ಜಯಚಾಮರಾಜೇಂದ್ರ ಒಡೆಯರ್ ಮೊಮ್ಮಗಳು ಕರೆದ ಕೂಡಲೇ ಓಡೋಡಿ ಬಂದ ದಸರಾ ಆನೆ ರೋಹಿತ್ - ವೈರಲ್ ವಿಡಿಯೋ
Published : Sep 2, 2023, 7:25 PM IST
ಚಾಮರಾಜನಗರ: ಹಾಯ್ ಬೇಬಿ, ರಾಜಾ ಎಂದ ಕರೆದ ಕೂಡಲೇ ದಸರಾಗೆ ಆಯ್ಕೆಯಾಗಿರುವ ಬಂಡೀಪುರದ ರೋಹಿತ್ ಆನೆ ಓಡೋಡಿ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರುವಾರದಂದು ಮೈಸೂರಿಗೆ ದಸರಾ ಆನೆಗಳು ತೆರಳುವ ಮುನ್ನ ಮೇಯುತ್ತಿದ್ದ ರೋಹಿತ್ ಆನೆಯನ್ನು ಜಯಚಾಮರಾಜೇಂದ್ರ ಒಡೆಯರ್ ಮೊಮ್ಮಗಳು ನೋಡಿ ಮಾತನಾಡಿಸಿದ್ದಾರೆ. ಆನೆಯನ್ನು ಕರೆದ ಕೂಡಲೇ ಓಡೋಡಿ ಬಂದು ಎಲ್ಲರನ್ನು ಅಚ್ಚರಿಗೊಳಿಸಿದೆ.
ದಿ. ವಿಶಾಲಾಕ್ಷಿದೇವಿ ಅವರು ಅನಾಥವಾಗಿದ್ದ ಆರು ತಿಂಗಳ ಮರಿಯಾನೆಯನ್ನು ಬಂಡೀಪುರದ ತಮ್ಮ ರೆಸಾರ್ಟ್ ನಲ್ಲಿ 14 ವರ್ಷ ಸಾಕಿ ಅದಕ್ಕೆ ರೋಹಿತ್ ಎಂದು ನಾಮಕರಣ ಮಾಡಿದ್ದರು. ಅದಾದ ಬಳಿಕವೂ, ಆನೆ ಜೊತೆಗೆ ಈಗಲೂ ವಿಶಾಲಾಕ್ಷಿದೇವಿ ಅವರ ಮಗಳು ಶೃತಿ ಕೀರ್ತಿ ದೇವಿ ಅವರು ಅದೇ ಪ್ರೀತಿಯನ್ನಿಟ್ಟುಕೊಂಡಿದ್ದಾರೆ. ತಿಂಗಳಿಗೊಮ್ಮೆ ಬಂದು ಆನೆ ನೋಡಿಕೊಂಡು ತೆರಳುತ್ತಾರೆ. ದಸರಾಗೆ ಮೈಸೂರಿಗೆ ತೆರಳುವ ಮುನ್ನ ಶೃತಿ ಕೀರ್ತಿ ದೇವಿ ಅವರು 'ಹಾಯ್ ಬೇಬಿ, ರಾಜಾ' ಎಂದು ಕರೆದಿದ್ದು, ಆನೆ ಕೂಡಲೇ ಓಡಿ ಬಂದಿರುವುದು ಮೈಸೂರು ರಾಜಮನೆತನ ಹಾಗೂ ಪ್ರಾಣಿಗಳ ನಡುವಿನ ಅನನ್ಯ ಬಾಂಧವ್ಯಕ್ಕೆ ಸಾಕ್ಷಿಯಂತಿದೆ. ರೋಹಿತ್ ಆನೆಗೆ 17 ವರ್ಷಗಳಾಗಿದ್ದು ಹಿರಣ್ಯ ಎಂಬ ಆನೆ ಜೊತೆ ಮೈಸೂರಿಗೆ ಗುರುವಾರ ತೆರಳಿದೆ.
ಇದನ್ನೂ ಓದಿ:ಹುಟ್ಟು ಹಬ್ಬದಂದು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಕಿಚ್ಚ ಸುದೀಪ್ - ಕಾರಣ?