತಿಯಿಂದ ಸಿಸಿ ಕ್ಯಾಮೆರಾಗಳ ಅಳವಡಿಕೆ - Theft Cases Increased Mayakonda

Last Updated : 3 hours ago

ABOUT THE AUTHOR

...view details