ಕರ್ನಾಟಕ

karnataka

ರಾಷ್ಟ್ರೀಯ ಲೋಕ್ ಅದಾಲತ್: ಉತ್ತರಕನ್ನಡದಲ್ಲಿ ಬಾಕಿ ಇದ್ದ 29,235 ಪ್ರಕರಣ ಇತ್ಯರ್ಥ - National Lok Adalat

By ETV Bharat Karnataka Team

Published : Sep 15, 2024, 4:11 PM IST

ದೂರವಾಗಲು ನಿರ್ಧರಿಸಿದ್ದ ದಂಪತಿ ರಾಷ್ಟ್ರೀಯ ಲೋಕ್ ಅದಾಲತ್​ನಲ್ಲಿ ಮತ್ತೆ ಒಂದಾಗಿದ್ದಾರೆ. ಉತ್ತರಕನ್ನಡದಲ್ಲಿ ಬಾಕಿ ಇದ್ದ 29,235 ಪ್ರಕರಣಗಳು ಇತ್ಯರ್ಥಗೊಂಡಿವೆ.

Lok Adalat
ಲೋಕ್ ಅದಾಲತ್ (ETV Bharat)

ಕಾರವಾರ: ಉತ್ತರಕನ್ನಡ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್​ನಲ್ಲಿ 29,235 ಪ್ರಕರಣಗಳು ಇತ್ಯರ್ಥಗೊಂಡಿವೆ.

ಬೆಂಗಳೂರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಉತ್ತರಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಕಾನೂನು ಸೇವಾ ಸಮಿತಿಗಳ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ಒಟ್ಟೂ 30 ಪೀಠಗಳಲ್ಲಿ 25,152 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 4,083 ಪ್ರಕರಣಗಳನ್ನು ಈ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಮಾಡಲಾಯಿತು.

ಸಾಲ ಮರುಪಾವತಿ, ಪರಿಹಾರ, ದಂಡ ಹಾಗೂ ಇತ್ಯಾದಿ ಹಣಕಾಸಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಒಟ್ಟು ರೂಪಾಯಿ 24,09,92,905 ಹಣ ಸಂಗ್ರಹ ಮತ್ತು ಪಾವತಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ. ಎಸ್. ವಿಜಯಕುಮಾರ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ. ಎಂ. ಮಾಹಿತಿ ನೀಡಿದರು.

ಲೋಕ್ ಅದಾಲತ್ (ETV Bharat)

ಒಂದಾದ ದಂಪತಿ:ನ್ಯಾಯಾಲಯದ ಮೆಟ್ಟಿಲೇರಿದ 1 ಕೌಟುಂಬಿಕ ಪ್ರಕರಣ ಕಾರವಾರ ನಗರದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ರಾಜಿಯಾಯಿತು. ದಂಪತಿಯು ಒಟ್ಟಿಗೆ ಜೀವನ ನಡೆಸಲು ಒಪ್ಪಿಕೊಂಡ ಒಳ್ಳೆಯ ಬೆಳವಣಿಗೆಯು ಕೂಡ ನ್ಯಾಯಾಲಯದ ಲೋಕ ಅದಾಲತ್‌ನಲ್ಲಿ ನಡೆಯಿತು.

ವಿಡಿಯೋ ಕಾನ್ಫರೆನ್ಸ್​ನಲ್ಲಿ 395 ಪ್ರಕರಣ ಇತ್ಯರ್ಥ:ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್​​ನಲ್ಲಿ ಜಿಲ್ಲೆಯ ಒಟ್ಟು 17 ಕುಟುಂಬದ ಆಸ್ತಿ ವಿಭಜನೆಯ ಪ್ರಕರಣಗಳು ಹಾಗೂ 348 ಚೆಕ್ ಬೌನ್ಸ್ ಪ್ರಕರಣಗಳು ಮತ್ತು 30 ಮೋಟಾರು ಅಪಘಾತ ಪರಿಹಾರ ಪ್ರಕರಣಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜಿಯಾಗಿ ಇತ್ಯರ್ಥಗೊಂಡಿರುವುದು ವಿಶೇಷ.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ರಾಜಿಯಾಗಲು ಸಹಕರಿಸಿದ ಜಿಲ್ಲೆಯ ಎಲ್ಲಾ ನ್ಯಾಯಾಧೀಶರು, ಎಲ್ಲಾ ವಕೀಲರು, ಸರ್ಕಾರಿ ಅಭಿಯೋಜಕರು, ಪೊಲೀಸ್ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ, ಕಾರ್ಮಿಕ ಇಲಾಖೆ, ನಗರಸಭೆ ಆಯಕ್ತರು, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು, ನ್ಯಾಯಾಲಯದ ಸಿಬ್ಬಂದಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ, ಕಕ್ಷಿದಾರರು, ಮಾಧ್ಯಮ ಪ್ರತಿನಿಧಿಗಳು ಹಾಗೂ ನಗರಸಭೆಯ ಆಯುಕ್ತರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಎಸ್. ವಿಜಯಕುಮಾರ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ. ಎಂ. ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಗಂಗಾವತಿ: ವಿಚ್ಛೇದನ ಕೋರಿದ್ದ ಜೋಡಿಗಳಿಗೆ ಮರು ಬೆಸುಗೆಯ ಸಂಧಾನ - Reunited in Lokadalat

ABOUT THE AUTHOR

...view details