ಆಂಧ್ರಪ್ರದೇಶ: ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಮುಂಚಂಗಿಪುಟ್ಟು ಮಂಡಲದ ದೂರದ ಗ್ರಾಮವಾದ ದೊರಗುಡದಲ್ಲಿನ ಜನರಿಗೆ ಆಂಥ್ರಾಕ್ಸ್ ತರಹದ ರೋಗದ ಲಕ್ಷಣಗಳು ಕಾಣಿಸಿಕೊಂಡಿದೆ. ಇದು ವೈದ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ಲಕ್ಷ್ಮೀಪುರಂ ಪಂಚಾಯಿತಿಯ ಗ್ರಾಮವಾದ ದೊರಗುಡದಲ್ಲಿ ಆಂಥ್ರಾಕ್ಸ್ ರೋಗಲಕ್ಷಣಗಳಿಂದ ಹತ್ತಾರು ಮಕ್ಕಳು ಮೃತಪಟ್ಟಿದ್ದರು.
ಇತ್ತೀಚೆಗಷ್ಟೇ ಆಶಾ ಕಾರ್ಯಕರ್ತೆಯೊಬ್ಬರು ಗ್ರಾಮದಲ್ಲಿ ಮಗುವಿನ ಗಾಯಗಳನ್ನು ನೋಡಿ ಫೋಟೋ ತೆಗೆದು ವೈದ್ಯರಿಗೆ ಕಳುಹಿಸಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಸುಮಿತ್ ಕುಮಾರ್, ಗುರುವಾರ ದೊರಗುಡ್ಡದಲ್ಲಿ ವಿಶೇಷ ವೈದ್ಯಕೀಯ ಶಿಬಿರ ಆಯೋಜಿಸಿದ್ದರು. ವೈದ್ಯಾಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ವೈದ್ಯಕೀಯ ತಪಾಸಣೆ ನಡೆಸಿತು.
15 ಜನರಲ್ಲಿ ರೋಗಲಕ್ಷಣಗಳಿದ್ದರೆ, ಅವರಲ್ಲಿ ಏಳು ಜನರಲ್ಲಿ ತೀವ್ರತರವಾದ ರೋಗಲಕ್ಷಣಗಳು ಕಂಡು ಬಂದಿವೆ. ಈಗಾಗಲೇ ಅವರ ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ರಕ್ತದ ಮಾದರಿಗಳನ್ನು ವಿಶಾಖಪಟ್ಟಣಂ ಕೆಜಿಹೆಚ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.