ಕರ್ನಾಟಕ

karnataka

ETV Bharat / bharat

'ಪ್ರವಾಹ್​' ನದಿ ಪ್ರಾಧಿಕಾರದಿಂದ 3 ದಿನ ಮಹಾದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ - Mahadayi Issue

ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರದ 'ಪ್ರವಾಹ್​' ನದಿ ಪ್ರಾಧಿಕಾರ ಮಹದಾಯಿ ಜಲಾನಯನ ಪ್ರದೇಶಗಳನ್ನು ಪರಿಶೀಲಿಸಲಿದೆ ಎಂದು ಗೋವಾ ಸಚಿವ ಸುಭಾಷ್ ಶಿರೋಡ್ಕರ್ ಹೇಳಿದ್ದಾರೆ.

By ETV Bharat Karnataka Team

Published : Jul 4, 2024, 3:18 PM IST

Updated : Jul 6, 2024, 3:27 PM IST

Mahadayi River
ಮಹಾದಾಯಿ ನದಿ (IANS)

ಪಣಜಿ(ಗೋವಾ):ನದಿ ನೀರು ತಿರುವು ವಿವಾದದ ನಡುವೆ 'ಪ್ರವಾಹ್​' ನದಿ ಪ್ರಾಧಿಕಾರ ಇಂದಿನಿಂದ ಮೂರು ದಿನಗಳ ಕಾಲ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮಹದಾಯಿ ಜಲಾನಯನ ಪ್ರದೇಶಗಳ ಪರಿಶೀಲನೆ ನಡೆಸಲಿದೆ ಎಂದು ಗೋವಾ ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ತಿಳಿಸಿದ್ದಾರೆ.

ಮಹದಾಯಿ ಜಲ ವಿವಾದಗಳ ನ್ಯಾಯಾಧಿಕರಣದ ಆದೇಶ ಮತ್ತು ತೀರ್ಪುಗಳ ಅನುಸರಣೆ ಮತ್ತು ಅನುಷ್ಠಾನವನ್ನು ಸಕ್ರಿಯಗೊಳಿಸಲು ಕೇಂದ್ರ ಸರ್ಕಾರ ಕಳೆದ ವರ್ಷ ಕಲ್ಯಾಣ ಮತ್ತು ಸಾಮರಸ್ಯಕ್ಕಾಗಿ ಪ್ರಗತಿಪರ ನದಿ ಪ್ರಾಧಿಕಾರವನ್ನು (Progressive River Authority for Welfare & Harmony - PRAWAH) ರಚಿಸಿದೆ. ನದಿ ನೀರನ್ನು ತಿರುಗಿಸಲು ಕರ್ನಾಟಕಕ್ಕೆ ಅನುಮತಿ ನೀಡಿದರೆ ಉಂಟಾಗುವ ಪರಿಣಾಮಗಳನ್ನು ಪರಿಶೀಲಿಸಲು ಜಲಪಾತಗಳು ಮತ್ತು ಅಣೆಕಟ್ಟುಗಳು ಸೇರಿದಂತೆ ಎಲ್ಲ ಪ್ರದೇಶಗಳಿಗೆ ಪ್ರವಾಹ್ ಸಮಿತಿ ಸದಸ್ಯರು ಭೇಟಿ ನೀಡಲಿದ್ದಾರೆ ಎಂದು ಶಿರೋಡ್ಕರ್ ಮಾಹಿತಿ ನೀಡಿದರು.

''ಜುಲೈ 4ರಿಂದ 6ರವರೆಗೆ ನಡೆಯಲಿರುವ ಈ ಪರಿಶೀಲನೆಯಲ್ಲಿ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಅಧಿಕಾರಿಗಳು 'ಪ್ರವಾಹ್' ಸದಸ್ಯರೊಂದಿಗೆ ಇರಲಿದ್ದಾರೆ. ಪ್ರಸಿದ್ಧ ಸುರ್ಲಾ ಜಲಪಾತ (ಕರ್ನಾಟಕದ ಗಡಿಯಲ್ಲಿದೆ) ಸೇರಿದಂತೆ ಗೋವಾದ ಜಲಸಂಪನ್ಮೂಲಗಳು ನೀರನ್ನು ತಿರುಗಿಸಿದರೆ ಹೇಗೆ ಒಣಗುತ್ತವೆ ಎಂಬುದನ್ನು ನಾವು ಪ್ರಾಧಿಕಾರದ ಸದಸ್ಯರಿಗೆ ತಿಳಿಸಲಿದ್ದೇವೆ'' ಎಂದು ಸಚಿವರು ಹೇಳಿದರು.

''ಇಂದು ಉತ್ತರ ಗೋವಾದಲ್ಲಿ ಬರುವ ಅಮ್ಥಾನೆ ಅಣೆಕಟ್ಟು, ಅಂಜುನೆಮ್ ಅಣೆಕಟ್ಟು, ವಲ್ವಂತಿ ನದಿ ಮತ್ತು ಉಸ್ತೆ ನದಿ ಮತ್ತು ಗಂಜೆಮ್ ಅಣೆಕಟ್ಟು, ಓಪಾ ನದಿ, ಕುಂಭರ್ಜುವಾ ಕಾಲುವೆ ಮತ್ತು ಸರ್ಮಾನಸ್ ಪ್ರದೇಶಗಳಿಗೆ ನೀಡಲಿದ್ದಾರೆ. ನೆರೆ ರಾಜ್ಯವು ಅಣೆಕಟ್ಟು ನಿರ್ಮಿಸಲು (ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಮಹದಾಯಿ ನದಿ ನೀರನ್ನು ತಿರುಗಿಸಲು) ಪ್ರಸ್ತಾಪಿಸಿರುವ ಕರ್ನಾಟಕದ ಕಣಕುಂಬಿ ಗ್ರಾಮಕ್ಕೂ ಸಮಿತಿಯ ಸದಸ್ಯರು ಭೇಟಿ ನೀಡಲಿದ್ದಾರೆ. ಗೋವಾ ಸರ್ಕಾರದ ಮನವಿಯ ಮೇರೆಗೆ ಈ ಪರಿಶೀಲನೆ ನಡೆಸಲಾಗುತ್ತಿದೆ'' ಎಂದೂ ಅವರು ವಿವರಿಸಿದರು.

ಮಹಾದಾಯಿ ನದಿ ನೀರು ವಿವಾದವೇನು?: ಮಹದಾಯಿ ನದಿ ಕರ್ನಾಟಕದಲ್ಲಿ ಹುಟ್ಟಿ ಮಹಾರಾಷ್ಟ್ರದಲ್ಲಿ ಹರಿದು ಗೋವಾದ ಪಣಜಿ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಗೋವಾ ಮತ್ತು ಕರ್ನಾಟಕ ನಡುವೆ ನದಿ ನೀರಿನ ತಿರುವು ವಿವಾದ ಇದೆ. ನೀರು ಹಂಚಿಕೆಗೆ ಸಂಬಂಧಿಸಿದಂತೆ ಅಂತಾರಾಜ್ಯ ಜಲ ವಿವಾದ ನ್ಯಾಯಾಧೀಕರಣದ ಆದೇಶವನ್ನು ಪ್ರಶ್ನಿಸಿ ಗೋವಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ:ತೀರ್ಪು ಬಂದು ಆರು ವರ್ಷವಾದ್ರೂ ಅನುಷ್ಠಾನಗೊಳ್ಳದ ಮಹದಾಯಿ ಯೋಜನೆ: ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಗೆ ಜನರ ಹಿಡಿಶಾಪ

Last Updated : Jul 6, 2024, 3:27 PM IST

ABOUT THE AUTHOR

...view details