ಕರ್ನಾಟಕ

karnataka

By ETV Bharat Karnataka Team

Published : Mar 4, 2024, 3:55 PM IST

Updated : Mar 4, 2024, 10:53 PM IST

ETV Bharat / state

ನಾಳೆಯಿಂದ ರಾಷ್ಟ್ರೀಯ ತೋಟಗಾರಿಕೆ ಮೇಳ: ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನ ಶೀರ್ಷಿಕೆಯಡಿ ಮೇಳ ಅಯೋಜನೆ

ಬೆಂಗಳೂರಿನ ಹೊರವಲಯದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ಅವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳವನ್ನು ಮಾರ್ಚ್ 5 ರಿಂದ 7ರ ವರೆಗೆ ಆಯೋಜಿಸಲಾಗಿದೆ.

Dr. Dhananjaya.M.V gave information to the media.
ರಾಷ್ಟ್ರೀಯ ತೋಟಗಾರಿಕೆ ಮೇಳದ ಕುರಿತು ಡಾ. ಧನಂಜಯ.ಎಂ.ವಿ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಧನಂಜಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬೆಂಗಳೂರು: ರಾಷ್ಟ್ರೀಯ ತೋಟಗಾರಿಕೆ ಮೇಳ -2024ಕ್ಕೆ ನಾಳೆ ಚಾಲನೆ ಸಿಗಲಿದ್ದು, ಮೂರು ದಿನ ಕಾಲ ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು ಶೀರ್ಷಿಕೆಯಡಿ ನಡೆಯಲಿದೆ.

ಬೆಂಗಳೂರಿನ ಹೊರವಲಯದ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ (IIHR) ಅವರಣದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ -2024 (NHF2024)ವು ಮಾರ್ಚ್ 5ರಿಂದ 7ರ ವರೆಗೆ ನಡೆಯಲಿದೆ.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ ಪ್ರಕಾಶ್ ಪಾಟೀಲ ಮಾಧ್ಯಮದವರೊಂದಿಗೆ ಮಾತನಾಡಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ 1967ರಿಂದ ತೋಟಗಾರಿಕೆ ಬೆಳೆಗಳ ಮೇಲೆ ಮೂಲಭೂತ, ಅನ್ವಯಿಕ ಮತ್ತು ಕಾರ್ಯತಂತ್ರದ ಅಂಶಗಳ ಸಂಶೋಧನೆಯಲ್ಲಿ ತೊಡಗಿದೆ. ಪ್ರಸ್ತುತ 58 ತೋಟಗಾರಿಕೆ ಬೆಳೆಗಳಲ್ಲಿ (13 ಹಣ್ಣುಗಳು, 30 ತರಕಾರಿಗಳು, 10 ಹೂವುಗಳು ಮತ್ತು 5 ಔಷಧೀಯ ಬೆಳೆಗಳು) ಕುರಿತಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಇದು ವರೆಗೆ 327 ಪ್ರಭೇದಗಳು ಮತ್ತು 154 ತಂತ್ರಜ್ಞಾನಗಳನ್ನು ಬಿಡುಗಡೆ ಮಾಡಿದೆ. 1263 ಪರವಾನಗಿಗಳೊಂದಿಗೆ 674 ಉದ್ಯಮಿಗಳಿಗೆ 124 ತಂತ್ರಜ್ಞಾನಗಳನ್ನು ವಾಣಿಜ್ಯೀಕರಣಗೊಳಿಸಿದೆ. 800ಕ್ಕೂ ಹೆಚ್ಚು ತರಬೇತಿಗಳನ್ನು ಮತ್ತು 6 ರಾಷ್ಟ್ರೀಯ ತೋಟಗಾರಿಕೆ ಮೇಳಗಳನ್ನು ಆಯೋಜಿಸಿದೆ. ಸುಮಾರು 360 ವಿದ್ಯಾರ್ಥಿಗಳು ತೋಟಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಸಂಸ್ಥೆಯ ತಂತ್ರಜ್ಞಾನಗಳು ದೇಶದಲ್ಲಿ ನಿರಂತರವಾಗಿ ಬೆಳೆಯುತ್ತಿರುವ ತೋಟಗಾರಿಕೆ ಕ್ಷೇತ್ರಕ್ಕೆ ವಾರ್ಷಿಕವಾಗಿ ರೂ. 35,000 ಕೋಟಿಗಿಂತ ಹೆಚ್ಚು ಕೊಡುಗೆ ನೀಡುತ್ತಿವೆ ಎಂದು ಹೇಳಿದರು.

ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಧನಂಜಯ ಎಂ.ವಿ ಮಾತನಾಡಿ, ಈ ಮೇಳದಲ್ಲಿ, ಇತ್ತೀಚಿನ ತಂತ್ರಜ್ಞಾನಗಳಾದ ಚತುರ ನೀರಾವರಿ ವ್ಯವಸ್ಥೆ, ನಿಯಂತ್ರಿತ ಪರಿಸರ ಕೃಷಿ, ಲಂಬ ಕೃಷಿ, ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಸ್ನೇಹಿ ಅಭ್ಯಾಸಗಳು, ಡಿಜಿಟಲ್ ತೋಟಗಾರಿಕೆ ಇತ್ಯಾದಿ ಕುರಿತು ಪ್ರದರ್ಶನ ಏರ್ಪಡಿಸಲಾಗಿದೆ. ಜೊತೆಗೆ ನಗರ ತೋಟಗಾರಿಕೆ, ಮಣ್ಣು ರಹಿತ ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಹಾಗೂ ಪ್ಯಾಕೇಜ್ ಮತ್ತು ಸಂಗ್ರಹಣ ತಂತ್ರಜ್ಞಾನಗಳ ಕುರಿತು ಕಾರ್ಯಗಾರಗಳನ್ನು ಸಹ ಏರ್ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಚಾರ ಸಮಿತಿ ಅಧ್ಯಕ್ಷ ಡಾ ನಂದೀಶ ಪಿ ಮಾತನಾಡಿ, ಈ ಮೇಳದಲ್ಲಿ ಐಸಿಎಆರ್​ ಇತರೆ ಸಂಸ್ಥೆಗಳು, ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳು, ಖಾಸಗಿ ಹಾಗೂ ಸರ್ಕಾರೇತರ ಸಂಸ್ಥೆಗಳು, ರೈತೋತ್ಪಾದಕ ಸಂಘಗಳು ಮುಂತಾದವರು 300ಕ್ಕೂ ಹೆಚ್ಚು ಮಳಿಗೆಗಳ ಮೂಲಕ ತೋಟಗಾರಿಕೆಗೆ ಸಂಬಂಧಿಸಿದ ಹೊಸ ಆವಿಷ್ಕಾರಗಳು ಹಾಗೂ ತಂತ್ರಜ್ಞಾನಗಳನ್ನು ಸಹ ಪ್ರದರ್ಶಿಸಲಿದ್ದಾರೆ. ಬೀಜಗಳು, ಗಿಡಗಳು, ಸಸ್ಯ ಉತ್ಪಾದನೆ ಮತ್ತು ರಕ್ಷಣೆ ರಾಸಾಯನಿಕಗಳು ಮತ್ತು ಸಲಕರಣೆಗಳ ಮಾರಾಟ ಇರುತ್ತದೆ. ಮೂರು ದಿನಗಳ ಮೇಳಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ರೈತರು ಹಾಗೂ ತೋಟಗಾರಿಕೆಯಲ್ಲಿ ಅಭಿರುಚಿ ಇರುವ ಇತರೆ ಪಾಲುದಾರರು ಭಾಗವಹಿಸುವ ಸಂಭವವಿದೆ ಎಂದು ವಿವರಿಸಿದರು.

ಇದನ್ನೂ ಓದಿ:2032ರ ವೇಳೆಗೆ ಕರ್ನಾಟಕವನ್ನು 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯಾಗಿಸುವ ಗುರಿಯಿದೆ: ಸಚಿವ ಎಂ.ಬಿ. ಪಾಟೀಲ್

Last Updated : Mar 4, 2024, 10:53 PM IST

ABOUT THE AUTHOR

...view details