ವಿಜಯಪುರ: 'ನೋಡ್ರೀ ಸುಮ್ಮನೆ ನನ್ನ ಕೆಣಕಬೇಡ್ರೀ. ನಾನು ಯಾರ ತಂಟೆಗೇ ಹೋಗಲ್ಲ, ನನ್ನ ತಂಟೆಗೆ ಬಂದವರನ್ನ ಸುಮ್ಮನೆ ಬಿಡಲ್ಲ' ಎಂದು ಪರೋಕ್ಷವಾಗಿ ಸ್ವಪಕ್ಷೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನಗರದ ಇಬ್ರಾಹಿಂಪುರ ರೈಲ್ವೆ ನಿಲ್ದಾಣ ಆವರಣದಲ್ಲಿ ಇಬ್ರಾಹಿಂಪುರ ಲೆವೆಲ್ ಕ್ರಾಸಿಂಗ್ ಗೇಟ್ 80ರ ಬದಲಿಗೆ ನಿರ್ಮಿಸಿರುವ ಮೇಲ್ಸೇತುವೆ ಲೋಕಾರ್ಪಣೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರಾಜಕಾರಣದಲ್ಲಿ ಕಳೆದ 45 ವರ್ಷಗಳಿಂದ ಇದ್ದೇನೆ. ಜಿಲ್ಲೆಯಲ್ಲಿ ಈಗ ರಾಜಕಾರಣ ಮಾಡುತ್ತಿರುವವರಿಗಿಂತ ಹಿರಿಯ ರಾಜಕಾರಣಿ ನಾನು. ಬಿ.ಎಂ. ಪಾಟೀಲ, ರಾಮಕೃಷ್ಣ ಹೆಗಡೆ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯದಲ್ಲಿ ಸಕ್ರಿಯ ರಾಜಕೀಯದಲ್ಲಿ ತೊಡಗಿದ್ದವರ ಜತೆ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ತಿಳಿಸಿದರು.