ಕರ್ನಾಟಕ

karnataka

ಗುಜರಾತ್‌: ಶಾಖದ ಹೊಡೆತಕ್ಕೆ ಬಿಎಸ್​ಎಫ್ ಅಧಿಕಾರಿ ಸೇರಿ ಇಬ್ಬರು ಯೋಧರ ಸಾವು - BSF jawans Dead

By PTI

Published : Jul 20, 2024, 2:04 PM IST

ಭಾರತ-ಪಾಕ್ ಗಡಿಯಲ್ಲಿ ತೀವ್ರ ಶಾಖದಿಂದಾಗಿ ಬಿಎಸ್​ಎಫ್ ಅಧಿಕಾರಿ ಹಾಗೂ ಯೋಧ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಗುಜರಾತ್‌ನ ಕಚ್​ನಲ್ಲಿ ನಡೆದಿದೆ.

Representational Image
ಸಾಂದರ್ಭಿಕ ಚಿತ್ರ (ANI Photo)

ಅಹಮದಾಬಾದ್ (ಗುಜರಾತ್‌):ಗುಜರಾತ್‌ನ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಗಡಿ ಭದ್ರತಾ ಪಡೆ (ಬಿಎಸ್​ಎಫ್​)ಯ ಅಧಿಕಾರಿ ಹಾಗೂ ಯೋಧ ಸೇರಿ ಇಬ್ಬರು ತೀವ್ರ ಶಾಖದ ಪರಿಣಾಮದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ.

ಬಿಎಸ್​ಎಫ್​ನ ಸಹಾಯಕ ಕಮಾಂಡೆಂಟ್ ವಿಶ್ವದೇವು ಮತ್ತು ಮತ್ತು ಹೆಡ್​ ಕಾನ್​ಸ್ಟೇಬಲ್ ದಯಾಳ್ ರಾಮ್ ಮೃತರೆಂದು ಗುರುತಿಸಲಾಗಿದೆ. ಅಧಿಕಾರಿ ವಿಶ್ವದೇವು ಬಿಎಸ್‌ಎಫ್‌ನ 59ನೇ ಬೆಟಾಲಿಯನ್‌ಗೆ ಸೇರಿದವರು. ಕಚ್​ನ 'ಹರಾಮಿ ನಲ್ಲಾ' ಪ್ರದೇಶದಲ್ಲಿ ಶಾಖದ ಹೊಡೆತದಿಂದ ಇಬ್ಬರೂ ಗಸ್ತು ನಡೆಸುತ್ತಿದ್ದಾಗ ಕುಸಿದು ಬಿದ್ದಿದ್ದರು. ಇಬ್ಬರನ್ನೂ ಭುಜ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಶುಕ್ರವಾರ ಶಾಖದ ಹೊಡೆತ ಮತ್ತು ನಿರ್ಜಲೀಕರಣ ಕಾರಣದಿಂದ ನಿತ್ರಾಣಗೊಂಡಿದ್ದರು. ಸಂಜೆ ವೇಳೆಗೆ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿತ್ತು. ಕಚ್ ಮತ್ತು ಹರಾಮಿ ನಲ್ಲಾ ಪ್ರದೇಶಗಳಲ್ಲಿ ಪ್ರಸ್ತುತ ತಾಪಮಾನವು 34-36 ಡಿಗ್ರಿಗಳಷ್ಟಿದ್ದು, ಆರ್ದ್ರತೆಯ ಮಟ್ಟವು ಶೇ.80-82 ರಷ್ಟಿದೆ. ವ್ಯಾಪಕ ತರಬೇತಿ ಮತ್ತು ಅನುಭವದ ಹೊರತಾಗಿಯೂ ಪರಿಸ್ಥಿತಿಯ ತೀವ್ರತೆಗೆ ಬಳಲಿ ಪ್ರಾಣ ಅರ್ಪಿಸಿದ್ದಾರೆ ಎಂದು ಬಿಎಸ್​ಎಫ್​ ವಕ್ತಾರರು ಹೇಳಿದ್ದಾರೆ. ರಾಜಸ್ಥಾನದ ಬಾರ್ಮರ್‌ನಿಂದ ಸರ್ ಕ್ರೀಕ್ ಪ್ರದೇಶ ಸೇರಿದಂತೆ ರಾನ್ ಆಫ್ ಕಚ್‌ನ ಉಪ್ಪು ಪ್ರದೇಶಗಳವರೆಗೆ ಭಾರತ-ಪಾಕ್ ಗಡಿಯ 826 ಕಿ.ಮೀ. ಬಿಎಸ್ಎಫ್ ಭದ್ರತೆಯ ಹೊಣೆ ಹೊತ್ತಿದೆ.

ಇದನ್ನೂ:ಛತ್ತೀಸ್‌ಗಢದಲ್ಲಿ ನಕ್ಸಲರಿಂದ ಐಇಡಿ ಸ್ಫೋಟ: ಇಬ್ಬರು ಯೋಧರು ಹುತಾತ್ಮ, ಗಾಯಾಳುಗಳ ಏರ್‌ಲಿಫ್ಟ್​

ABOUT THE AUTHOR

...view details