ಕರ್ನಾಟಕ

karnataka

ETV Bharat / state

ಮುಡಾದಲ್ಲಿ ಬದಲಿ ನಿವೇಶನಗಳ ಹಂಚಿಕೆ: ಏನಿದು ಪ್ರಕರಣ, ಜನಪ್ರತಿನಿಧಿಗಳು ಹೇಳಿದ್ದೇನು ? - MUDA SCAM

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಡಾವಣೆ ನಿರ್ಮಾಣಕ್ಕೆ ಜಮೀನು ನೀಡಿದ ಭೂ ಮಾಲೀಕರಿಗೆ ಒದಗಿಸುವ ಬದಲಿ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾಮಾಜಿಕ ಹೋರಾಟಗಾರರು, ಜನಪ್ರತಿನಿಧಿಗಳು ಏನು ಹೇಳಿದ್ದಾರೆ ಅನ್ನೋದನ್ನ ನೋಡೋಣ.

By ETV Bharat Karnataka Team

Published : Jul 3, 2024, 11:05 PM IST

Muda  Scam in allotment of replacement  Mysuru Scam in allotment of replacement
ಈಟಿವಿ ಭಾರತಕ್ಕೆ ಜೊತೆಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಗಂಗರಾಜ್ (ETV Bharat)

ಮೈಸೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಡಾವಣೆ ನಿರ್ಮಾಣ ಮಾಡಲು ಪಡೆದ ಭೂಮಿಗೆ ಬದಲಾಗಿ ಬಡಾವಣೆ ಅಭಿವೃದ್ಧಿಪಡಿಸಿ, ಅದರಲ್ಲಿ ಭೂ ಮಾಲೀಕರಿಗೆ ಪುನಃ ನಿವೇಶನ ನೀಡುತ್ತದೆ. 'ಮುಡಾ'ಕ್ಕೆ ಜಮೀನು ನೀಡಿದ ಭೂ ಮಾಲೀಕರಿಗೆ ಒದಗಿಸುವ ಬದಲಿ ನಿವೇಶನ (50: 50ರ ಅನುಪಾತ) ಹಂಚಿಕೆಯಲ್ಲಿ ಅಕ್ರಮ ನಡೆದಿರುವ ಆರೋಪ ಇದೀಗ ಕೇಳಿ ಬಂದಿದೆ.

ಪ್ರತಿಯೊಂದು ನಗರಾಭಿವೃದ್ಧಿ ಪ್ರಾಧಿಕಾರವು, ಪ್ರತಿ ಜಿಲ್ಲೆಯಲ್ಲಿ ರೈತರಿಂದ ಅಥವಾ ಭೂ ಮಾಲೀಕರಿಂದ ಜಮೀನು ಪಡೆದು, ಆ ಭೂಮಿಯನ್ನು ಬಡಾವಣೆಯನ್ನಾಗಿ ಮಾಡುತ್ತದೆ. ಬಳಿಕ ಅಭಿವೃದ್ಧಿ ಮಾಡಿದ ನಿವೇಶನದಲ್ಲಿ ಭೂಮಾಲೀಕರಿಗೆ ಪರಿಹಾರ ರೂಪದಲ್ಲಿ ಒಟ್ಟು ಶೇ.50 ರಷ್ಟು ಸೈಟುಗಳನ್ನು ನೀಡುವುದು ಮತ್ತು ಮುಡಾ ಶೇ.50ರಷ್ಟು ಉಳಿಸಿಕೊಳ್ಳುವುದು 50:50ರ ಅನುಪಾತದ ನಿವೇಶನ ಹಂಚಿಕೆಯಾಗಿದೆ.

ಮುಡಾ ಬದಲಿ ನಿವೇಶನ ಹಗರಣ ನಡೆದಿರುವ ಆರೋಪ:2020ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ 50:50 ರ ಅನುಪಾತದಲ್ಲಿ ಭೂಮಿ ನೀಡಿದ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚುವ ಪದ್ಧತಿ ಜಾರಿಗೆ ಬಂತು. ಅದಕ್ಕೆ ಮೊದಲು 60:40ರ ಅನುಪಾತದಲ್ಲಿ ನಿವೇಶನ ಹಂಚಿಕೆ ಆಗುತ್ತಿತ್ತು. ಇದರಲ್ಲಿ ಭೂ ಸ್ವಾಧೀನವಾದ ಜಮೀನಿಗೆ ಹಣದ ರೂಪದಲ್ಲಿ ಪರಿಹಾರ ನೀಡದೇ ಇದ್ದರೆ ಮಾತ್ರ ಈ ನಿಯಮ ಅನ್ವಯ ಆಗುತ್ತಿತ್ತು. ಹಣ ಪಡೆದರೇ ಸೈಟ್ ಅನ್ನು ಭೂ ಮಾಲೀಕರಿಗೆ ಕೊಡುವಂತಿಲ್ಲ.

2020 ರ ನಂತರ ಅಭಿವೃದ್ಧಿ ಪಡಿಸಿದ ನಿವೇಶನಗಳಿಗೆ ಮಾತ್ರ ಈ 50:50 ರ ಅನುಪಾತ ಜಾರಿ ಆಗುತ್ತದೆ. ಆದರೆ, 40 ವರ್ಷ ಹಿಂದೆಯೇ ಮುಡಾಕ್ಕೆ ಜಮೀನು ನೀಡಿ ಹಣ ಪಡೆದವರು ಸಹ ಬದಲಿ ನಿವೇಶನವನ್ನು 2021ನಂತರ ಪಡೆದಿದ್ದು, ಕಳೆದ 3 ವರ್ಷಗಳಲ್ಲಿ ಸುಮಾರು ಸಾವಿರಾರು ನಿವೇಶನಗಳನ್ನು ಪ್ರತಿಷ್ಟಿತ ಬಡಾವಣೆಗಳಲ್ಲಿ ಕಾನೂನು ಬಾಹಿರವಾಗಿ ಹಂಚಿ‌ಕೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ. 50:50ರ ಅನುಪಾತದ ನಿಯಮವನ್ನೇ ಮುಡಾ ಅಧಿಕಾರಿಗಳು ಅಸ್ತ್ರ ಮಾಡಿಕೊಂಡು ಹಗರಣ ಮಾಡಿರುವ ಆರೋಪವಿದೆ.

ಇದನ್ನೂ ಓದಿ:ತಮ್ಮ‌ ಪತ್ನಿಗೆ ಅಕ್ರಮವಾಗಿ ಮುಡಾ ನಿವೇಶನ ವರ್ಗಾವಣೆ ಆರೋಪ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? - Alleged transfer of Muda site

ಸರ್ಕಾರಿ ಆದೇಶ ಧಿಕ್ಕರಿಸಿ ನಿವೇಶನ ಹಂಚಿಕೆ:''50:50 ರ ಅನುಪಾತದಲ್ಲಿ ನಿವೇಶನ ಹಂಚಿಕೆ ಸಂಬಂಧ ನಿವೇಶನ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ನಿರ್ಣಯಿಸುವ ಅಧಿಕಾರ ಆಯುಕ್ತರ ಹಂತದಲ್ಲಿ ನಿರ್ಣಯಿಸದೇ, ಪ್ರಾಧಿಕಾರದ ಮೂಲಕ ಮಂಡಿಸುವ ಕುರಿತು ಹಲವು ಬಾರಿ ಮುಡಾ ಅಧ್ಯಕ್ಷರು, ನಗರಾಭಿವೃದ್ಧಿ ಆಯುಕ್ತರಿಗೆ ಪತ್ರ ಬರೆದರು. ಆದರೆ, ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕೊನೆಗೆ 2020ರಲ್ಲಿ ಶೇ.50ರಷ್ಟು ನಿವೇಶನ ಹಂಚಿಕೆ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಆದರೆ, ಈ ಆದೇಶವನ್ನು 2023ರ ಅಕ್ಟೋಬರ್​ನಲ್ಲಿ ರಾಜ್ಯ ಸರ್ಕಾರ 50:50 ಅನುಪಾತದ ನಿಯಮ ರದ್ದುಗೊಳಿಸಿ ಮುಡಾ ಆಯುಕ್ತರಿಗೆ ನಿರ್ದೇಶನ ನೀಡಿತು. ಆದರೂ ಸರ್ಕಾರದ ಆದೇಶ ಧಿಕ್ಕರಿಸಿ ಮುಡಾ ಅಧಿಕಾರಿಗಳು ನಿವೇಶನವನ್ನು ಅಕ್ರಮವಾಗಿ ಹಂಚಿರುವುದು ಕಂಡು ಬಂದಿದೆ. ಈ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಮುಡಾ ಅಕ್ರಮಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಬಿಜೆಪಿ ಶಾಸಕ ಶ್ರೀವತ್ಸ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ಮುಡಾ ಪ್ರಕರಣದ ಬಗ್ಗೆ ಹೆಚ್​ ವಿಶ್ವನಾಥ್​ ಹೇಳಿದ್ದೇನು?:''ನಿಯಮ ಪಾಲಿಸದೇ ಬೇಕಾಬಿಟ್ಟಿಯಾಗಿ ನಿವೇಶನ ಹಂಚಿಕೆ ಮಾಡಲಾಗಿದೆ. ರೈತರಿಂದ ವಶ ಪಡಿಸಿಕೊಂಡ ಜಮೀನಿಗೆ ಬದಲಿಯಾಗಿ ದುಬಾರಿ ಬೆಲೆ ನಿವೇಶನಗಳನ್ನು ನೀಡಿರುವುದು. ನಕಲಿ ದಾಖಲೆ ಸೃಷ್ಟಿಸಿ ನಿವೇಶನವನ್ನು ಮಾರಾಟ ಮಾಡಿರುವುದು ಹಾಗೂ ಸತ್ತವರ ಹೆಸರಿನಲ್ಲೂ ನಿವೇಶನ ಮಾರಾಟ ಮಾಡಿರುವ ಹಲವು ಪ್ರಕರಣಗಳ ಜತೆಗೆ CA ನಿವೇಶನಗಳನ್ನ ಬೀಕಾಬಿಟ್ಟಿ ಹಂಚಿಕೆ ಮಾಡಲಾಗಿದೆ. ಈ ಎಲ್ಲವನ್ನು ಸಿಬಿಐಗೆ ವಹಿಸಿ'' ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.

ಸಿಎಂ ಹೇಳಿದ್ದೇನು?:ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆರೋಪದ ಬಗ್ಗೆ ನಿಖೆ ಮಾಡಲಾಗುತ್ತಿದ್ದು, ಎಲ್ಲ ನಿವೇಶನಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಹಾಗಾಗಿ ಸರ್ಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

ತಮ್ಮ ಧರ್ಮ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಮುಡಾ ನಿವೇಶನ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ, ಇದು ಬಿಜೆಪಿ ಆಡಳಿತಾವಧಿಯಲ್ಲಿ ಕೊಟ್ಟಿರುವ ನಿವೇಶನವಾಗಿದೆ. ರಿಂಗ್ ರೋಡ್ ಕೆಸರೆ ಪಕ್ಕದಲ್ಲಿ ನನ್ನ ಪತ್ನಿ ಹೆಸರಲ್ಲಿ 3.16 ಎಕರೆ ಜಮೀನಿತ್ತು. ಮೂಲತಃ ಅದನ್ನು ನನ್ನ ಬಾಮೈದ ಮಲ್ಲಿಕಾರ್ಜುನ್​​ ಖರೀದಿ ಮಾಡಿದ್ದರು. ಬಳಿಕ ಅದನ್ನು ಆತ ನನ್ನ ಪತ್ನಿಗೆ ದಾನಪತ್ರವಾಗಿ ಕೊಟ್ಟಿದ್ದರು. ನಂತರ ಮುಡಾದವರು ಅದೇ ಜಮೀನನ್ನು ಸ್ವಾಧೀನಪಡಿಸಿಕೊಂಡು ಸೈಟ್ ಮಾಡಿ ಹಂಚಿದ್ದರು. ಆ ನಂತರ ಕಾನೂನು ಪ್ರಕಾರ ನನ್ನ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ಹಂಚಿದ್ದಾರೆ. ಇದು ಬಿಜೆಪಿ ಸರ್ಕಾರದ ಅವಧಿಯ ವೇಳೆ ಆಗಿರುವಂತದ್ದು ಎಂದು ಸಿಎಂ ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ:ಮುಡಾ ನಿವೇಶನ ಹಂಚಿಕೆ ಪ್ರಕರಣ: ಎಲ್ಲ ನಿವೇಶನಗಳು ಅಮಾನತು, ಐಎಎಸ್ ಅಧಿಕಾರಿಗಳಿಂದ ತನಿಖೆ: ಸಿಎಂ - CM Siddaramaiah

ABOUT THE AUTHOR

...view details