ಕರ್ನಾಟಕ

karnataka

ETV Bharat / bharat

ಹಣ ದೋಚಲು ಬ್ಯಾಂಕ್​ಗೆ ನುಗ್ಗಿದ ಖದೀಮರು: ಕ್ಯಾಷಿಯರ್​ ಮೇಲೆ ಗುಂಡಿನ ದಾಳಿ - ಬ್ಯಾಂಕ್​ ದರೋಡೆ ಯತ್ನ

ಮುಸುಕುದಾರಿಗಳಿಬ್ಬರು ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ ನುಗ್ಗಿ ದರೋಡೆಗೆ ಯತ್ನಿಸಿರುವ ಘಟನೆ ಜೈಪುರದಲ್ಲಿ ನಡೆದಿದೆ.

ಹಣ ದೋಚಲು ಬ್ಯಾಂಕ್​ಗೆ ನುಗ್ಗಿದ ಖದೀಮರು
ಹಣ ದೋಚಲು ಬ್ಯಾಂಕ್​ಗೆ ನುಗ್ಗಿದ ಖದೀಮರು

By ETV Bharat Karnataka Team

Published : Feb 23, 2024, 1:11 PM IST

ಜೈಪುರ್​( ರಾಜಸ್ಥಾನ): ದುಷ್ಕರ್ಮಿಗಳಿಬ್ಬರು ಬ್ಯಾಂಕ್‌ಗೆ ನುಗ್ಗಿ ದರೋಡೆ ನಡೆಸಲು ಯತ್ನಿಸಿದ್ದಾರೆ. ಇದಕ್ಕೆ ಕ್ಯಾಷಿಯರ್ ಅಡ್ಡಪಡಿಸಿದ್ದರಿಂದ ಆತನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ಇಲ್ಲಿಯ ಝೋತ್ವಾರಾ ಪ್ರದೇಶದ ಜೋಶಿ ಮಾರ್ಗದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಘಟನೆಯಲ್ಲಿ ಬ್ಯಾಂಕ್​ ಕ್ಯಾಷಿಯರ್ ನರೇಂದ್ರ ಕುಮಾರ್​ ಎಂಬುವವರು​ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ ಜನರು ದುಷ್ಕರ್ಮಿಗಳ ಸುತ್ತುಗಟ್ಟಿ ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ, ಒಬ್ಬ ತಪ್ಪಿಸಿಕೊಂಡಿದ್ದು ಮತ್ತೋರ್ವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಯ ವಿವರ:ಝೋತ್ವಾರಾ ಎಸಿಪಿ ಸುರೇಂದ್ರ ಸಿಂಗ್ ರನೌತ್ ಪ್ರಕಾರ, ಇಂದು ಬೆಳಗ್ಗೆ ಬ್ಯಾಂಕ್​ ಓಪನ್​ ಆದ ಕೆಲ ಹೊತ್ತಿಗೆ ಇಬ್ಬರು ಮುಸುಕುದಾರಿಗಳು ಬಂದೂಕಿನೊಂದಿಗೆ ಬ್ಯಾಂಕ್​ಗೆ ನುಗ್ಗಿದ್ದಾರೆ. ದರೋಡೆ ಮಾಡುವ ಉದ್ದೇಶದಿಂದ ಶಾಖೆ ಒಳ ನುಗ್ಗಿ ಅಲ್ಲಿದ್ದ ಸಿಬ್ಬಂದಿ ಹಾಗೂ ಗ್ರಾಹಕರನ್ನು ಓರ್ವ ಬಂದೂಕು ತೋರಿಸಿ ಬೆದರಿಸತೊಡಗಿದ್ದಾನೆ. ಅಷ್ಟರಲ್ಲಿ ಮತ್ತೋರ್ವ ಕ್ಯಾಷಿಯರ್​ ಕೌಂಟರ್​ಗೆ ನುಗ್ಗಿ ಹಣ ದೋಚಲು ಮುಂದಾಗಿದ್ದಾನೆ. ಇದನ್ನು ಕ್ಯಾಷಿಯರ್​ ನರೇಂದ್ರ ಕುಮಾರ್​ ತಡೆದಿದ್ದಾರೆ. ಈ ವೇಳೆ ಮುಸುಕುದಾರಿ ಕ್ಯಾಷಿಯರ್​ ಮೇಲೆ ಗುಂಡು ಹಾರಿಸಿದ್ದಾನೆ.

ಗುಂಡಿನ ಸದ್ದು ಕೇಳುತ್ತಿದ್ದಂತೆ ಬ್ಯಾಂಕ್‌ನ ಹೊರಗೆ ಜಮಾಯಿಸಿದ್ದ ಜನ ಒಳ ಬಂದು ಇಬ್ಬರನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಓರ್ವ ತಪ್ಪಿಸಿಕೊಂಡಿದ್ದು ಮತ್ತೋರ್ವ ಸಿಕ್ಕಿಬಿದ್ದಿದ್ದಾನೆ. ಸದ್ಯ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮತ್ತೋರ್ವನಿಗಾಗಿ ಪೊಲೀಸರ ಹುಡುಕಾಟ:ತಪ್ಪಿಸಿಕೊಂಡಿರುವ ಇನ್ನೋರ್ವನನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಅಲ್ಲದೇ ಆರೋಪಿ ತಪ್ಪಿಸಿಕೊಳ್ಳದಂತೆ ನಗರದಲ್ಲಿ ಎ ಕೆಟಗರಿ ನಿರ್ಬಂಧ ಹೇರಿದ್ದಾರೆ. ಜತೆಗೆ ಪ್ರದೇಶದಲ್ಲಿರುವ ಮತ್ತು ಬ್ಯಾಂಕ್​ ಸುತ್ತಮುತ್ತ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಡಿಸಿಪಿ ಅಮಿತ್ ಕುಮಾರ್ ಮತ್ತು ಎಸಿಪಿ ಸುರೇಂದ್ರ ಸಿಂಗ್ ರನೌತ್ ಕೂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದಾರೆ.

ಕಳೆದ ತಿಂಗಳು ಶಸ್ತ್ರಸಜ್ಜಿತ ದರೋಡೆಕೋರರ ಗುಂಪೊಂದು ಆಕ್ಸಿಸ್​ ಬ್ಯಾಂಕ್​ಗೆ ನುಗ್ಗಿ ಕನಿಷ್ಠ 90 ಲಕ್ಷ ರೂಪಾಯಿ ಹಣ ದೋಚಿ ಪರಾರಿಯಾಗಿದ್ದ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿತ್ತು. ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಶಾಖೆಗೆ ನುಗ್ಗಿದ್ದ ಖದೀಮರು ಬಳಿಕ ಶಸ್ತ್ರಾಸ್ತ್ರ ತೋರಿಸಿ ಅಲ್ಲಿಯ ಸಿಬ್ಬಂದಿ ಮತ್ತು ಗ್ರಾಹಕರನ್ನು ಬೆದರಿಸಿ ಹಣ ದೋಚಿ ಪರಾರಿಯಾಗಿದ್ದರು.

ಇದನ್ನೂ ಓದಿ:ದೆಹಲಿ ಚಲೋ ಮುಂದುವರಿಕೆ ಬಗ್ಗೆ ಇಂದು ನಿರ್ಧಾರ: ಯುವ ರೈತನ ಸಾವು ಖಂಡಿಸಿ ಕರಾಳ ದಿನ

ABOUT THE AUTHOR

...view details