ಕರ್ನಾಟಕ

karnataka

ಮೈಸೂರು: ಲಿವರ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವೃದ್ಧರಿಗೆ ಮರು ಜೀವ ನೀಡಿದ ಕೆಆರ್​ ಆಸ್ಪತ್ರೆ ವೈದ್ಯರು - Liver cancer surgery

By ETV Bharat Karnataka Team

Published : Sep 10, 2024, 4:04 PM IST

ಲಿವರ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವಯೋ ವೃದ್ಧರೊಬ್ಬರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೀವ ನೀಡಿದ್ದಾರೆ.

mysore-kr-hospital-doctor-successfully-done-liver-cancer-surgery
ವೃದ್ದನ ಪ್ರಾಣ ಉಳಿಸಿದ ಕೆ.ಆರ್​ ಆಸ್ಪತ್ರೆ ವೈದ್ಯರು (ಈಟಿವಿ ಭಾರತ್​​)

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ದೊಡ್ಡಾಸ್ಪತ್ರೆ ಎಂದೇ ಖ್ಯಾತಿ ಗಳಿಸಿರುವ ಕೆ.ಆರ್. ಆಸ್ಪತ್ರೆ ವೈದ್ಯರು ದೇಶದಲ್ಲಿಯೇ ಅಪರೂಪ ಎನಿಸಿರುವ ಶಸ್ತ್ರಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಲಿವರ್​ ಕ್ಯಾನ್ಸರ್​ನಿಂದ ಬಳಲುತ್ತಿದ್ದ ವಯೋ ವೃದ್ಧರೊಬ್ಬರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, ಮರು ಜೀವ ನೀಡಿದ್ದಾರೆ.

ಸವಾಲಿನ ನಡುವೆ ಯಶಸ್ವಿ ಶಸ್ತ್ರ ಚಿಕಿತ್ಸೆ:ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 72 ವರ್ಷದ ವಯೋವೃದ್ಧರ ಬಲಭಾಗದ ಯಕೃತ್ (RIGHT HEPETECTOMY) ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ವೇಳೆ, ಯಕೃತ್​ನ ಅರ್ಧ ಭಾಗವನ್ನ ಕತ್ತರಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ವಯೋವೃದ್ಧರ ಶೇ.60 ರಷ್ಟು ಭಾಗದ ಯಕೃತ್​​ ಕತ್ತರಿಸಿದಾಗ ರಕ್ತಸ್ರಾವ ಹೆಚ್ಚಾಗುತ್ತದೆ. ಇದರ ನಿರ್ವಹಣೆಗೆ ಕ್ಯಾವಿಟ್ರಾನ್ ಅಲ್ಟ್ರಾಸಾನಿಕ್ ಸರ್ಜಿಕಲ್ ಆಸ್ಪಿರೇಟರ್ (CUSA) ನಂತಹ ಹೈಟೆಕ್ ಉಪಕರಣದ ಅಗತ್ಯವಿದೆ. ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯ ಇರುವ ಹೈಟೆಕ್ ಸಲಕರಣೆಗಳು ಕೆ.ಆರ್. ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಆದರೂ ಸಿಯುಎಸ್​ಎ ಉಪಕರಣ ಬಳಸದೇ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿ ಗಮನ ಸೆಳೆದಿದ್ದಾರೆ.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಎಸ್. ಚಂದ್ರಶೇಖರ್, ಸರ್ಜಿಕಲ್ ಅಂಕೋಲಜಿ ವಿಭಾಗದ ಕ್ಯಾನ್ಸರ್ ತಜ್ಞ ಡಾ.ನವೀನ್ ಗೌಡ, ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದ ಡಾ. ಶ್ರೀವತ್ಸ ಅರವಳಿಕೆ ವಿಭಾಗದ ಡಾ.ವಿ.ವೈ.ಶ್ರೀನಿವಾಸ್, ಡಾ.ದೀಪಾ, ಡಾ‌.ಪೂಲನ್ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗೆ ಮರುಜೀವ ನೀಡಿದೆ.

ಸರ್ಕಾರಿ ಆಸ್ಪತ್ರೆ ಬಗ್ಗೆ ಕೀಳರಿಮೆ ಬೇಡ: ರೋಗಿಯು 72 ವರ್ಷದ ವಯೋವೃದ್ಧರಾಗಿದ್ದು, ಅವರ ಯಕೃತ್​ನ ಶೇ 60ರಷ್ಟು ಭಾಗವನ್ನು ತೆಗೆದು ಹಾಕಿ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸುವುದು ಕಷ್ಟಸಾಧ್ಯವಾಗಿತ್ತು. ನಮ್ಮಲ್ಲಿರುವ ಸಿಬ್ಬಂದಿಗಳ ಕಠಿಣ ಶ್ರಮದಿಂದ ಇದು ಸಾಧ್ಯವಾಗಿದೆ. ಯಾವುದೇ ಅತ್ಯಾಧುನಿಕ ಉಪಕರಣಗಳಿಲ್ಲದೇ, ಮುನ್ನೆಚ್ಚರಿಕೆ ಕ್ರಮದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎರಡು ವಾರದ ಬಳಿಕ ರೋಗಿ ಗುಣಮುಖವಾಗಿದ್ದಾರೆ. ರೋಗಿಗಳು ಸರ್ಕಾರಿ ಆಸ್ಪತ್ರೆ ಎಂಬ ಕೀಳರಿಮೆ ಬಿಟ್ಟು ಕೆ.ಆರ್.ಆಸ್ಪತ್ರೆಗೆ ಬನ್ನಿ ಎಂದು ಡಾ. ನವೀನ್ ಗೌಡ ಕರೆ ನೀಡಿದರು .

ವೈದ್ಯರಿಗೆ ಚಿರಋಣಿ: ವೈದ್ಯೋ ನಾರಾಯಣೋ ಹರಿ ಎಂದು ಕರೆಯುತ್ತಾರೆ. ನನ್ನ ಪಾಲಿಗೆ ವೈದ್ಯರುಗಳು ನಿಜಕ್ಕೂ ದೇವರುಗಳಂತೆ ಕಾಣುತ್ತಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನನಗೆ ಈ ಘೋರ ಕ್ಯಾನ್ಸರ್ ಕೂಡ ಕಾಡಿತ್ತು. ಆದರೆ, ವೈದ್ಯರ ಕಠಿಣ ಶ್ರಮದಿಂದ ನನ್ನ ಜೀವ ಉಳಿದಿದೆ. ನಾನು ಅವರಿಗೆಲ್ಲರಿಗೂ ಋಣಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 17 ವರ್ಷದಿಂದ ನೆನೆಗುದಿಗೆ ಬಿದ್ದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಹೊಸ ಕಸರತ್ತು: ಸದ್ಯದ ಸ್ಥಿತಿಗತಿ ಹೇಗಿದೆ?

ABOUT THE AUTHOR

...view details