ಬೆಂಗಳೂರು:ಸಿಎಂ ಸಿದ್ದರಾಮಯ್ಯನವರೇ ಸುಳ್ಳು ಹೇಳಲು ಒಂದು ಮಿತಿ ಬೇಡವೇ? ನುಡಿದಂತೆ ನಡೆದ ಸರ್ಕಾರ ಎಂದು ಕನ್ನಡಿಗರಿಗೆ ಇನ್ನೆಷ್ಟು ದಿನ ಹೀಗೆ ಸುಳ್ಳಿನ ಮೇಲೆ ಸುಳ್ಳು ಹೇಳಿ ವಂಚನೆ ಮಾಡುತ್ತೀರಿ? ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.
10 ತಿಂಗಳುಗಳಲ್ಲಿ ತಮ್ಮ ಸಾಧನೆ ಶೂನ್ಯ: 2013-18ರಲ್ಲಿ ತಾವು ಕೊಟ್ಟ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇನೆ ಎಂದು ಹೇಳಿದ್ದೀರಿ. ಅಸಲಿಗೆ ನಿಮ್ಮ ಪ್ರಣಾಳಿಕೆಯಲ್ಲಿದ್ದ ಘೋಷಣೆಗಳು 165 ಅಲ್ಲ 173. ಅದರಲ್ಲಿ ಐದು ವರ್ಷಗಳಲ್ಲಿ ತಾವು ಈಡೇರಿಸಿದ್ದು, ಕೇವಲ ಶೇ38ರಷ್ಟು, ಅಂದರೆ 67 ಮಾತ್ರ. ಇನ್ನು ಕಳೆದ 10 ತಿಂಗಳುಗಳಲ್ಲಿ ತಮ್ಮ ಸಾಧನೆ ದೊಡ್ಡ ಶೂನ್ಯ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಬರಿದು ಮಾಡಿ ರಾಜ್ಯವನ್ನು 1 ಲಕ್ಷ ಕೋಟಿ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿಸಿದ್ದೇ ನಿಮ್ಮ ಸಾಧನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಟ್ವೀಟ್ನಲ್ಲಿ ಟೀಕಿಸಿದ್ದಾರೆ.
ಕೊರೋನಾದಂತಹ ಪರಿಸ್ಥಿತಿಯಲ್ಲೂ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಕರ್ನಾಟಕವನ್ನ 4ನೇ ಸ್ಥಾನಕ್ಕೆ ಇಳಿಸಿದ್ದೇ ನಿಮ್ಮ ಸಾಧನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕೆ ಮೀಸಲಿರಿಸಬೇಕಾಗಿದ್ದ 11,000 ಕೋಟಿ ರೂಪಾಯಿಗಳನ್ನು ಗ್ಯಾರಂಟಿಗಳ ಹೆಸರಿನಲ್ಲಿ ಗುಳುಂ ಮಾಡಿದ್ದೇ ನಿಮ್ಮ ಸಾಧನೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲು, ಬೆಂಗಳೂರಲ್ಲಿ ಬಾಂಬ್ ಸ್ಫೋಟ ಆಗಲು ಬಿಟ್ಟಿದ್ದೇ ನಿಮ್ಮ ಸಾಧನೆ ಎಂದು ಅಶೋಕ್ ಹರಿಹಾಯ್ದಿದ್ದಾರೆ.
900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ರೈತರಿಗೆ ಬರ ಪರಿಹಾರ ಕೊಡದೆ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ತಂದಿದ್ದು, ಲಕ್ಷಾಂತರ ಕೃಷಿ ಕಾರ್ಮಿಕರು ಹೊಟ್ಟೆಪಾಡಿಗಾಗಿ ಗುಳೆ ಹೋಗುವಂತೆ ಮಾಡಿದ್ದೇ ನಿಮ್ಮ ಸಾಧನೆ. ಬೆಂಗಳೂರಿನ ಜನರು ಕುಡಿಯುವ ನೀರಿಗೂ ಪರದಾಡುವ ದುಃಸ್ಥಿತಿ ತಂದು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಜನ ಬೆಂಗಳೂರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣ ಮಾಡಿದ್ದೇ ನಿಮ್ಮ ಸಾಧನೆ ಎಂದು ಆರೋಪಿಸಿದ್ದಾರೆ.
ಪರೀಕ್ಷೆಗಳ ಸಮಯದಲ್ಲಿ ವಿದ್ಯಾರ್ಥಿಗಳು ಓದಲು ಕರೆಂಟ್ ಇಲ್ಲದೇ ಪರೀಕ್ಷಾ ಕೇಂದ್ರಕ್ಕೆ ಹೋಗಲು ಬಸ್ಸಿಲ್ಲದೇ ಪರದಾಡುವ ಪರಿಸ್ಥಿತಿ ತಂದಿದ್ದೇ ನಿಮ್ಮ ಸಾಧನೆ. ನೀರು, ಹಾಲು, ಕರೆಂಟು, ಆಸ್ತಿ ತೆರಿಗೆ, ಆಸ್ತಿ ನೋಂದಣಿ ಶುಲ್ಕ, ಸ್ಟಾಂಪ್ ದರ, ಕಡೆಗೆ ಜನನ ಮತ್ತು ಮರಣ ಪ್ರಮಾಣ ಪತ್ರದ ಶುಲ್ಕವನ್ನು ಹೆಚ್ಚಿಸಿ ಜನರನ್ನು ಸುಲಿಗೆ ಮಾಡಿದ್ದೇ ನಿಮ್ಮ ಸಾಧನೆ. ತಾವು ಎಷ್ಟು ದುರ್ಬಲ ಮುಖ್ಯಮಂತ್ರಿ ಎಂದರೆ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲಾಗದೇ, 90ಕ್ಕೂ ಹೆಚ್ಚು ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ, ಗೂಟದ ಕಾರು ನೀಡಿ ಅವರನ್ನು ಸಮಾಧಾನಪಡಿಸಬೇಕಾದ ದಯನೀಯ ಸ್ಥಿತಿ ನಿಮ್ಮದು.
ಇಷ್ಟೇಲ್ಲ ಸಾಲು ಸಾಲು ವೈಫಲ್ಯ ನಡುವೆಯೂ ಅದ್ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತಿದ್ದೀರೋ ನಾ ಕಾಣೆ. ಕೇವಲ ಹತ್ತು ತಿಂಗಳಲ್ಲಿ ಜನಮನ್ನಣೆ ಕಳೆದುಕೊಂಡಿರುವ ನಿಮ್ಮ ಸರ್ಕಾರಕ್ಕೆ ಜನ ನಿತ್ಯದ ಶಾಪ ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಕನ್ನಡಿಗರು ಕಾತರದಿಂದ ಕಾಯುತ್ತಿದ್ದಾರೆ ಎಂದು ಅಶೋಕ್ ಕುಟುಕಿದ್ದಾರೆ.
ಇದನ್ನೂಓದಿ:ಬಿಜೆಪಿ ನಮ್ಮ ಗ್ಯಾರಂಟಿಗಳನ್ನು ಕದ್ದು ಅದಕ್ಕೆ ಮೋದಿ ಗ್ಯಾರಂಟಿ ಹೆಸರಿಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ - Lok Sabha Election