ಬೆಂಗಳೂರು: ಹಿಂದೂಸ್ತಾನ್ ಮಶೀನ್ ಆ್ಯಂಡ್ ಟೂಲ್ಸ್ (ಹೆಚ್ಎಂಟಿ) ಕಾರ್ಖಾನೆಯ ಹಾಲಿ ಹಾಗೂ ನಿವೃತ್ತ ಉದ್ಯೋಗಿಗಳು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಸಲ್ಲಿಸಿದರು.
ಬೆಂಗಳೂರಿನ ಹೆಚ್ಎಂಟಿ ಕಚೇರಿಯಲ್ಲಿ ಇಂದು ಸಚಿವರನ್ನು ಭೇಟಿಯಾದ ಉದ್ಯೋಗಿಗಳು ವೇತನ, ಗ್ರಾಚ್ಯುಟಿ, ಭವಿಷ್ಯ ನಿಧಿ ಪಾವತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. "ಕೇಂದ್ರ ಬೃಹತ್ ಕೈಗಾರಿಕೆ ಸಚಿವರೊಬ್ಬರನ್ನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ನಾವು ಭೇಟಿಯಾಗುತ್ತಿದ್ದು, ಅದಕ್ಕೆ ಅವಕಾಶ ಕೊಟ್ಟ ನಿಮಗೆ ಧನ್ಯವಾದಗಳು" ಎಂದು ಹೇಳಿದರು.
ಸಚಿವರ ಮುಂದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ನಿವೃತ್ತ ಉದ್ಯೋಗಿಗಳು, "ನಾವು ನಿವೃತ್ತರಾಗಿ ಹಲವಾರು ವರ್ಷಗಳೇ ಕಳೆದಿದ್ದರೂ ನಮಗೆ ದೊರೆಯಬೇಕಾದ ಸೌಲಭ್ಯಗಳು ಇನ್ನೂ ಬಂದಿಲ್ಲ. ಕೆಲವರು ಕಾನೂನು ಹೋರಾಟ ನಡೆಸುತ್ತಿದ್ದು, ಇನ್ನೂ ಅನೇಕ ಉದ್ಯೋಗಿಗಳಿಗೆ ಅದು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ತಾವು ತುರ್ತಾಗಿ ಗಮನ ಹರಿಸಬೇಕು" ಎಂದು ಮನವಿ ಮಾಡಿದರು.
"ನಿವೃತ್ತಿ ನಂತರ ಕಂಪನಿಯಿಂದ ಬರಬೇಕಾದ ನಮ್ಮ ಸೌಲಭ್ಯಗಳು ಬಾರದೆ ಇರುವುದರಿಂದ ನಮಗೆ ಕಾಯಿಲೆ ಬಂದಾಗ ಔಷಧ ಖರೀದಿ ಮಾಡುವುದು ಕೂಡ ಕಷ್ಟವಾಗಿದೆ. ಸುಮಾರು ಐದಾರು ವರ್ಷಗಳಿಂದ ನಮಗೆ ಬರಬೇಕಿರುವ 30ರಿಂದ 40 ಲಕ್ಷ ರೂಪಾಯಿ ಹಣ ಕಂಪನಿಯಲ್ಲಿಯೇ ಉಳಿದಿದೆ. ಈ ಹಣವನ್ನು ತಾವು ಕೊಡಿಸಬೇಕು" ಎಂದು ಕೋರಿದರು.
"ಅಲ್ಲದೆ, ಯಾವುದೇ ಕಾರಣಕ್ಕೂ ದೇಶದ ಪ್ರತಿಷ್ಠೆಯ ಕಂಪನಿಯಾಗಿದ್ದ ಹೆಚ್ಎಂಟಿಯನ್ನು ಮುಚ್ಚಬಾರದು. ಒಂದು ವೇಳೆ ಅಂತಹ ಸಂದರ್ಭ ಬಂದರೆ ಬಿಹೆಚ್ಇಎಲ್, ಬಿಇಎಲ್, ಬಿಇಎಂಎಲ್ ನಂತಹ ಕಂಪನಿಗಳಲ್ಲಿ ಹೆಚ್ಎಂಟಿಯನ್ನು ವಿಲೀನ ಮಾಡಬೇಕು ಅಥವಾ ನೌಕರಿಗಾದರೂ ಆ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಮಾಡಿಕೊಡಬೇಕು" ಎಂದು ಮನವಿ ಮಾಡಿಕೊಂಡರು.
"ಕಾಲಮಿತಿಯೊಳಗೆ ತಮ್ಮ ಕಷ್ಟಗಳಿಗೆ ನೀವು ಸ್ಪಂದಿಸಬೇಕು, ಇಲ್ಲವಾದರೆ ನಮಗೆ ಬದುಕೇ ಕಷ್ಟವಾಗಿದೆ" ಎಂದು ಅಳಲು ತೋಡಿಕೊಂಡರು.