ಕರ್ನಾಟಕ

karnataka

By ETV Bharat Karnataka Team

Published : Jul 29, 2024, 10:04 PM IST

Updated : Jul 29, 2024, 11:04 PM IST

ETV Bharat / state

ಖಾನಾಪುರ ಪ್ರವಾಹ ಪೀಡಿತ ಪ್ರದೇಶಗಳಿಗೆ ಲಕ್ಷ್ಮಿ ಹೆಬ್ಬಾಳಕರ್ ಭೇಟಿ: ಸಂತ್ರಸ್ತರಿಗೆ ಧೈರ್ಯ ತುಂಬಿದ ಸಚಿವೆ - Minister encouraged flood victims

ಖಾನಾಪುರ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು.

Etv Bharat
Etv Bharat (Etv Bharat)

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿದರು (ETV Bharat)

ಬೆಳಗಾವಿ:ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಭೀತಿಯಲ್ಲಿರುವ ಖಾನಾಪುರ ತಾಲೂಕಿನ ಮಲಪ್ರಭಾ ಬ್ರಿಡ್ಜ್ ಮತ್ತು ರುಮೇವಾಡಿ ಬ್ಯಾರೇಜ್​ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರವಾಹ ಪೀಡಿತ ಪ್ರದೇಶಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ (ETV Bharat)

ಪ್ರವಾಹದಿಂದ ಹಾನಿಯಾಗಿರುವ ಮನೆ, ಬೆಳೆ ಹಾಗೂ ಬ್ರಿಡ್ಜ್​ಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಲಕ್ಷ್ಮಿ ಹೆಬ್ಬಾಳ್ಕರ್ ಸಂತ್ರಸ್ತರಿಗೆ ಧೈರ್ಯ ತುಂಬಿದರು. ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ''ಖಾನಾಪೂರ ತಾಲೂಕಿನ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿರುವ ಗುಡ್ಡದ ಮಧ್ಯೆಯದಲ್ಲಿರುವ ಗ್ರಾಮಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದೇ ನಮ್ಮ ಉದ್ದೇಶ. ಮುಂದಿನ ದಿನಗಳಲ್ಲಿ ಮಳೆಯಿಂದ ಜೀವಹಾನಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಅರಣ್ಯ‌ ಇಲಾಖೆಯ ಕಠಿಣ ನಿಲುವುಗಳಿಂದ ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ'' ಎಂದರು.

ನೆರೆ ಪೀಡಿತ ಪ್ರದೇಶಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿ (ETV Bharat)

''ಮನೆ ಬಿದ್ದ ತಕ್ಷಣ 1.20 ಲಕ್ಷ ರೂ. ಹಣ, ಜೊತೆಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 1.80 ಲಕ್ಷ ಹಣ ನೀಡಲಾಗುತ್ತಿದ್ದು, ಭಾಗಶಃ ಬಿದ್ದ ಮನೆಗೆ ನೀಡಲಾಗುತ್ತಿರುವ ಮೊತ್ತವನ್ನು 10 ಸಾವಿರ‌ ರೂಪಾಯಿಂದ 50 ಸಾವಿರ ರೂಪಾಯಿಗೆ ಏರಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಡಲಾಗಿದೆ'' ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದರು.

ಸಂತ್ರಸ್ತರಿಗೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ (ETV Bharat)

''ಮಳೆಗಾಲದ ವೇಳೆ ಬೆಳಗಾವಿ- ಗೋವಾ ನಡುವಿನ ಮುಖ್ಯ ರಸ್ತೆ ಜಾಮ್ ಆಗುತ್ತಿದ್ದು, ಶೀಘ್ರವೇ ಗೋವಾ ಮುಖ್ಯ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದ್ದು, 100 ಕೋಟಿ ವೆಚ್ಚದಲ್ಲಿ ಹಟ್ಟಿಹೊಳಿ ಬ್ರಿಡ್ಜ್ ನಿರ್ಮಾಣವಾಗಲಿದೆ'' ಎಂದು‌ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ವಾಲ್ಮೀಕಿ, ಮುಡಾ ಹಗರಣ ಖಂಡಿಸಿ ಬಿಜೆಪಿ ಪಾದಯಾತ್ರೆ ವಿಚಾರಕ್ಕೆ ರಮೇಶ್ ಜಾರಕಿಹೊಳಿ ಹೇಳಿಕೆಗೆ ಟಾಂಗ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್, ''ಮಳೆಯಾಗುತ್ತಿದೆ ಒಳ್ಳೆಯ ಶೂಸ್, ರೇನ್‌ಕೋಟ್ ಧರಿಸಿ ಪಾದಯಾತ್ರೆ ಮಾಡಿ. ಪಾದಯಾತ್ರೆ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದ ಅವರು, ಪಕ್ಕದಲ್ಲಿ ಇದ್ದ ಖಾನಾಪುರ ಬಿಜೆಪಿ ಶಾಸಕ ವಿಠ್ಠಲ್ ಹಲಗೇಕರ್‌ಗೆ ಅಣ್ಣಾ ನೀವು ಜೊತೆಗೆ ಹೋಗಿ ಎಂದರು.

ಇನ್ನು ಯತ್ನಾಳ, ರಮೇಶ್ ಜಾರಕಿಹೊಳಿ ಕೂಡಲಸಂಗಮದಿಂದ ಬಳ್ಳಾರಿ ಪಾದಯಾತ್ರೆ ವಿಚಾರಕ್ಕೆ ಬಹಳ ಸಂತೋಷ. ಪಾದಯಾತ್ರೆ ಮಾಡೋರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾವು ಪಾದಯಾತ್ರೆ ಮಾಡಿದ್ದೆವು. ಅವರೂ ಪಾದಯಾತ್ರೆ ಮಾಡಲಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅಧಿಕಾರಿಗಳಿಗೆ ಸಚಿವೆ ಹೆಬ್ಬಾಳ್ಕರ್ ಕ್ಲಾಸ್:ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಮಳೆಯಿಂದ ಮನೆ ಬಿದ್ದ ವೃದ್ಧೆ ಅಕ್ಕವ್ವ ಸನದಿ ಮನೆಗೆ ಭೇಟಿ ನೀಡಿದ್ದ ವೇಳೆ, ಮನೆ ಸಂಪೂರ್ಣ ಕುಸಿದಿದ್ದರೂ ಭಾಗಶಃ ಕುಸಿತ ಎಂದು ವರದಿ ನೀಡಿದ್ದ ಇಂಜಿನಿಯರ್​ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತರಾಟೆ ತೆಗೆದುಕೊಂಡರು. ಸರ್ಕಾರ ಹಣ ಕೊಡಲು ಸಿದ್ಧವಿರುವಾಗ ನೀವೇಕೆ ನಿರ್ಲಕ್ಷ್ಯ ಮಾಡುತ್ತಿರಿ. ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ನಿಮಗೆ ಹತ್ತು ಸಾವಿರ ಹಣ ಕೊಡ್ತೀವಿ ಈ ಮನೆಯಲ್ಲಿ ಇರ್ತಿಯಾ..? ಮತ್ತೊಮ್ಮೆ ರೆಡಿ ಮಾಡಿ ವರದಿ ನೀಡುವಂತೆ ಖಾನಾಪುರ ತಹಶೀಲ್ದಾರ್‌ಗೆ ಸೂಚನೆ ನೀಡಿದರು. ಈ ವೇಳೆ ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ನೀರಾವರಿ ಹಾಗೂ ಕಂದಾಯ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ:Watch.. 6 ಕಿಮೀ ಹೊತ್ತೊಯ್ದು ವ್ಯಕ್ತಿ ಅಂತ್ಯಕ್ರಿಯೆ; ಖಾನಾಪುರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ - villagers carried dead body

Last Updated : Jul 29, 2024, 11:04 PM IST

ABOUT THE AUTHOR

...view details