ಕರ್ನಾಟಕ

karnataka

ಪಾಕ್‌ ಪರ ಘೋಷಣೆ ಆರೋಪ: ಸಮಗ್ರ ತನಿಖೆಯ ಅಗತ್ಯವಿದೆ ಎಂದ ಪರಮೇಶ್ವರ್

By ETV Bharat Karnataka Team

Published : Feb 28, 2024, 10:29 AM IST

Updated : Feb 28, 2024, 1:11 PM IST

ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪ ಪ್ರಕರಣದಲ್ಲಿ ಘಟನೆಯ ದೃಶ್ಯಗಳನ್ನು ಎಫ್​ಎಸ್​​ಎಲ್​ಗೆ ವೈಜ್ಞಾನಿಕ ಪರಿಶೀಲನೆಗೆ ಕಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ತಿಳಿಸಿದ್ದಾರೆ.

home-minister-parameshwar-reacts-on-pro-pak-slogan-allegation
ಪಾಕ್‌ ಪರ ಘೋಷಣೆ ಆರೋಪ: ಸಮಗ್ರ ತನಿಖೆಯ ಅಗತ್ಯವಿದೆ ಎಂದ ಪರಮೇಶ್ವರ್

ಗೃಹ ಸಚಿವ ಡಾ.ಜಿ. ಪರಮೇಶ್ವರ್

ಬೆಂಗಳೂರು: ''ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಆರೋಪ ಪ್ರಕರಣದ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ. ತನಿಖೆಯ ನಂತರವೇ ನಿರ್ಧಾರಕ್ಕೆ ಬರಲಾಗುವುದು'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಹೇಳಿದ್ದಾರೆ. ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ''ಘಟನೆಯ ಕುರಿತು ಈಗಾಗಲೇ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಜೆಪಿಯವರು ನೀಡಿರುವ ದೂರನ್ನೂ ಸಹ ಅದರ ಜೊತೆಗೆ ಸೇರಿಸಿಕೊಳ್ಳಲಾಗಿದೆ'' ಎಂದು ಮಾಹಿತಿ ನೀಡಿದ್ದಾರೆ.

''ಪ್ರಕರಣದಲ್ಲಿ ಎರಡು ರೀತಿಯ ಅಭಿಪ್ರಾಯಗಳಿವೆ. ಕೆಲವರು ಅಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ನಾಸಿರ್ ಹುಸೇನ್ ಜಿಂದಾಬಾದ್ ಎನ್ನಲಾಗಿದೆ ಎಂದಿದ್ದಾರೆ. ಹಾಗಾಗಿ, ಘಟನೆಯ ಕುರಿತು ಮೊದಲು ಸುದ್ದಿ ಪ್ರಸಾರ ಮಾಡಿದವರಿಂದ ಅಲ್ಲಿನ ದೃಶ್ಯಗಳನ್ನ ಪಡೆದುಕೊಂಡು ಎಫ್​ಎಸ್​​ಎಲ್​ಗೆ ವೈಜ್ಞಾನಿಕ ಪರಿಶೀಲನೆಗೆ ಕಳಿಸುತ್ತಿದ್ದೇವೆ. ಕೂಗಿದ ವ್ಯಕ್ತಿ, ಆತನ ಅಕ್ಕಪಕ್ಕದಲ್ಲಿದ್ದವರನ್ನು ತನಿಖೆ ಮಾಡಬೇಕು. ಆ ನಂತರದಲ್ಲಿ ಆ ವ್ಯಕ್ತಿ ಪಾಕ್ ಪರ ಘೋಷಣೆ ಕೂಗಿರುವುದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ'' ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಆರೋಪ ವಿಚಾರ ಪ್ರತಿಕ್ರಿಯಿಸಿ, ''ಘಟನೆಯಲ್ಲಿ ಕಾಂಗ್ರೆಸ್ ಪಕ್ಷ ಏನು ತಪ್ಪು‌ ಮಾಡಿದೆ. ಇದರಲ್ಲಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ಬಿಜೆಪಿಯವರ ಆರೋಪಗಳು ಮೊದಲಿನಿಂದಲೂ ಇವೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಪರ ಇದೆ ಎನ್ನುವುದು ಅವರು ಮೊದಲಿನಿಂದಲೂ ಮಾಡಿಕೊಂಡು ಬಂದಿರುವ ಆರೋಪ. ನಾಸಿರ್ ಹುಸೇನ್ ವರ್ತನೆಯ ಬಗ್ಗೆ ಗಮನಿಸಿಲ್ಲ, ಕೋಪದಲ್ಲಿ ಹೇಳಿರಬೇಕು'' ಎಂದು ಪರಮೇಶ್ವರ್ ತಿಳಿಸಿದ್ದಾರೆ.

''ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಆತ್ಮಸಾಕ್ಷಿ ಹೇಳಿದಂತೆ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ. ಕಾಂಗ್ರೆಸ್‌ಗೆ ಮತ ಹಾಕುವಂತೆ ಆತ್ಮಸಾಕ್ಷಿ ಹೇಳಿದೆ ಎಂದರ್ಥ'' ಎಂದು‌ ಗೃಹ ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

ಸ್ಪೀಕರ್ ಯು.ಟಿ.ಖಾದರ್

ತನಿಖೆಯಾಗಿ ಸಂಶಯಗಳು ಬಗೆಹರಿಯಲೆಂದ ಸ್ಪೀಕರ್​:''ವಿಧಾಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿರುವುದು ನಿಜವಾಗಿದ್ದರೆ ಅದನ್ನು ನಾನು ಖಂಡಿಸುತ್ತೇನೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಇಂದು ಸದನದ ಕಲಾಪಕ್ಕೆ ಹಾಜರಾಗುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ''ಘಟನೆ ನಡೆದಿರುವ ಸ್ಥಳ ನನ್ನ ವ್ಯಾಪ್ತಿಯಲ್ಲಿಲ್ಲ. ಗೃಹ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ. ಅಂತಹ‌ ಘಟನೆ ನಿಜವೇ ಆಗಿದ್ದಲ್ಲಿ, ಕೂಗಿದವರು ಯಾರು? ಆ ಗುಂಪಿನಲ್ಲಿ ಜೊತೆ ಇದ್ದವರಾ? ಅಥವಾ ಸೇರಿಕೊಂಡವರಾ ಎನ್ನುವುದರ ತನಿಖೆಯಾಗಬೇಕಾಗುತ್ತದೆ. ಸ್ಪಷ್ಟವಾದ ಚಿತ್ರಣ ಹೊರಬರಬೇಕು. ಮತ್ತು‌ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು'' ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ''ಆ ತರದ ಘೋಷಣೆ ಕೂಗಿರಲಿಲ್ಲವೆಂದು ನಿನ್ನೆ ನಾಸಿರ್ ಹುಸೇನ್‌ರವರು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ, ಎಫ್ಎಸ್ಎಲ್ ವರದಿ ಬರಬೇಕು. ಹಾಗೇನಾದರೂ ಘೋಷಣೆ ಕೂಗಿರುವುದು ನಿಜವಾಗಿದ್ದರೆ ಅಂಥವರಿಗೆ ಶಿಕ್ಷೆಯಾಗಬೇಕು'' ಎಂದಿದ್ದಾರೆ.

ಇದನ್ನೂ ಓದಿ:ಪಾಕ್ ಪರ ಘೋಷಣೆ ಆರೋಪ: ಸರ್ಕಾರ ವಜಾಕ್ಕೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ

Last Updated : Feb 28, 2024, 1:11 PM IST

ABOUT THE AUTHOR

...view details