ಕರ್ನಾಟಕ

karnataka

ಕಳ್ಳತನ ಮಾಡಿಲ್ಲ ಎಂದು ಪ್ರತಿಪಾದಿಸಿದ್ದ ಮನೆಗೆಲಸದಾಕೆ: ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸತ್ಯ ಬಯಲು - house burglary case

By ETV Bharat Karnataka Team

Published : Jul 16, 2024, 5:23 PM IST

ಮನೆಕಳ್ಳತನ ಮಾಡಿಲ್ಲ ಎಂದು ಪ್ರತಿಪಾದಿಸಿದ್ದ ಮನೆಗೆಲಸದಾಕೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ವೇಳೆ ಸತ್ಯ ಒಪ್ಪಿಕೊಂಡಿದ್ದು ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿ 35 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಮನೆಕಳ್ಳತನ ಪ್ರಕರಣ
ಮನೆಕಳ್ಳತನ ಪ್ರಕರಣ (ETV Bharat)

ಬೆಂಗಳೂರು: ಮನೆಕಳ್ಳತನ ಮಾಡಿಲ್ಲ ಎಂದು ಪ್ರತಿಪಾದಿಸಿದ್ದ ಮನೆಗೆಲಸದಾಕೆ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಹಲವು ಬಾರಿ ನೊಟೀಸ್ ನೀಡಿ ವಿಚಾರಣೆಗೊಳಪಡಿಸಿದರೂ ಗುಟ್ಟು ಬಿಟ್ಟುಕೊಡದ ಆರೋಪಿಯನ್ನು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಕಳ್ಳತನ ಮಾಡಿರುವುದು ಬಯಲಾಗಿದ್ದು ಕೆಂಗೇರಿ ಠಾಣೆ ಪೊಲೀಸರು ಆಕೆಯನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಬಿಡದಿ ಮೂಲದ ಶಾರದಮ್ಮ ಬಂಧಿತ ಆರೋಪಿಯಾಗಿದ್ದು, ಕಳ್ಳತನ ಮಾಡಿ ಮನೆಯಲ್ಲಿ ಬಚ್ಚಿಟ್ಟಿದ್ದ 35 ಲಕ್ಷ ಮೌಲ್ಯದ 583 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ವಿವರ:ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೆಂಗೇರಿ ಠಾಣಾ ವ್ಯಾಪ್ತಿಯ ವಿನಾಯಕ್ ಲೇಔಟ್​ ನಿವಾಸಿ ಶಶಿಕಾಂತ್ ಎಂಬುವರ ಮನೆಯಲ್ಲಿ ಶಾರದಮ್ಮ ಮನೆಗೆಲಸ ಮಾಡುತ್ತಿದ್ದಳು. ಕಳೆದ ವರ್ಷ ಜುಲೈ 27ರಂದು ತಮ್ಮ ಮನೆಯ ಲಾಕರ್​ನಲ್ಲಿಟ್ಟಿದ್ದ 583 ಗ್ರಾಂ ಚಿನ್ನಾಭರಣ ಕಳ್ಳತನವಾಗಿದ್ದು, ಮನೆಕೆಲಸದಾಕೆ ಮೇಲೆ ಅನುಮಾನವಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಶಶಿಕಾಂತ್ ಉಲ್ಲೇಖಿಸಿದ್ದರು.

ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿತೆಯನ್ನ ವಶಕ್ಕೆ‌ ಪಡೆದು ಪ್ರಶ್ನಿಸಿದ್ದರು. ವಿಚಾರಣೆ ವೇಳೆ ತಾನು ಕಳ್ಳತನ ಮಾಡಿಲ್ಲ‌ ಎಂದು ಹೇಳಿಕೆ ನೀಡಿದ್ದಳು. ಹೀಗಾಗಿ ಪೊಲೀಸರು ಬಿಟ್ಟು ಕಳುಹಿಸಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದರೂ ಆರೋಪಿತರ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ಈ ವೇಳೆ ಸಿಸಿಟಿವಿಯಲ್ಲಿ ಶಾರದಮ್ಮ ಅನುಮಾನಸ್ಪಾದವಾಗಿ ಓಡಾಡುತ್ತಿರುವುದನ್ನು ಕಂಡ ಪೊಲೀಸರು ಆಕೆಯ ಮೇಲೆ ಗುಮಾನಿ ವ್ಯಕ್ತಪಡಿಸಿದ್ದರು.

ಇದೇ ಶಂಕೆ ಮೇರೆಗೆ ನ್ಯಾಯಾಲಯದಿಂದ ಅನುಮತಿಪಡೆದುಕೊಂಡು ಶಾರದಮ್ಮಳನ್ನ ವಶಕ್ಕೆ ಪಡೆದ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಸುಳ್ಳು ಪತ್ತೆ ಪರೀಕ್ಷೆ (ಫಾಲಿಗ್ರಫಿ) ಹಾಗೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿದ್ದರು. ಇತ್ತೀಚೆಗೆ ಎಫ್ಎಸ್​ಎಲ್ ಅಧಿಕಾರಿಗಳು ವರದಿ ನೀಡಿದ್ದ ಇದರಲ್ಲಿ ಕೃತ್ಯ ಎಸಗಿರುವುದು ಸಾಬೀತಾಗಿದೆ. ಈ ಹಿನ್ನೆಲೆ ಆರೋಪಿ ಶಾರದಮ್ಮನನ್ನು ಬಂಧಿಸಿರುವುದಾಗಿ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಕೂಡ ಇದೇ ರೀತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ಮನೆಗೆಲಸ ಮಾಡುತ್ತಿದ್ದ ಮಹಿಳಾ ಆರೋಪಿಯನ್ನ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿ ಸತ್ಯವನ್ನ ಬಯಲು ಮಾಡಲಾಗಿತ್ತು. ಹಲವು ಬಾರಿ‌ ನೊಟೀಸ್ ನೀಡಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿದರೂ ಗುಟ್ಟು ಬಿಟ್ಟುಕೊಡದ ಆರೋಪಿತೆ ಅನ್ನಪೂರ್ಣ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಳು.

ಮಹಾಲಕ್ಷ್ಮೀ‌ ಲೇಔಟ್​ನಲ್ಲಿರುವ ಉದ್ಯಮಿ ಹೊನ್ನಾಚಾರಿ ಎಂಬುವರ ಮನೆಯಲ್ಲಿ ಆರೋಪಿತೆ ಅನ್ನಪೂರ್ಣ 2021 ರಿಂದ 2022 ಜನವರಿಗೂ ಕೆಲಸ ಮಾಡಿದ್ದಳು. ಈ ಅವಧಿಯಲ್ಲಿ ಹಂತ - ಹಂತವಾಗಿ 10 ಲಕ್ಷ ರೂ ಮೌಲ್ಯದ 250 ಗ್ರಾಂ ಚಿನ್ನಾಭರಣ ಮನೆಯಲ್ಲಿ ಕಳವು ಆಗಿತ್ತು. ಮನೆ ಕೆಲಸದಾಕೆ ಮೇಲೆ ಅನುಮಾನಗೊಂಡು ಆಕೆಯ ವಿರುದ್ಧ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ದೆಸೆಯಿಂದ ನಾಲ್ಕು ಬಾರಿ ನೊಟೀಸ್ ಕೊಟ್ಟು ವಿಚಾರಣೆ ನಡೆಸಿದರೂ, ಆರೋಪಿ ಮಹಿಳೆ ತಾನು ಚಿನ್ನ ಕದ್ದಿಲ್ಲ ಎಂದೇ ಪೊಲೀಸರ ಮುಂದೆ ಪ್ರತಿಪಾದಿಸಿದ್ದಳು.

ಇದನ್ನೂ ಓದಿ:ಕಳ್ಳತನ ಪ್ರಕರಣದ ಲಾಭ ಪಡೆದು ಸುಳ್ಳು ದೂರು ನೀಡಿದ್ದ ಎಟಿಎಂ ನಿರ್ವಹಣಾ ಕಂಪನಿ ವಿರುದ್ಧ ಎಫ್ಐಆರ್: ಐವರ ಬಂಧನ - Fake Complaint

ABOUT THE AUTHOR

...view details