ಕರ್ನಾಟಕ

karnataka

By ETV Bharat Karnataka Team

Published : Apr 16, 2024, 10:09 AM IST

Updated : Apr 16, 2024, 12:32 PM IST

ETV Bharat / bharat

ಝೀಲಂ ನದಿಯಲ್ಲಿ ಮಗುಚಿದ ದೋಣಿ: ಮಕ್ಕಳು ಸೇರಿ 6 ಮಂದಿ ಸಾವು, ಐವರ ರಕ್ಷಣೆ - Passenger boat capsizes

ಜಮ್ಮು ಕಾಶ್ಮೀರದ ಝೀಲಂ ನದಿಯಲ್ಲಿ ದೋಣಿ ಮುಳುಗಿದ ದುರಂತ ಸಂಭವಿಸಿದೆ. ಮಕ್ಕಳು ಸೇರಿ 6 ಮಂದಿ ಬಲಿಯಾಗಿದ್ದಾರೆ.

ಝೀಲಂ ನದಿಯಲ್ಲಿ ಮಗುಚಿದ ಪ್ರಯಾಣಿಕರಿದ್ದ ದೋಣಿ
ಝೀಲಂ ನದಿಯಲ್ಲಿ ಮಗುಚಿದ ಪ್ರಯಾಣಿಕರಿದ್ದ ದೋಣಿ

ಜಮ್ಮು ಮತ್ತು ಕಾಶ್ಮೀರ:ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದ ಹೊರವಲಯದಲ್ಲಿರುವ ಗುಂಡ್‌ಬಾಲ್ ಬಟ್ವಾರಾ ಪ್ರದೇಶದ ಝೀಲಂ ನದಿಯಲ್ಲಿ ಪ್ರಯಾಣಿಕರಿದ್ದ ದೋಣಿಯೊಂದು ಮುಳುಗಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ 6 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಐವರನ್ನು ರಕ್ಷಿಸಲಾಗಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ.

ನದಿಗೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು ವಿದ್ಯಾರ್ಥಿಗಳು ಮತ್ತು ಜನರು ನದಿ ದಾಟುತ್ತಿದ್ದಾಗ ಸ್ಟೀಲ್​ ಪಿಲ್ಲರ್​ಗೆ ಡಿಕ್ಕಿ ಹೊಡೆದ ಪರಿಣಾಮ ದೋಣಿ ಮುಳುಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಇದರಲ್ಲಿ ವಿದ್ಯಾರ್ಥಿಗಳು ಸೇರಿ 25 ಮಂದಿ ಇದ್ದರು ಎಂದು ಹೇಳಲಾಗಿದೆ.

ಘಟನೆಯ ಮಾಹಿತಿ ತಿಳಿದ ನಂತರ, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಜಂಟಿ ರಕ್ಷಣಾ ತಂಡವು 5 ವಿದ್ಯಾರ್ಥಿಗಳು ಸೇರಿದಂತೆ 6 ಮೃತದೇಹಗಳನ್ನು ಹೊರತೆಗೆದಿದೆ. ಇದೇ ವೇಳೆ ಐವರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಶಕ ಕಳೆದರೂ ಪೂರ್ಣವಾಗದ ಬ್ರಿಡ್ಜ್​:ದುರಂತಕ್ಕೆ ಪ್ರಮುಖ ಕಾರಣ ನದಿಗೆ ಸೇತುವೆ ಇಲ್ಲದೇ ಇರುವುದು. ಕಳೆದ ಒಂದು ದಶಕದಿಂದ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಸ್ಥಳೀಯರು ನದಿ ದಾಟಲು ದೋಣಿಗಳನ್ನೇ ಅವಲಂಬಿಸಿದ್ದಾರೆ. ಬ್ರಿಡ್ಜ್​ ಪೂರ್ಣಗೊಂಡಿದ್ದರೆ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಜನರು ಹೇಳಿದ್ದಾರೆ. ಕಾಶ್ಮೀರ ಕಣಿವೆಯಲ್ಲಿರುವ ಝೀಲಂ ನದಿ ಕಳೆದೆರಡು ದಿನಗಳಿಂದ ರಭಸವಾಗಿ ಹರಿಯುತ್ತಿದೆ. ಇದರಿಂದ ದೋಣಿ ಸಾಗಿಸಲು ಪರದಾಡಬೇಕಿದೆ.

ಗಣ್ಯರ ಸಂತಾಪ:ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್​ ಸಿನ್ಹಾ, ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. "ಶ್ರೀನಗರದಲ್ಲಿ ನಡೆದ ದೋಣಿ ದುರಂತದಲ್ಲಿ ಪ್ರಾಣಹಾನಿ ಸಂಭವಿಸಿರುವುದು ತೀವ್ರ ದುಃಖ ತಂದಿದೆ. ಎಸ್​ಡಿಆರ್​ಎಫ್​, ಸೇನೆ ಮತ್ತು ಇತರ ರಕ್ಷಣಾ ಸಿಬ್ಬಂದಿಗಳ ತಂಡ ಪರಿಹಾರ ಮತ್ತು ರಕ್ಷಣಾ ಕಾರ್ಯಗಳನ್ನು ನಡೆಸುತ್ತಿದೆ ಎಂದು ಲೆಫ್ಟಿನೆಂಟ್​ ಗವರ್ನರ್​ ಮನೋಜ್​ ಸಿನ್ಹಾ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಸ್ಥಳೀಯ ಆಡಳಿತವು ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿದೆ. ಗಾಯಗೊಂಡವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇನೆ. ರಕ್ಷಣಾ ತಂಡಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್​​ನ ಒಮರ್ ಅಬ್ದುಲ್ಲಾ ದೋಣಿ ಮಗುಚಿದ ಘಟನೆಗೆ ಕಳವಳ ವ್ಯಕ್ತಪಡಿಸಿದ್ದು, ದೋಣಿಯಲ್ಲಿದ್ದವರೆಲ್ಲರನ್ನು ಸುರಕ್ಷಿತವಾಗಿ ಮತ್ತು ಶೀಘ್ರವಾಗಿ ರಕ್ಷಿಸಲೆಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ವಿದ್ಯಾರ್ಥಿಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು ಎಂದಿದ್ದಾರೆ.

ಇದನ್ನು ಓದಿ:ಚಿನ್ನ, ಬೆಳ್ಳಿ ಬೆಲೆಯಲ್ಲಿ ನಿಲ್ಲದ ಏರಿಕೆ: ಬೆಂಗಳೂರು ಸೇರಿ ರಾಜ್ಯದ ಚಿನಿವಾರು ಪೇಟೆಯಲ್ಲಿ ದರ ಹೀಗಿದೆ! - gold and silver price

Last Updated : Apr 16, 2024, 12:32 PM IST

ABOUT THE AUTHOR

...view details