ಕರ್ನಾಟಕ

karnataka

ನಾಗಮಂಗಲ ಗಲಾಟೆ: 55 ಜನರ ಬಂಧನ, ಅಮಾಯಕರ ಮೇಲೆ ಕ್ರಮವಿಲ್ಲ- ಮಂಡ್ಯ ಎಸ್​ಪಿ - Nagamangala Riot Case

By ETV Bharat Karnataka Team

Published : Sep 18, 2024, 1:02 PM IST

Updated : Sep 18, 2024, 2:07 PM IST

ನಾಗಮಂಗಲ ಗಲಾಟೆ ಪ್ರಕರಣ ಸಂಬಂಧ ಮಂಡ್ಯ ಎಸ್​​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಪಟ್ಟಣದಲ್ಲಿ ಹೆಚ್ಚಿನ ಪೊಲೀಸ್​ ಬಂದೋಬಸ್ತ್ ಮಾಡಲಾಗಿದೆ. ಈದ್ ಮಿಲಾದ್ ಹಬ್ಬವೂ ಶಾಂತಿಯುತವಾಗಿ ನಡೆದಿದೆ. ನಗರದಲ್ಲಿ ಶಾಂತಿ ಕಾಪಾಡಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದೆ. ಜನರು ಅಂಗಡಿ-ಮುಂಗಟ್ಟು ತೆರೆದು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ETV Bharat
ಮಂಡ್ಯ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ (ETV Bharat)

ಪ್ರಕರಣದ ಬಗ್ಗೆ ಮಂಡ್ಯ ಎಸ್​​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ (ETV Bharat)

ಮಂಡ್ಯ:"ಸೆ.11ರಂದು ನಡೆದ ಘಟನೆ ಬಳಿಕ ಸದ್ಯ ನಾಗಮಂಗಲ ಪಟ್ಟಣ ಶಾಂತವಾಗಿದೆ. ಘಟನೆ ಸಂಬಂಧ 24 ಪ್ರಕರಣ ದಾಖಲಿಸಲಾಗಿದ್ದು, 55 ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನಾಗಮಂಗಲದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಅಮಾಯಕರಿಗೆ ಏನೂ ಮಾಡಲ್ಲ, ಅವರು ಪಟ್ಟಣಕ್ಕೆ ಬರಬಹುದು. ಘಟನೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಲಾಗಿದೆ. ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್​ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್​ ತಂಡ ರಚನೆ ಮಾಡಲಾಗಿದೆ. ಬೇರೆ ಬೇರೆ ಜಿಲ್ಲೆಯಲ್ಲಿ ನಡೆದಿರುವ ಘಟನೆಗಳ ವಿಡಿಯೋ ಬಿಟ್ಟು, ನಾಗಮಂಗಲ ಪ್ರಕರಣ ಅಂತ ಪೋಸ್ಟ್ ಹಾಕುತ್ತಿದ್ದಾರೆ. ಅಂತವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ" ಎಂದು ಎಸ್​ಪಿ ತಿಳಿಸಿದರು.

"ಮುಂದಿನ ದಿನಗಳಲ್ಲಿ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡಲಾಗುವುದು. ಘಟನೆ ಸಂಬಂಧ ಮೊದಲು ಸುಮೋಟೊ ಕೇಸ್, ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಗುಂಪುಗಾರಿಕೆ, ಅಂಗಡಿ-ಮುಂಗಟ್ಟಿಗೆ ಬೆಂಕಿ, ಬೈಕ್​ಗೆ ಬೆಂಕಿ, ಕಾನೂನು ಸುವ್ಯವಸ್ಥೆಗೆ ತೊಂದರೆ ಸೇರಿದಂತೆ 24 ಪ್ರಕರಣ ದಾಖಲಿಸಲಾಗಿದೆ. 55 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಂಗಡಿ-ಮುಂಗಟ್ಟು ಹಾನಿ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿಯೂ ಪ್ರಕರಣಗಳು ದಾಖಲಾಗಿವೆ. ಸಿಸಿಟಿವಿ ವಿಡಿಯೋ ಪರಿಶೀಲನೆ ನಡೆಸಿ, ಆರೋಪಿಗಳ ಮೇಲೆ ಕ್ರಮ ಜರುಗಿಸಲಾಗಿದೆ" ಎಂದು ಮಾಹಿತಿ ನೀಡಿದರು.

ಅಮಾಯಕರಿಗೆ ತೊಂದರೆ ಕೊಡಲ್ಲ:"ಘಟನೆಯಿಂದ ಕೆಲವು ಗ್ರಾಮಗಳ ಯುವಕರು ಊರು ಬಿಟ್ಟಿದ್ದಾರೆ. ಆದರೆ, ನಾವು ಅಮಾಯಕರಿಗೆ ತೊಂದರೆ ಕೊಡಲ್ಲ. ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿ, ಭಾಗಿಯಾದವರನ್ನು ಮಾತ್ರ ಬಂಧಿಸಿದ್ದೇವೆ. ಆರೋಪಿಗಳ ಪತ್ತೆಗೆ ನಮ್ಮ ತಂಡಗಳು ಕೆಲಸ ಮಾಡುತ್ತಿವೆ. ಸಿಸಿಟಿವಿ ದೃಶ್ಯ ಕಲೆಹಾಕಲಾಗಿದೆ. ಪ್ರಕರಣಲ್ಲಿ 100ಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ" ಎಂದು ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.

ಇಬ್ಬರು ಕೇರಳ ಮೂಲದವರು: "ಬಂಧಿತ ಆರೋಪಿಗಳಲ್ಲಿ ಇಬ್ಬರು ಕೇರಳ ಮೂಲದವರಾಗಿದ್ದಾರೆ. ಮಲಪ್ಪುರಂ ಜಿಲ್ಲೆಯ ಯುಸುಫ್​ ಹಾಗೂ ನಾಸಿರ್​​ ಎಂಬವರನ್ನು ಬಂಧಿಸಲಾಗಿದೆ. ಇವರಿಬ್ಬರೂ 18 ವರ್ಷಗಳಿಂದಲೂ ನಾಗಮಂಗಲ ಪಟ್ಟಣದ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಇವರಿಗೆ ಪಿಎಫ್‌ಐ ಸೇರಿದಂತೆ ಯಾವುದೇ ಸಂಘಟನೆಗಳೊಂದಿಗೆ ಲಿಂಕ್​ ಇರುವ ಬಗ್ಗೆ ಇದುವರೆಗಿನ ತನಿಖೆಯಲ್ಲಿ ಮಾಹಿತಿ ತಿಳಿದಿಲ್ಲ. ಹೆಚ್ಚಿನ ತನಿಖೆ ನಡೆಯುತ್ತಿದೆ. ಇದೇ ವೇಳೆ ಕೇರಳದವರ ಜೊತೆ ಬಾಂಗ್ಲಾದೇಶದವರೂ ವಾಸವಿದ್ದಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಬಗ್ಗೆ ತನಿಖೆ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

"ಘಟನೆಯಲ್ಲಿ ನಷ್ಟವುಂಟಾದ ಬಗ್ಗೆ ಎಫ್​ಐಆರ್​ನಲ್ಲಿ ತಿಳಿಸಲಾಗಿದೆ. ಕೆಲವೆಡೆ ಅಂಗಡಿಗಳ ಸಲಕರಣೆ, ಕಟ್ಟಡಗಳು ಹಾನಿಗೊಳಗಾಗಿದೆ. ಈ ಬಗ್ಗೆ ಪರಿಹಾರ ನೀಡುವ ಸಂಬಂಧ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಎಫ್​ಐಆರ್​ ಪ್ರಕಾರ ನಾಲ್ಕೂವರೆ ಕೋಟಿ ರೂ.ಗಳಷ್ಟು ಹಾನಿಯಾಗಿದೆ" ಎಂದರು.

ಭಯಪಡುವ ಅಗತ್ಯವಿಲ್ಲ:"ಶಾಂತಿ ಸಭೆ ಫಲ ನೀಡಿದೆ. ಆ ಬಳಿಕ ಹಬ್ಬಗಳು, ಗಣೇಶ ನಿಮಜ್ಜನಗಳು ಸಹ ನಡೆದಿದೆ. ಪರಿಸ್ಥಿತಿ ಶಾಂತವಾಗಿದೆ. ಕೆಲ ಯುವಕರು ಗ್ರಾಮಗಳನ್ನು ತೊರೆದಿದ್ದಾರೆ. ಆರೋಪಿಗಳಲ್ಲದವರು ಯಾವುದೇ ಭಯಪಡುವ ಅಗತ್ಯವಿಲ್ಲ. ಜನರೊಂದಿಗೆ ಸಭೆ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ನಾನು ತಿಳಿಸಿದ್ದೇನೆ. ಎಫ್​ಐಆರ್​ ದಾಖಲಿಸಿದರೂ ಕೂಡ ತನಿಖೆಯ ಬಳಿಕವೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಎಫ್​ಐಆರ್​ ಎಂದರೆ ಆರಂಭಿಕ ದಾಖಲೆ ಮಾತ್ರ. ತನಿಖೆ ನಡೆಸಿ, ಆರೋಪಿಗಳ ಪಾತ್ರದ ಅನುಸಾರ ಕ್ರಮ ಕೈಗೊಳ್ಳಲಾಗುವುದು. ಚಾರ್ಜ್​ಶೀಟ್​ ಹಾಕಿದಾಗಲೇ ಸಂಪೂರ್ಣ ಮಾಹಿತಿ ಸಿಗಲಿದೆ" ಎಂದು ಎಸ್​ಪಿ ಮಾಹಿತಿ ನೀಡಿದರು.

ಇದನ್ನೂ ಓದಿ:ಹಳೆ ವೈಷಮ್ಯ: ಬೆಳಗಾವಿಯಲ್ಲಿ ಮೂವರಿಗೆ ಚಾಕು ಇರಿತ, ಮೂವರು ಆರೋಪಿಗಳ ಬಂಧನ - Three Youths Stabbed

Last Updated : Sep 18, 2024, 2:07 PM IST

ABOUT THE AUTHOR

...view details