ಕರ್ನಾಟಕ

karnataka

ETV Bharat / state

ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಅನಿರೀಕ್ಷಿತವಲ್ಲ, ಅವರಿಗೆ ಒಳ್ಳೆಯದಾಗಲಿ: ಬಿ.ವೈ ವಿಜಯೇಂದ್ರ

ಯೋಗೇಶ್ವರ್ ಪಕ್ಷ ತೊರೆದಿದ್ದರಿಂದ ಪಕ್ಷದ ಸಂಘಟನೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಬಿ.ವೈ ವಿಜಯೇಂದ್ರ
ಬಿ.ವೈ ವಿಜಯೇಂದ್ರ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:ಇವತ್ತಿನ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ, ಎಲ್ಲವೂ ಕೂಡ ನಿರೀಕ್ಷಿತವೇ, ಕಾಂಗ್ರೆಸ್​ನಲ್ಲೂ ಯೋಗೇಶ್ವರ್​ಗೆ ನಿಕಟ ಸಂಪರ್ಕ ಇತ್ತು. ಹಾಗಾಗಿ ಒಂದು ರಾಜಕೀಯ ನಿರ್ಧಾರವನ್ನು ಅಂತಿಮವಾಗಿ ತೆಗೆದುಕೊಂಡಿದ್ದಾರೆ. ಯೋಗೇಶ್ವರ್​ಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯ ಸಂಬಂಧ ನಾನು, ನಮ್ಮ ಪಕ್ಷದ ಕೆಲವು ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಮುಖಂಡರು, ಕುಮಾರಸ್ವಾಮಿಯವರು ಕುಳಿತು ಚರ್ಚೆ ಮಾಡುತ್ತೇವೆ. ಚನ್ನಪಟ್ಟಣದಲ್ಲಿ ಯಾರು ಅಭ್ಯರ್ಥಿ ಎಂದು ಜೆಡಿಎಸ್‍ನವರು ತೀರ್ಮಾನ ಮಾಡಬೇಕಾಗುತ್ತದೆ. ಯಾರನ್ನೇ ಅಭ್ಯರ್ಥಿ ಎಂದು ಘೋಷಿಸಿದರೂ ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ, ಒಂದಾಗಿ ಈ ಚುನಾವಣೆಯನ್ನು ಎದುರಿಸುತ್ತೇವೆ ಎಂದು ತಿಳಿಸಿದರು.

ಎನ್‍ಡಿಎ ಅಭ್ಯರ್ಥಿ ಗೆಲ್ಲುವ ನಿಟ್ಟಿನಲ್ಲಿ ನಾವು ಸಂಪೂರ್ಣವಾಗಿ ಶ್ರಮಿಸುತ್ತೇವೆ ಮತ್ತು ಯಶಸ್ವಿಯಾಗುವ ಸಂಪೂರ್ಣ ವಿಶ್ವಾಸ ಇದೆ. ಯೋಗೇಶ್ವರ್ ಪಕ್ಷ ತೊರೆದಿದ್ದರಿಂದ ಪಕ್ಷದ ಸಂಘಟನೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಯೋಗೇಶ್ವರ್ ಅವರು ಚನ್ನಪಟ್ಟಣದಿಂದ ಈ ಹಿಂದೆ ಕಾಂಗ್ರೆಸ್ ಪಕ್ಷ, ಪಕ್ಷೇತರರಾಗಿ ಗೆದ್ದಿದ್ದರು. ಅದು ಬೇರೆ ಪ್ರಶ್ನೆ. ಹಳೆ ಮೈಸೂರು ಭಾಗದಲ್ಲೂ ಬಿಜೆಪಿ ಸಂಘಟನೆಯನ್ನು ಹೆಚ್ಚು ವೃದ್ಧಿಸುವುದು ನಮ್ಮ ಗುರಿ ಎಂದರು.

ಬಿ.ವೈ ವಿಜಯೇಂದ್ರ (ETV Bharat)

ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಯೋಗೇಶ್ವರ್ ಮೇಲೆ ಅವಲಂಬನೆ ಇಲ್ಲ. ಕಾರ್ಯಕರ್ತರ ಪಡೆ ಇದೆ. ಪಕ್ಷ ಗಟ್ಟಿಗೊಳಿಸುವ ಕಡೆ ಮುಂದಿನ ದಿನಗಳಲ್ಲಿ ಗಮನಿಸುತ್ತೇವೆ. ನಮ್ಮ ಮುಂದಿನ ಕಾರ್ಯತಂತ್ರಗಳೇನು, ಅದನ್ನು ನಾವು ಮಾಡುತ್ತೇವೆ. ಸಿ.ಪಿ. ಯೋಗೇಶ್ವರ್​ಗೆ ಬಿಜೆಪಿಯಲ್ಲಿ ಇದ್ದರೆ ಏನು ಲಾಭ ಇರುತ್ತಿತ್ತು, ಕಾಂಗ್ರೆಸ್‍ಗೆ ಹೋಗಿ ಏನು ನಷ್ಟ ಆಗಲಿದೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.

ಗುರುವಾರ ಬೆಳಗ್ಗೆಯೊಳಗೆ ಅಭ್ಯರ್ಥಿ ಆಯ್ಕೆ:ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಕೆಗೆ ಇದೇ ಅ.25 ಕೊನೆಯ ದಿನ. ಸಭೆ ನಡೆಸಿ ಗುರುವಾರಬೆಳಗ್ಗೆಯೊಳಗೆ ಅಭ್ಯರ್ಥಿಯನ್ನು ತೀರ್ಮಾನಿಸುತ್ತೇವೆ. ಯೋಗೇಶ್ವರ್ ಅವರು ಸಾಕಷ್ಟು ವಿಚಾರಗಳನ್ನು ಹೇಳಬಹುದು, ಹೇಳಲಿ. ಆದರೆ, ಇವತ್ತು ಅವರೊಂದು ತೀರ್ಮಾನ ತೆಗೆದುಕೊಂಡಿದ್ದಾರೆ. ನಾವೇನು ಮಾಡಬೇಕೋ, ನಮ್ಮ ಕಾರ್ಯತಂತ್ರವನ್ನು ನಾವು ಮಾಡುತ್ತೇವೆ ಎಂದರು.

ಚನ್ನಪಟ್ಟಣ ಹೆಚ್​ ಡಿ ಕುಮಾರಸ್ವಾಮಿಯವರು ಗೆದ್ದಿರುವ ಕ್ಷೇತ್ರ. ಅಭ್ಯರ್ಥಿ ಯಾರಾಗಬೇಕೆಂದು ಜೆಡಿಎಸ್‍ನವರು ತೀರ್ಮಾನಿಸಬೇಕೆಂದು ನಮ್ಮ ರಾಷ್ಟ್ರೀಯ ನಾಯಕರೂ ಹೇಳಿದ್ದಾರೆ. ಅದೇ ರೀತಿ ಯಡಿಯೂರಪ್ಪನವರೂ ಹೇಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ:'ಚನ್ನಪಟ್ಟಣ ನನ್ನ ಕ್ಷೇತ್ರ ಎಂಬ ಪ್ರತಿಷ್ಠೆ ಬಿಟ್ಟು ಕಾಂಗ್ರೆಸ್ ಎದುರಿಸಬೇಕು': ಹೆಚ್​ಡಿಕೆಗೆ ಪ್ರೀತಂ ಗೌಡ ಟಕ್ಕರ್​

ABOUT THE AUTHOR

...view details