ಕರ್ನಾಟಕ

karnataka

By ETV Bharat Karnataka Team

Published : Aug 5, 2024, 9:52 PM IST

Updated : Aug 5, 2024, 10:13 PM IST

ETV Bharat / state

ಪಶು ಆರೈಕೆಗೆ ವಿಶೇಷ ಆಂಬ್ಯುಲೆನ್ಸ್ ಸೇವೆ '1962': ಸರ್ಕಾರದ ಯೋಜನೆಗೆ ಬೇಕಿದೆ ಪ್ರಚಾರ - Animal Care Ambulance

ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆ ಆರಂಭಿಸಿದೆ. ಆದರೆ ಈ ಯೋಜನೆ ಇನ್ನೂ ಸಾಕಷ್ಟು ಜನರಿಗೆ ಗೊತ್ತಿಲ್ಲ.

Special Ambulance
ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆ (ETV Bharat)

ಧಾರವಾಡ ಜಿಲ್ಲೆಯ ಉಸ್ತುವಾರಿ ಹನುಮಂತ ಅಧೋನಿ ಮಾತನಾಡಿದರು (ETV Bharat)

ಹುಬ್ಬಳ್ಳಿ: ಭೂಮಿ‌ ಮೇಲೆ ಹುಟ್ಟಿದ ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ. ಮನುಷ್ಯರಂತೆ ಪ್ರಾಣಿಗಳಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವ ಉದ್ದೇಶದಿಂದ 'ಜೀವ ರಕ್ಷಕ ಆಂಬ್ಯುಲೆನ್ಸ್ ಸೇವೆ'ಯನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಈ ಯೋಜನೆ ಜಾರಿಗೆ ಬಂದು ಇಂದಿಗೆ ಸರಿಯಾಗಿ ಒಂದು ವರ್ಷ. ಆದರೆ ಪಶುಗಳ ರಕ್ಷಣೆಗೂ ಆಂಬ್ಯುಲೆನ್ಸ್ ಇರುವ ಬಗ್ಗೆ ಬಹುತೇಕರಿಗೆ ಗೊತ್ತೇ ಇಲ್ಲ.

'108' ತುರ್ತು ಸೇವೆಗಳ ಆಂಬ್ಯುಲೆನ್ಸ್‌ನಂತೆಯೇ '1962' ಆಂಬ್ಯುಲೆನ್ಸ್ ಸೇವೆ ಕರ್ನಾಟಕದ ರೈತರಿಗೆ ಒಂದು ದೊಡ್ಡ ವರವಾಗಿದೆ. ಕರ್ನಾಟಕ 1962 ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಸಹಾಯವಾಣಿ ಬೆಂಗಳೂರಿನಲ್ಲಿ ಕೇಂದ್ರೀಕೃತ ಕಾಲ್ ಸೆಂಟರ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ರಾಜ್ಯಾದ್ಯಂತ 275 ಸಂಚಾರಿ ಪಶುವೈದ್ಯಕೀಯ ಘಟಕಗಳ ಮೂಲಕ ಸೇವೆ ನೀಡುತ್ತಿದೆ.

ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ನಡುವಿನ ಸಹಯೋಗ ಮತ್ತು ಮುಂಬೈ ಮೂಲದ ಸಂಸ್ಥೆಯಾದ ಎಡುಸ್‌ಪಾರ್ಕ್ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್​ನೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದ್ದು, ಆಗಸ್ಟ್ 5, 2023ರಿಂದ ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.

'1962' ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವೆಯು ತುರ್ತು ಪಶುವೈದ್ಯಕೀಯ ಚಿಕಿತ್ಸೆ, ರೋಗನಿರ್ಣಯ ಮತ್ತು ಶಸ್ತ್ರಚಿಕಿತ್ಸಾ ವಿಧಾನಗಳನ್ನು ಒಳಗೊಂಡಂತೆ ಸಮಗ್ರ ಶ್ರೇಣಿಯ ಪಶುವೈದ್ಯಕೀಯ ಸೇವೆ ಒದಗಿಸುತ್ತಿದೆ. ಪಶುಪಾಲಕರ ಮನೆ ಬಾಗಿಲಿಗೆ ತಕ್ಷಣದ, ಉತ್ತಮ ಗುಣಮಟ್ಟದ ಮತ್ತು ಉಚಿತ ಆರೈಕೆಯನ್ನು ನೇರವಾಗಿ ನೀಡುತ್ತಿರುವುದು ರೈತರಿಗೆ ವರದಾನವಾಗಿದೆ.

ಪ್ರಸ್ತುತ, ಪ್ರತಿದಿನ ಸುಮಾರು 900ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಆಗಸ್ಟ್ 2023ರಿಂದ ಜುಲೈ 2024ರ ವರೆಗೆ ಒಟ್ಟು 2,76,011 ಪ್ರಾಣಿಗಳಿಗೆ ತುರ್ತು ಪಶುವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 1,78,572 ದನಗಳು, 17,282 ಎಮ್ಮೆಗಳು, 48,566 ಕುರಿಗಳು, 28,293 ಆಡು, 359 ಹಂದಿಗಳು ಮತ್ತು 2,939 ನಾಯಿಗಳು ಹಾಗೂ ಇತರೆ ಪ್ರಾಣಿಗಳನ್ನು ಉಪಚರಿಸಲಾಗಿದೆ.

ಮಹತ್ವಾಕಾಂಕ್ಷೆಯ ಈ ಯೋಜನೆ ಕರ್ನಾಟಕ ಸರ್ಕಾರದ ಪ್ರಾಣಿಗಳನ್ನು ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸೇವಾಬದ್ಧ ಅಧಿಕಾರಿಗಳ ಅವಿರತ ಮಾರ್ಗದರ್ಶನ ಮತ್ತು ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯಗತವಾಗುತ್ತಿದೆ. '1962' ತುರ್ತು ಪಶುವೈದ್ಯಕೀಯ ಆಂಬ್ಯುಲೆನ್ಸ್ ಸೇವಾ ಯೋಜನೆಯು ತುರ್ತು ಚಿಕಿತ್ಸೆ ಅಗತ್ಯವಿರುವ ಪ್ರಾಣಿಗಳಿಗೆ ಸಮಯೋಚಿತ ತಜ್ಞ ಆರೈಕೆಯನ್ನು ನೀಡುವುದರಲ್ಲಿ ಸಫಲವಾಗಿದೆ. ಇದರ ಸದುಪಯೋಗವನ್ನು ರೈತರು ‌ಪಡೆದುಕೊಳ್ಳಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಸಿಬ್ಬಂದಿ ಕೊರತೆ: ನಿಂತಲ್ಲೇ ನಿಂತ ಕೋಟಿ ವೆಚ್ಚದ ಪಶು ಸಂಚಾರಿ ಆಂಬ್ಯುಲೆನ್ಸ್​.. ತುರ್ತು ಸೇವೆ ಶೂನ್ಯ

Last Updated : Aug 5, 2024, 10:13 PM IST

ABOUT THE AUTHOR

...view details