ಕುಟುಂಬ ಸಮೇತ ಐತಿಹಾಸಿಕ ಹಂಪಿಗೆ ಭೇಟಿ ನೀಡಿದ ಯದುವೀರ ಒಡೆಯರ್
ವಿಜಯನಗರ: ಜಿಲ್ಲೆಯ ಐತಿಹಾಸಿಕ ತಾಣ ಹಂಪಿಗೆ ಮೈಸೂರು ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕುಟುಂಬ ಸಮೇತ ಭೇಟಿ ನೀಡಿ ವೀಕ್ಷಿಸಿದರು. ಹಂಪಿಯ ಆರಾಧ್ಯ ದೈವ ವಿರೂಪಾಕ್ಷನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂಪಿ ಕೇವಲ ನೋಡುವ ಸ್ಥಳವಲ್ಲ, ಇಲ್ಲಿ ಇತಿಹಾಸ, ಪುರಾಣ ಎಲ್ಲವೂ ಇದೆ. ಕುಟುಂಬ ಸಮೇತ ದೇವರ ದರ್ಶನ ಮಾಡಿದ್ದೇವೆ. ವಿಜಯನಗರ ಸಾಮ್ರಾಜ್ಯಕ್ಕೂ ಮೈಸೂರು ಯದುವಂಶಕ್ಕೂ ಅವಿನಾಭಾವ ಸಂಬಂಧವಿದೆ. ವಿಜಯನಗರದ ಸಾಂಸ್ಕೃತಿಕ ಪರಂಪರೆಯನ್ನು ಮೈಸೂರು ಸಂಸ್ಥಾನ ಮುಂದುವರೆಸಿಕೊಂಡು ಬಂದಿದೆ ಎಂದು ಹೇಳಿದರು.