ಮೈಸೂರು : ಶ್ರೀ ಕ್ಷೇತ್ರ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ 178 ಜೋಡಿಗಳು ನವಜೀವನಕ್ಕೆ ಕಾಲಿಟ್ಟರು. ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲನೆ ನೀಡಿದರು.
178 ಜೋಡಿಗಳು ಸತಿಪತಿಗಳಾಗಿ ಸಪ್ತಪದಿ ತುಳಿದ್ರು. ಇದರಲ್ಲಿ, ಪರಿಶಿಷ್ಟ ಜಾತಿಯ 84, ಪರಿಶಿಷ್ಟ ಪಂಗಡ 22, ಹಿಂದುಳಿದ ವರ್ಗ 22, ವೀರಶೈವ ಲಿಂಗಾಯತ 3, ಅಂತರ ಜಾತಿ 23, ಅಂತರ ಧರ್ಮ 1, ನೆರೆ ರಾಜ್ಯ ತಮಿಳುನಾಡಿನ 17 ಜೋಡಿಗಳು, ವಿಶೇಷ ಚೇತನರು 3 ಮತ್ತು ಮರು ಮದುವೆಯ 3 ಜೋಡಿಗಳಿಗೆ ಸಾಮೂಹಿಕ ವಿವಾಹ ಮಾಡಲಾಯಿತು. 2000 ರಿಂದ 2024ರ ವರೆಗೆ ಶ್ರೀ ಕ್ಷೇತ್ರದ ಸಾಮೂಹಿಕ ವಿವಾಹದಲ್ಲಿ 3,194 ಜೋಡಿಗಳು ಸತಿಪತಿಗಳಾಗಿದ್ದಾರೆ.
ಮಾಸಿಕ ವಿವಾಹ ಕಾರ್ಯಕ್ರಮದಲ್ಲಿ 462 ಜೋಡಿಗಳು ಸತಿಪತಿಗಳಾಗಿದ್ದು, ಎಲ್ಲ ಸೇರಿ ಇದುವರೆಗೆ ಒಟ್ಟು 3,656 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.