ಕೊಚ್ಚಿ (ಕೇರಳ):ಕೇರಳದಲ್ಲಿ ಕಾಂಗ್ರೆಸ್ ನಾಯಕರ ಪುತ್ರರ ಬಿಜೆಪಿ ವಲಸೆ ಮುಂದುವರಿದಿದೆ. ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕ ಕೆ. ಕರುಣಾಕರನ್ ಅವರ ಪುತ್ರಿ, ಸಂಸದ ಮುರಳೀಧರನ್ ಅವರ ಸಹೋದರಿ ಪದ್ಮಜಾ ವೇಣುಗೋಪಾಲ್ ಅವರು, ಕಮಲ ಪಕ್ಷ ಸೇರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಮುಂದಿನ ಲೋಕಸಭೆ ಚುನಾವಣೆಯ ಟಿಕೆಟ್ ಪಡೆಯುವ ಸಾಧ್ಯತೆಯೂ ಇದೆ.
ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಪದ್ಮಜಾ ಅವರು ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಕಡೆಗೆ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಖಾತೆ ಆರಂಭಿಸುವ ಗುರಿ ಹಾಕಿಕೊಂಡಿರುವ ಕಮಲ ಪಕ್ಷವೂ ಕೂಡ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆ.
ನಡ್ಡಾ ಭೇಟಿಯಾದ ಪದ್ಮಜಾ:ಪದ್ಮಜಾ ವೇಣುಗೋಪಾಲ್ ಅವರು ಈಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿದ್ದಾರೆ. ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗುರುವಾರ ಪಕ್ಷದ ಸದಸ್ಯತ್ವವನ್ನು ಔಪಚಾರಿಕವಾಗಿ ಸ್ವೀಕರಿಸಲಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಪದ್ಮಜಾ ಅವರಿಗೆ ಕೇರಳದ ಎರ್ನಾಕುಲಂ ಅಥವಾ ಚಾಲಕುಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸೂಚನೆಗಳೂ ಇವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಕೆಟಿಡಿಸಿ ಮಾಜಿ ಅಧ್ಯಕ್ಷೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಪದ್ಮಜಾ ಅವರು ಪಕ್ಷದಲ್ಲಿ ಕಡೆಗಣನೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಮುಗಿದ ರಾಜ್ಯಸಭೆ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದರು. ಆದರೆ, ಐಯುಎಂಎಲ್ ಜೊತೆ ಮೈತ್ರಿ ಕಾರಣ ಆ ಸ್ಥಾನವನ್ನು ನಿರಾಕರಿಸಲಾಗಿತ್ತು. ಇದರಿಂದ ಕಾಂಗ್ರೆಸ್ ನಾಯಕನ ಪುತ್ರಿ ಅಸಮಾಧಾನಗೊಂಡಿದ್ದರು. ಬಳಿಕ ಬಿಜೆಪಿ ಸೇರುವ ವದಂತಿಗಳು ಆರಂಭವಾಗಿದ್ದವು.