ಕರ್ನಾಟಕ

karnataka

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ: 10 ಕೋಟಿ ನೋಂದಣಿ ಗುರಿ - BJPs membership drive

By ANI

Published : Sep 2, 2024, 8:30 PM IST

ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ನೋಂದಣಿ ಪತ್ರ ನವೀಕರಿಸುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಎರಡು ಹಂತದಲ್ಲಿ ನೋಂದಣಿ ಅಭಿಯಾನ ನಡೆಯಲಿದೆ.

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ (ANI)

ನವದೆಹಲಿ:2024ರ ಸಾಲಿನ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಚಾಲನೆ ನೀಡಿದರು. ಪಕ್ಷದ ರಾಷ್ಟ್ರಾಧ್ಯಕ್ಷ, ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಪ್ರಧಾನಿಗೆ ನೋಂದಣಿ ನವೀಕರಣ ಪತ್ರ ನೀಡಿದರು.

ಎರಡು ಹಂತದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಲಿದೆ. ಮೊದಲ ಹಂತ ಸೆಪ್ಟೆಂಬರ್​ 2 ರಿಂದ 25 ಮತ್ತು ಎರಡನೇ ಹಂತ ಅಕ್ಟೋಬರ್​ 1 ರಿಂದ 15 ರವರೆಗೆ ನಡೆಯಲಿದೆ. 10 ಕೋಟಿಗೂ ಅಧಿಕ ಜನರ ನೋಂದಣಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

ಕುಟುಂಬದ ವಿಸ್ತರಣೆ:ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಪಕ್ಷದ ಸದಸ್ಯತ್ವ ನೋಂದಣಿ ಕೇವಲ ಅಭಿಯಾನವಲ್ಲ. ಕುಟುಂಬದ ವಿಸ್ತರಣೆ, ಸೈದ್ಧಾಂತಿಕ ಆಂದೋಲನವಾಗಿದೆ. ಭಾರತೀಯ ಜನಸಂಘದಿಂದ ಹಿಡಿದು ಇಲ್ಲಿಯವರೆಗೆ ದೇಶದಲ್ಲಿ ಹೊಸ ರಾಜಕೀಯ ಸಂಸ್ಕೃತಿಯನ್ನು ತರಲು ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಹೇಳಿದರು.

ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಮತ್ತೊಂದು ಸುತ್ತಿನ ಸದಸ್ಯತ್ವ ಅಭಿಯಾನ ಆರಂಭವಾಗುತ್ತಿದೆ. ಜನರು ಅಧಿಕಾರ ನೀಡುವ ಸಂಘಟನೆ ಅಥವಾ ರಾಜಕೀಯ ಪಕ್ಷವು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅನುಸರಿಸದಿದ್ದರೆ, ಆಂತರಿಕ ಪ್ರಜಾಪ್ರಭುತ್ವ ಕಾಪಾಡಿಕೊಳ್ಳದಿದ್ದರೆ ಇಂದು ಹಲವಾರು ರಾಜಕೀಯ ಪಕ್ಷಗಳು ಎದುರಿಸುತ್ತಿರುವ ಪರಿಸ್ಥಿತಿ ಎಲ್ಲರಿಗೂ ಬರಲಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್​ ಪಕ್ಷವನ್ನು ಟೀಕಿಸಿದರು.

ಬಿಜೆಪಿ ಪ್ರಜಾಸತ್ತಾತ್ಮಕ ಪಕ್ಷ:ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ಬಿಜೆಪಿ ವಿಶ್ವದ ಅತಿ ದೊಡ್ಡ ಪಕ್ಷ ಮಾತ್ರವಲ್ಲದೇ ಒಂದು ವಿಶಿಷ್ಟ ಪಕ್ಷವಾಗಿದೆ. ಪ್ರಜಾಸತ್ತಾತ್ಮಕತೆ ಕಾಪಾಡಿಕೊಂಡಿದೆ. ಬಿಜೆಪಿಯಷ್ಟು ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಯಾವುದೇ ಪಕ್ಷವು ಸದಸ್ಯತ್ವ ಅಭಿಯಾನ ನಡೆಸುವುದಿಲ್ಲ ಎಂದರು.

ವಿಶ್ವದಲ್ಲಿಯೇ ಬಿಜೆಪಿ ಅತ್ಯಂತ ವಿಶ್ವಾಸಾರ್ಹ ರಾಜಕೀಯ ಪಕ್ಷವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಬರೀ ಸರ್ಕಾರ ರಚನೆಗಾಗಿ ಮಾತ್ರ ರಾಜಕೀಯ ಮಾಡುವುದಲ್ಲ. ಸಶಕ್ತ ಸಮಾಜವನ್ನು ರೂಪಿಸಲು ರಾಜಕೀಯ ಪಕ್ಷಗಳು ಹೋರಾಟ ನಡೆಸಬೇಕು ಎಂದರು.

ಸದಸ್ಯತ್ವ ಅಭಿಯಾನದ ಭಾಗವಾಗಿ ನೋಂದಾಯಿತ ಎಲ್ಲರೂ ತಮ್ಮ ಸದಸ್ಯತ್ವವನ್ನು ನವೀಕರಿಸಬೇಕು. ಸದಸ್ಯತ್ವ ಅಭಿಯಾನವು ಪಕ್ಷದ ನೂತನ ಅಧ್ಯಕ್ಷರ ಆಯ್ಕೆಯೊಂದಿಗೆ ಮುಕ್ತಾಯವಾಗಲಿದೆ. ಈ ಬಾರಿಯ ಅಭಿಯಾನವು 10 ಕೋಟಿ ದಾಟಲಿದೆ ಎಂದು ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಹಾವಿಕಾಸ ಅಘಾಡಿ ಸೀಟು ಹಂಚಿಕೆಯಲ್ಲಿ ಶಿವಸೇನೆ(ಉ)ಯದ್ದೇ ಪ್ರಾಬಲ್ಯ: ಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣು? - Shiv Sena Thackerays party

ABOUT THE AUTHOR

...view details