ಕರ್ನಾಟಕ

karnataka

ಮನೆ ಖರ್ಚಿಗೆ ಗೃಹ ಲಕ್ಷ್ಮಿ ಹಣ ಬಳಕೆ: ಪಂಚ ಗ್ಯಾರಂಟಿ ಯೋಜನೆಗಳ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳೇನು ಗೊತ್ತಾ? - Guarantee Schemes Survey

By ETV Bharat Karnataka Team

Published : Jul 9, 2024, 9:43 AM IST

ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಬಗ್ಗೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿದೆ. ಯೋಜನೆಗಳು ಯಾವ ರೀತಿ ಅನುಕೂಲವಾಗಿವೆ ಎಂಬುದನ್ನು ತಿಳಿಯುವುದು ಇದರ ಉದ್ದೇಶ.

ಪಂಚ ಗ್ಯಾರಂಟಿ ಯೋಜನೆಗಳ ಸಮೀಕ್ಷೆ
ಪಂಚ ಗ್ಯಾರಂಟಿ ಯೋಜನೆಗಳ ಸಮೀಕ್ಷೆ (ETV Bharat)

ಬೆಂಗಳೂರು:ರಾಜ್ಯದಲ್ಲಿ ಪಂಚ ಗ್ಯಾರಂಟಿಗಳು ಜಾರಿಗೆಯಾಗಿ ಒಂದು ವರ್ಷ ಕಳೆದಿದೆ.‌ ಆರ್ಥಿಕ‌ ಸಂಕಷ್ಟದ ಮಧ್ಯೆಯೂ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಗೃಹ ಜ್ಯೋತಿ, ಶಕ್ತಿ ಯೋಜನೆ, ಗೃಹ ಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವ ನಿಧಿ ಯೋಜನೆಗಳಿಂದ ಫಲಾನುಭವಿಗಳು ಪಡೆಯುತ್ತಿರುವ ಪ್ರಯೋಜನಗಳ ಕುರಿತು ಸರ್ಕಾರ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಿದೆ.

ಗೃಹ ಜ್ಯೋತಿ ಯೋಜನೆಯ ಸಮೀಕ್ಷೆ:ಗೃಹ ಜ್ಯೋತಿ ಫಲಾನುಭವಿಗಳ ಪೈಕಿ ಶೇ.45ರಷ್ಟು ಸಮೀಕ್ಷೆ ಮಾಡಲಾಗಿದೆ. ಇನ್ನೂ ಶೇ.55ರಷ್ಟು ಫಲಾನುಭವಿಗಳ ಸಮೀಕ್ಷೆ ನಡೆಸಬೇಕಿದೆ. ಸಮೀಕ್ಷೆಯಂತೆ ಶೇ.98 ಫಲಾನುಭವಿಗಳು ಉಚಿತ ವಿದ್ಯುತ್ ಯೋಜನೆಯಿಂದ ತಮ್ಮ ಜೀವನವನ್ನು ಸುಧಾರಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಶೇ.29 ಜನರು ಯೋಜನೆಯು ಹೆಚ್ಚಿನ ಅಧ್ಯಯನಕ್ಕೆ ಸಹಾಯ ಮಾಡಿದೆ ಎಂದಿದ್ದಾರೆ. ಇನ್ನು ಶೇ.33 ಜನರು ಇದು ಹಣ ಉಳಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಯ ಸಮೀಕ್ಷೆ:ಗೃಹ ಲಕ್ಷ್ಮಿ ಫಲಾನುಭವಿಗಳ ಪೈಕಿ ಶೇ.63 ಸಮೀಕ್ಷೆ ನಡೆಸಲಾಗಿದ್ದು, ಶೇ.37 ಫಲಾನುಭವಿಗಳ ಇನ್ನಷ್ಟೇ ಸಮೀಕ್ಷೆ ನಡೆಸಬೇಕು. ಗೃಹ ಲಕ್ಷ್ಮಿಯಡಿ ಯಜಮಾನಿಗೆ ಕೊಡುವ ಮಾಸಿಕ 2,000 ರೂ. ಹಣದ ಪೈಕಿ ಶೇ.43 ರಷ್ಟು ಹಣವನ್ನು ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸಲು ಬಳಸಿದ್ದಾರೆ. ಶೇ.13ರಷ್ಟು ಹಣವನ್ನು ಮಕ್ಕಳ ಶಾಲಾ ಶಿಕ್ಷಣಕ್ಕಾಗಿ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಶೇ.15ರಷ್ಟು ಜನರು ವೈದ್ಯಕೀಯ ವೆಚ್ಚಗಳಿಗೆ ಬಳಸುತ್ತಿದ್ದರೆ, ಶೇ.23ರಷ್ಟು ಜನರು ಸಾಮಾನ್ಯ ಮನೆ ವೆಚ್ಚಕ್ಕಾಗಿ ಬಳಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಶಕ್ತಿ ಯೋಜನೆಯ ಸಮೀಕ್ಷೆ:ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯ ಸಮೀಕ್ಷೆಯಲ್ಲಿ ಶೇ.98ರಷ್ಟು ಜನರು ಯೋಜನೆಯ ಪ್ರಯೋಜನ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಶೇ.94ರಷ್ಟು ಜನರು ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅನ್ನಭಾಗ್ಯ ಯೋಜನೆಯ ಸಮೀಕ್ಷೆ:ಅನ್ನಭಾಗ್ಯದಡಿ ಒಟ್ಟು ಫಲಾನುಭವಿಗಳ ಪೈಕಿ ಶೇ.73ರಷ್ಟು ಸಮೀಕ್ಷೆ ಮಾಡಲಾಗಿದೆ. ಶೇ.27 ಫಲಾನುಭವಿಗಳ ಸಮೀಕ್ಷೆ ನಡೆಸಬೇಕಾಗಿದೆ. ಸಮೀಕ್ಷೆಯಲ್ಲಿ ಶೇ.90 ರಷ್ಟು ಜನರು ಸರ್ಕಾರ ಅಕ್ಕಿಯ ಜೊತೆಗೆ ಬೇಳೆಕಾಳುಗಳು, ತೈಲ ಮುಂತಾದ ಇತರ ಆಹಾರ ಪದಾರ್ಥಗಳನ್ನು ಒದಗಿಸಿದರೆ ಉತ್ತಮ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಯುವನಿಧಿ ಸಮೀಕ್ಷೆ:ಯುವನಿಧಿ ಗ್ಯಾರಂಟಿ ಸಮೀಕ್ಷೆಯಲ್ಲಿ ಶೇ.73ರಷ್ಟು ಯುವಕರು, ಆರ್ಥಿಕ ಒತ್ತಡ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್ 1ರಿಂದ ಮಾರ್ಚ್ 15ರ ವರೆಗೆ ಸಮೀಕ್ಷೆ ನಡೆಸಲಾಗಿದೆ. ಇದಕ್ಕಾಗಿ 72,435 ಅಂಗನವಾಡಿ ಕಾರ್ಯಕರ್ತರು, 42,417 ಆಶಾ ಕಾರ್ಯಕರ್ತರು, 2,233 ಬಿಬಿಎಂಪಿ ಸಮೀಕ್ಷಾಕಾರರು, 581 ನಗರ ಮತ್ತು ಪಂಚಾಯತ್ ರಾಜ್ ಸಮೀಕ್ಷಾಕಾರರನ್ನು ನೋಂದಾಯಿಸಲಾಗಿದೆ. ಒಟ್ಟು 84,52,317 ಕುಟುಂಬಗಳ ಮತ್ತು 5 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಪಂಚ ಗ್ಯಾರಂಟಿ ಆರ್ಥಿಕ ಹೊರೆ; ಸರ್ಕಾರ ಈವರೆಗೆ ಮಾಡಿದ ಸಾಲದ ಸ್ಥಿತಿಗತಿ ಏನಿದೆ? - Karnataka Government

ABOUT THE AUTHOR

...view details